ವೀರಪ್ಪನ್ ಸಹಚರ ಬಿಲವೇಂದ್ರನ್ ಮೈಸೂರಿನಲ್ಲಿ ನಿಧನ
ಮೈಸೂರು, ಆ. 20: ಕಡುಕಪ್ಪು, ಗಟ್ಟಿಯಾದ ಒಣಕಲ ದೇಹ, ದಪ್ಪಮೀಸೆ, ವ್ಯಾಘ್ರ ನೋಟದ ವನ ಸಂಚಾರಿ, ಕಾಡುಗಳ್ಳ ಕೂಸೆ ಮುನಿಸ್ವಾಮಿ ವೀರಪ್ಪನ್ ಎಂಬ ಕುಖ್ಯಾತ ಮತ್ತು ಭಯಾನಕ ಪ್ರತಿಭೆಯ ಹೆಸರು ಕೇಳಿದರೆ ಸಾಕು ಇಂದಿಗೂ ಅದೇನೋ ಒಂದು ಬಗೆಯ ಕುತೂಹಲ, ಆಸಕ್ತಿ. ಕೇವಲ 17 ವರ್ಷಕ್ಕೆ ಪ್ರಾಣಿಗಳನ್ನು ಬೇಟೆ ಆಡುತ್ತಾ, ಗಂಧದ ಮರಗಳನ್ನು ಕಡಿಯುತ್ತಾ 1970ರಲ್ಲಿ ಕಳ್ಳಸಾಗಣೆ ಗುಂಪೊಂದನ್ನು ಸೇರುವ ವೀರಪ್ಪನ್ ಆನಂತರ 2004ರವರೆಗೆ ನಡೆಸಿದ ಅಟ್ಟಹಾಸ, ಹತ್ಯೆಗಳು, ಅಪಹರಣ ಎಲ್ಲವೂ ಚರಿತ್ರೆಯ ಪುಟದಲ್ಲಿ ದಾಖಲಾಗಿರುವುದು ತಿಳಿದಿರುವ ವಿಷಯವೇ. ಈತನ ಅಟ್ಟಹಾಸಕ್ಕೆ ಕೆಲವು ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಕೆಲ ಅಮಾಯಾಕರು ಬಲಿಯಾದರು. ಇನ್ನು ಕೆಲವರು ಈತನ ಸಹವಾಸ ಮಾಡಿ ಸಂಸಾರವನ್ನು ನಡುನೀರಿನಲ್ಲಿ ಬಿಟ್ಟು ಜೈಲು ಪಾಲಾದರು.
ಈ ಪೈಕಿ ಪಾಲಾರ್ ಬಾಂಬ್ ಸ್ಪೋಟದ ಭಾಗಿದಾರ ಬಿಲವೇಂದ್ರನ್ ಕೂಡ ಒಬ್ಬ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲವೇಂದ್ರನ್ (70) ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಿನ್ನೆ ಮಧ್ಯರಾತ್ರಿ ಸಾವನ್ನಪ್ಪಿದ್ದಾನೆ. ಈ ಬಿಲವೇಂದ್ರನ್ 1993ರ ಬಾಂಬ್ ಬ್ಲಾಸ್ಟ್ ಪ್ರಮುಖ ಆರೋಪಿ. ಪ್ರಕರಣದಲ್ಲಿ 22 ಪೊಲೀಸರು ಸಾವನ್ನಪ್ಪಿದ್ದರು.
ಆರೋಪಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿತ್ತು. ನಂತರ 2014ರಲ್ಲಿ ಅದನ್ನು ಜೀವಾವದಿ ಶಿಕ್ಷೆಗೆ ಮಾರ್ಪಡಿಸಲಾಗಿತ್ತು.
2014ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮೈಸೂರಿನ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಒಂದು ವಾರದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಬಿಲವೇಂದರ್ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.