ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ವಾಟಾಳ್ ನಾಗರಾಜ್ ವಿರೋಧ
ಮೈಸೂರು, ಏಪ್ರಿಲ್ 8: ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಲುವಾಗಿ ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಿಸುವುದನ್ನು ವಿರೋಧಿಸಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡ್ತೀನಿ ಅಂತ ಬಂದಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮೈಸೂರಿನಲ್ಲಿ ಹೆಲಿಕಾಪ್ಟರ್ ಹಾರಾಟ ಮಾಡಬಾರದು. ಹೆಲಿಕಾಪ್ಟರ್ ಹಾರಿಸಿದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ
ಹೆಲಿ ಟೂರಿಸಂ ಮಾಡುವ ಸಲುವಾಗಿ ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಇದೆ. ಆದರೆ ಮರಗಳನ್ನು ಕಡಿದರೆ ಲಲಿತ್ ಮಹಲ್ ಅರಮನೆಯ ಸೌಂದರ್ಯ ಹಾಳಾಗಲಿದೆ. ಈ ಕಾರಣದಿಂದ ಪರಿಸರಕ್ಕೆ ಹಾನಿ ಮಾಡಿ, ಹೆಲಿ ಟೂರಿಸಂ ಮಾಡುವ ನಿರ್ಧಾರ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಲ್ಲದೇ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಹುಚ್ಚರ ಸಂತೆಯಾಗಿದೆ. ಯಾವ ಒಬ್ಬ ಮಂತ್ರಿಯಾದರೂ, ಅತ್ಯಂತ ಪ್ರಾಮಾಣಿಕವಾಗಿ ಮಾತನಾಡುವುದು ಕಂಡುಬಂದಿಲ್ಲ. ರಾಜ್ಯದಲ್ಲಿ ಮಂತ್ರಿಗಳಿಗಳಿಗೆ ಹಿತಿಮಿತಿ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ದಿವಾಳಿಯಾಗಿ ದಿಕ್ಕೆಟ್ಟಿದೆ. ಅಧಿವೇಶನದಲ್ಲಿ ಬಜೆಟ್ ಬಗ್ಗೆ ಸಮಗ್ರ ಚರ್ಚೆ ಆಗಲಿಲ್ಲ. ಇಲಾಖಾವಾರು ಬೇಡಿಕೆ ಚರ್ಚೆ ಮಾಡಲಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಮಹಾಭಾರತದ ಬಕಾಸುರನಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಎಲ್ಲ ನಂದೇ ಅಂತಿದ್ದಾರೆ. ನಾನು ಹೇಳಿದ್ದೆ ಸರಿ ಎನ್ನುವ ಧೋರಣೆ ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದರು.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಡ್ರಗ್ ಕೇಸ್ ಸತ್ತೆ ಹೋಯ್ತು ಬದುಕೆ ಇಲ್ಲ. ಅದೇ ರೀತಿಯಲ್ಲಿ ಸಿಡಿ ವಿಚಾರ ಸತ್ತು ಹೋಗುತ್ತದೆ. ಯಡಿಯೂರಪ್ಪ ಸಿಡಿ ಡೈರಕ್ಟರ್ ಇದ್ದಂಗೆ. ಈ ಸಿಡಿ ಸಿನಿಮಾವನ್ನು ಮುಚ್ಚಿಹಾಕ್ತಾರೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.
ಇನ್ನು, ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಶ್ವರಪ್ಪ ಅವರು ಯಡಿಯೂರಪ್ಪನನ್ನು ಮತ್ತೆ ಬಿಜೆಪಿ ಕರೆತಂದರು. ಆದರೆ ಯಡಿಯೂರಪ್ಪ ಈಶ್ವರಪ್ಪನನ್ನು ನಿರ್ಲಕ್ಷಿಸಿದರು. ಯಡಿಯೂರಪ್ಪಗೆ ಕುಟುಂಬ ವ್ಯಾಮೋಹ ಜಾಸ್ತಿ ಇದೆ. ಈ ಕಾರಣದಿಂದ ಯಡಿಯೂರಪ್ಪ ಅಂಡ್ ಕಂಪನಿ ಮೊದಲು ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.