'ಸಿದ್ದರಾಮಯ್ಯ ಹಠಾವೋ ಕರ್ನಾಟಕ ಬಚಾವೋ’ ಜನಾಂದೋಲನ
ಮೈಸೂರು, ಡಿಸೆಂಬರ್ 23 : ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಅವರ ಆಡಳಿತ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿ ವೀರ ಕನ್ನಡಿಗ ಮಕ್ಕಳ ಬಳಗವು ರಾಜ್ಯಾದ್ಯಂತ 'ಸಿದ್ದರಾಮಯ್ಯ ಹಠಾವೋ ಕರ್ನಾಟಕ ಬಚಾವೋ' ಜನಾಂದೋಲನವನ್ನು ನಡೆಸಲು ತೀರ್ಮಾನಿಸಿದೆ.
ಗುರುವಾರ ಮೈಸೂರಿನ ಗಾಂಧಿ ವೃತ್ತದಲ್ಲಿ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು. ಕೆಲವು ಪ್ರಾಮಾಣಿಕ ಮಂತ್ರಿಗಳು ಕೇವಲ ನಾಮಾಂಕಿತ ಮಂತ್ರಿಗಳಾಗಿ ಭ್ರಷ್ಟಾಚಾರವನ್ನು ಸಹಿಸಕೊಂಡು ಕೂತಿರುವುದು ಖಂಡನೀಯ ಎಂದು ಸಂಘಟನೆಯ ಅಧ್ಯಕ್ಷ ಎಸ್.ಸಿ. ರಾಜೇಶ್ ವಿಷಾದ ವ್ಯಕ್ತಪಡಿಸಿದರು.
ಇತ್ತೀಚಿಗೆ ನಡೆದ ಇಡಿ ಮತ್ತು ಐಟಿ ದಾಳಿಯಿಂದಾಗಿ ಆಡಳಿತ ಪಕ್ಷದ ಕೆಲವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಗಿದ್ದರೂ ಸಂಬಂಧಪಟ್ಟ ಇಲಾಖೆಗಳ ಮಂತ್ರಿಗಳು ಮೌನವಹಿಸಿರುವುದು ಅವರ ನಿಷ್ಕ್ರಿಯತೆಗೆ ಜ್ವಲಂತ ಸಾಕ್ಷಿ.
ರೈತರ ಸಾಲಮನ್ನಾ ಮತ್ತು ಬರಗಾಲವನ್ನು ನಿಭಾಯಿಸಲು ಸರಕಾರವು ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳ ವಿರುದ್ಧ ಕೈಗೊಂಡಿರುವ ಹೋರಾಟಕ್ಕೆ ರಾಜ್ಯದ ಎಲ್ಲ ಸಂಘಟನೆಗಳು ಸಹಕಾರ ನೀಡಿ ಈ ರಾಜ್ಯವನ್ನು ಲೂಟಿಕೋರರ ಸಂತೆಯಿಂದ ಮುಕ್ತಗೊಳಿಸಲು ಮುಂದಾಗಬೇಕೆಂದು ಹೇಳಿದರು.