ಮಕರ ಸಂಕ್ರಾಂತಿ: ಮೈಸೂರಿನಲ್ಲಿ ಗಗನಕ್ಕೇರಿದ ತರಕಾರಿ-ತೆಂಗು ದರ
ಮೈಸೂರು, ಜನವರಿ 11: ಇಂಗು, ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ ಎಂಬ ನಾಣ್ಣುಡಿ ಇದೆ. ಉಪ್ಪಿನ ನಂತರ ಇಂಗಿಗೆ, ಇಂಗಿನ ನಂತರ ತೆಂಗಿಗೆ ಅಡುಗೆಯಲ್ಲಿ ಅಗ್ರ ಸ್ಥಾನ. ಆದರೆ, ಬೆಲೆ ಏರಿಕೆ ಬಿಸಿ ಈಗ ತೆಂಗಿಗೂ ತಟ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಗಾತ್ರದ ಒಂದು ತೆಂಗಿನಕಾಯಿಗೆ 20 ರೂ ದರ ಇದೆ. ಒಂದು ಕೆ.ಜಿ ಒಣಕೊಬ್ಬರಿ ಧಾರಣೆ 200 ರೂ.ದಾಟಿದೆ.
ನಗರದ ವಿವಿಧ ಕಡೆಗಳಲ್ಲಿ 30ಕ್ಕೂ ಹೆಚ್ಚು ತೆಂಗಿನಕಾಯಿ ಸಗಟು ಮಾರಾಟ ಮಳಿಗೆಗಳಿವೆ. ಜಿಲ್ಲೆಗೆ ಬರುವ ತೆಂಗಿನಕಾಯಿ ಮಾಲು ಕಡಿಮೆ ಆಗಿದ್ದರಿಂದ ಬೆಲೆ ಗಗನಮುಖಿಯಾಗಿದೆ. ತೆಂಗಿನಕಾಯಿಗೆ ದುಬಾರಿ ಬೆಲೆ ನೀಡಲಾಗದೆ ಗ್ರಾಹಕರು ಪರಿತಪಿಸುತ್ತಿದ್ದಾರೆ. ಹುಣ್ಣಿಮೆ, ಅಮಾವಾಸ್ಯೆ, ಹಬ್ಬ ಹರಿದಿನಗಳಲ್ಲಿ ಜನರು ಹೆಚ್ಚು ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸಂಕ್ರಾಂತಿಗೆ ಏನು ಮಾಡೋದು? ಏರಿದ ತರಕಾರಿಗಳ ಬೆಲೆಗೆ ತತ್ತರಿಸಿದ ಗ್ರಾಹಕರು
"ಹಬ್ಬಗಳ ಸಂದರ್ಭದಲ್ಲಿ ತೆಂಗಿನಕಾಯಿ ವ್ಯಾಪಾರ ಜೋರಾಗಿ ನಡೆಯುತ್ತದೆ. ಮೂರು ತಿಂಗಳ ಹಿಂದೆ 1 ಸಾವಿರ ತೆಂಗಿನಕಾಯಿಗೆ 8 ಸಾವಿರದಿಂದ 9 ಸಾವಿರ ಬೆಲೆ ಇತ್ತು. ಈಗ ಇದು 18 ಸಾವಿರದಿಂದ 20 ಸಾವಿರದವರೆಗೆ ಹೆಚ್ಚಿದೆ. ತೆಂಗಿನಕಾಯಿ ತೂಕ ಆಧರಿಸಿ ಮಾರಾಟ ಆಗುತ್ತಿದ್ದು, 1 ಕೆ.ಜಿಗೆ 35 ರೂ ದರ ಇದೆ. ಹಬ್ಬದಲ್ಲಿ ತೆಂಗಿನಕಾಯಿ ಬೆಲೆ ಸಾಮಾನ್ಯ ದಿನಕ್ಕಿಂತ ಹೆಚ್ಚಿರುತ್ತದೆ. ಬೆಲೆ ಏರಿಕೆ ಆದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿ ಆವಕ ಕಡಿಮೆ ಆಗಿದೆ" ಎನ್ನುತ್ತಾರೆ ತೆಂಗಿನಕಾಯಿ ವ್ಯಾಪಾರಿ ಶಿವು.
ತರಕಾರಿಗಳ ಬೆಲೆ ದಿಢೀರ್ ಹೆಚ್ಚಳ
ಕಳೆದ ಒಂದು ತಿಂಗಳಿನಿಂದ ನೀರಿನ ಅಭಾವ ಹಾಗೂ ಚಳಿಯ ಕಾರಣದಿಂದಾಗಿ ತರಕಾರಿ ಬೆಳೆಗಳ ಇಳುವರಿ ಬಹಳ ಕಡಿಮೆಯಾಗಿದ್ದು, ತರಕಾರಿಗಳ ಬೆಲೆ ದಿಢೀರ್ ಹೆಚ್ಚಳವಾಗಿದೆ. ಅದರಲ್ಲಿಯೂ ನುಗ್ಗೆಕಾಯಿ ಬೆಲೆ ಕೆಜಿಗೆ 140 ರೂ. ದಾಖಲೆ ನಿರ್ಮಿಸಿದೆ. ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಬಡವರು ಹಾಗೂ ಮಧ್ಯಮ ವರ್ಗದ ಜನತೆ ತರಕಾರಿ ರಹಿತ ಆಹಾರವನ್ನು ಬಳಸುವ ಪರಿಸ್ಥಿತಿ ಉದ್ಭವವಾಗಿದೆ.
ಸಂಕ್ರಾಂತಿಗೆ ತರಕಾರಿ, ಸೊಪ್ಪು, ಬೆಲೆ ಹೆಚ್ಚಳದ ಬಿಸಿ
ಚಳಿ ಹೆಚ್ಚಿರುವುದಕ್ಕೆ ಸಾಧ್ಯವಾಗಿಲ್ಲ
ಹುಣಸೂರು, ಕೆ.ಆರ್.ನಗರ, ಬನ್ನೂರು, ಬೋಗಾದಿ, ಜಯಪುರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಮತ್ತಿತರ ಸ್ಥಳಗಳಿಂದ ಮೈಸೂರಿನ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತದೆ. ಕೆಲ ರೈತರು ಮಳೆಯಾಧಾರಿತ ರೀತಿಯಲ್ಲಿ ತರಕಾರಿಗಳನ್ನು ಬೆಳೆದರೆ, ಬಹುತೇಕ ರೈತರು ಪಂಪಸೆಟ್ ನೀರಿನಲ್ಲಿ ಬೆಳೆಯುತ್ತಿದ್ದಾರೆ. ತರಕಾರಿ ಮಾರಾಟವನ್ನೇ ಅವಲಂಬಿಸಿರುವ ಕೆಲವು ರೈತರು ಸ್ವಲ್ಪ ಮಟ್ಟಿಗಿನ ನೀರನ್ನೇ ಬಳಸಿಕೊಂಡು ಸಾಧ್ಯವಾದಷ್ಟು ತರಕಾರಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರಾದರೂ ಈ ಬಾರಿ ಚಳಿ ಹೆಚ್ಚಾದ ಕಾರಣ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಿಲ್ಲ. ನಾವುಗಳು ಪ್ರತಿನಿತ್ಯ ಬಳಸುವ ಹುರಳೀಕಾಯಿ, ಪಡುವಲಕಾಯಿ, ಸೌತೆಕಾಯಿ, ನುಗ್ಗೆಕಾಯಿ, ಕ್ಯಾರೆಟ್, ಹೂಕೋಸು, ಮೆಣಸಿನಕಾಯಿ, ಬದನೆಕಾಯಿ, ಹೀರೇಕಾಯಿ, ಕುಂಬಳಕಾಯಿ, ಹಸಿ ಬಟಾಣಿ ಮತ್ತಿತರ ತರಕಾರಿಗಳ ಬೆಲೆಗಳು ಖರೀದಿಸಬೇಕೆ? ಬೇಡವೆ? ಎಂಬುವಷ್ಟರ ಮಟ್ಟಿಗೆ ಏರಿಕೆಯಾಗಿವೆ.
ಅಟ್ಟ ಏರಿದೆ ತರಕಾರಿ, ತೈಲ ಬೆಲೆ- ಅದನ್ನೇ ಹೇಳುತ್ತಿದೆ ಸರಕಾರಿ ದಾಖಲೆ
ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿವೆ
ಜಾಮ್ ಟೊಮ್ಯಾಟೋ ಕೆ.ಜಿ.ಗೆ 20 ರೂ.ಇದ್ದದ್ದು 60 ರೂ. ಆಗಿದೆ. ಪಡುವಲ, ಕುಂಬಳ ಮತ್ತಿತರ ತರಕಾರಿಗಳು ಹಿಂದಿನ ದರದ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿವೆ. ವಿಪರ್ಯಾಸವೆಂದರೆ ಕೇವಲ 2 ರೂ.ಗೆ ದೊರಕುತ್ತಿದ್ದ ಕೊತ್ತಂಬರಿ ಹಾಗೂ ಕರಿಬೇವು,ಸಬ್ಬಸಿಗೆ, ದಂಟು, ಪಾಲಕ್, ಕೀರೆ ಮತ್ತಿತರ ಸೊಪ್ಪುಗಳ ಬೆಲೆ ಒಂದು ಕಟ್ಟಿಗೆ 5 ರಿಂದ 6 ರೂ.ವರೆಗೆ ಏರಿಕೆಯಾಗಿದೆ. ಕೆಲ ಬಡಾವಣೆಗಳ ಮಳಿಗೆಗಳಲ್ಲಿ ಸೊಪ್ಪುಗಳು ಮಾರಾಟವಾಗದೆ ಉಳಿದುಕೊಂಡರೆ ಕೆಡುತ್ತವೆ ಎಂಬ ಕಾರಣಕ್ಕಾಗಿ ಸೊಪ್ಪುಗಳ ಮಾರಾಟವನ್ನೇ ನಿಲ್ಲಿಸಿದ್ದಾರೆ. ಏಲಕ್ಕಿ ಬಾಳೆ ಕನಿಷ್ಠ ಕೆಜಿಗೆ 50 ರೂ. ಗಳಾಗುತ್ತಿತ್ತು. ಆದರೆ, ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬಾಳೆ ಬೆಳೆ ಹೆಚ್ಚಾದ ಕಾರಣ ಬೆಲೆ ಕುಸಿತ ಕಂಡಿದೆ. ಜಿಲ್ಲಾ ಹಾಪ್ಕಾಮ್ಸ್ ನಲ್ಲಿ ಏಲಕ್ಕಿ ಬಾಳೆ ಕೆಜಿಗೆ 36 ರೂ. ಗಳಾದರೆ, ತಳ್ಳುಗಾಡಿಗಳಲ್ಲಿ ಕೆಜಿ ಬಾಳೆ ಹಣ್ಣು 25 ರೂ. ಗಳಿಗೆ ಮಾರಾಟವಾಗುತ್ತಿದೆ. ಪಚ್ಚಬಾಳೆ ಹಾಪ್ಕಾಮ್ಸ್ ನಲ್ಲಿ ಕೆಜಿಗೆ 18 ರೂ. ಗಳಾದರೆ, ತಳ್ಳುಗಾಡಿಗಳಲ್ಲಿ 20 ರೂ.ಗಳಿಗೆ ಮಾರಾಟವಾಗುತ್ತಿದೆ. ಕಳೆದ 1 ತಿಂಗಳ ಹಿಂದೆ ಏಲಕ್ಕಿ ಬಾಳೆ ಕೆಜಿ 50ರಿಂದ 60 ರೂ.ಗೆ ಮಾರಾಟವಾಗುತ್ತಿತ್ತು. ಆದರೀಗ ಕೆಜಿಗೆ 34 ರೂ.ಗೆ ಕುಸಿತವಾಗಿದೆ. ಬೂದುಬಾಳೆ ಕೆಜಿಗೆ 32 ರೂ., ಮದರಂಗಿ ಬಾಳೆ ಕೆಜಿಗೆ 30 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಪೇರಲಹಣ್ಣಿಗೆ ಭಾರೀ ಬೇಡಿಕೆ
ಮಾರುಕಟ್ಟೆಯಲ್ಲಿ ಈ ವಾರ ಮಜಬೂತು ಗಾತ್ರದ ಪೇರಲಹಣ್ಣು ಬಂದಿರುವುದು, ಸೇಬು ಹಣ್ಣಿಗೆ ಪೈಪೋಟಿ ನೀಡಿರುವುದು ವಿಶೇಷ. ಪ್ರತಿ ಕೆಜಿಗೆ 80ರಿಂದ 100 ರೂ ದರ ನಿಗದಿಯಾಗಿದ್ದು, ಕೆ.ಜಿ.ಗೆ ಕೇವಲ ಎರಡು ಹಣ್ಣು ದೊರೆತರೂ, ಗ್ರಾಹಕರು ನಿರಾಶರಾಗದೆ ಖರೀದಿಸುತ್ತಿದ್ದುದು ನಗರದ ಹಲವೆಡೆ ಕಂಡುಬಂತು. ಪೇರಲಹಣ್ಣನ್ನು ತಾಲ್ಲೂಕಿನ ಕೆಲವು ರೈತರು ಬೆಳೆಯುತ್ತಿದ್ದು, ಅದರೊಂದಿಗೆ, ಹೈದರಾ ಬಾದ್ ನಿಂದ ತರಿಸಿದ ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಧುಮೇಹ ಮತ್ತು ರಕ್ತದೊತ್ತಡ ಉಳ್ಳವರಿಗೆ ಈ ಹಣ್ಣು ಸೇವನೆ ಉತ್ತಮ ಪರಿಣಾಮ ಬೀರುವುದರಿಂದಲೂ ಬೇಡಿಕೆ ಹೆಚ್ಚಿದೆ. ಆದರೆ ಸೇಬು ಮೂಸಂಬಿಗೆ ಬೇಡಿಕೆ ತಗ್ಗಿದೆ.
ದ್ರಾಕ್ಷಿ ಹೆಚ್ಚಿನ ಪ್ರಮಾಣದಲ್ಲಿ ಆಮದು
ವರ್ಷಾರಂಭದಿಂದ ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶ ಸೇರಿದಂತೆ ವಿವಿಧ ಶುಭಕಾರ್ಯಗಳು ಹೆಚ್ಚಾಗಿರುವುದರಿಂದ ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಎಲ್ಲ ಶುಭಕಾರ್ಯಗಳಲ್ಲಿ ಊಟ, ಪೂಜೆಗಾಗಿ ತರಕಾರಿ ಅಗತ್ಯವಾಗಿ ಬೇಕು. ಹೀಗಾಗಿ ತರಕಾರಿಗಳ ದರ ದಿಢೀರ್ ಹೆಚ್ಚಳವಾಗಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಗುರುವಾರ ವ್ಯಾಪಾರ ವಹಿವಾಟು ಜೋರಾಗಿತ್ತು. ಮಾರುಕಟ್ಟೆಯಲ್ಲಿ ಈ ವಾರ ದ್ರಾಕ್ಷಿ ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿದೆ. ಕಳೆದ ವಾರ ದ್ರಾಕ್ಷಿ ಪೂರೈಕೆ ಕಡಿಮೆ ಇದ್ದಿದ್ದರಿಂದ ದರ ಹೆಚ್ಚಿತ್ತು. ಸದ್ಯ ದರ ಕಡಿಮೆಯಾಗಿದೆ. ಮಾರುಕಟ್ಟೆ ಹಾಗೂ ರಸ್ತೆಯ ಅಲ್ಲಲ್ಲಿ ಗುರುವಾರ ದ್ರಾಕ್ಷಿ ಹಾಗೂ ಕಪ್ಪು ದ್ರಾಕ್ಷಿ ಮಾರಾಟ ಮಾಡುವುದು ಕಂಡುಬಂತು. ದ್ರಾಕ್ಷಿ ಕೆ.ಜಿ.ಗೆ 80 ರಿಂದ 100 ಹಾಗೂ ಕಪ್ಪು ದ್ರಾಕ್ಷಿ 150 ರಿಂದ 160 ರೂ ಇದೆ.