ಮೈಸೂರಿನ ಲ್ಯಾನ್ಸ್ ಡೌನ್ ಕಟ್ಟಡ ಹಾಗೇ ಉಳಿಸಿ
ಮೈಸೂರು, ಫೆಬ್ರವರಿ 6 : ಲ್ಯಾನ್ಸ್ ಡೌನ್ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿಯೇ ಉಳಿಸಿಕೊಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಮೆರವಣಿಗೆ, ಮೈಸೂರಿನ ಚಿಕ್ಕ ಗಡಿಯಾರದ ಎದುರು ಪ್ರತಿಭಟನೆ ನಡೆಸಿದವು.
ನಾಗರಿಕ ಹಕ್ಕು ರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ, ವಿಶ್ವ ಋಷಿ ವಾಲ್ಮೀಕಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಟನೆ ನಡೆಯಿತು. ನಂತರ ಮಾತನಾಡಿ, ಮೈಸೂರಿನ ದೇವರಾಜ ಅರಸು ಮಾರುಕಟ್ಟೆ ತಲತಲಾಂತರದಿಂದಲೂ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು, ಕೂಲಿಕಾರ್ಮಿಕರು, ನೌಕರರು ಅವರ ಪರಿವಾರ ಸೇರಿ 20ಸಾವಿರಕ್ಕೂ ಹೆಚ್ಚು ಜನರ ಜೀವನಾಡಿಯಾಗಿದೆ ಹೀಗಾಗಿ ಮಾರುಕಟ್ಟೆಯನ್ನು ಹಂತ ಹಂತವಾಗಿ ನವೀಕರಣಗೊಳಿಸಬೇಕು ಎಂದರು.
ದೇವರಾಜ ಮಾರುಕಟ್ಟೆಯ ಉತ್ತರ ದಿಕ್ಕಿನ ಮುಖ್ಯದ್ವಾರದ ಒಂದು ಮೂಲೆಯಲ್ಲಿ ಶಿಥಿಲವಾಗಿದ್ದನ್ನೇ ನೆಪವೊಡ್ಡಿ ಇಡೀ ಮಾರುಕಟ್ಟೆಯನ್ನೇ ನೆಲಸಮಗೊಳಿಸಿ ಮತ್ತೆ ಮಾರುಕಟ್ಟೆಯನ್ನು ನಿರ್ಮಾಣ ಮಾಡುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಬಳಿಕ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಹಾಸ್ಟೆಲಿನಲ್ಲಿ ಭೋಜನ ಶುಲ್ಕ: ಪ್ರತಿಭಟನೆ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ಹೆಚ್ಚಿಸಿರುವ ಭೋಜನ ಶುಲ್ಕವನ್ನು ಹಿಂಪಡೆಯುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಸೋಮವಾರ ವಿವಿ ಕಾರ್ಯಸೌಧದ ಎದುರು ನಡೆದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ ಹಾಸ್ಟೆಲ್ ನಲ್ಲಿ ವಾಸವಿರುವ ವಿದ್ಯಾರ್ಥಿಗಳು ಹಿಂದುಳಿದವರು ಮತ್ತು ಮಧ್ಯಮವರ್ಗಗಳಿಗೆ ಸೇರಿದವರು. ಶುಲ್ಕ ರು. 400ರ ಗಳನ್ನು ಭರಿಸಲು ಅಸಮರ್ಥರಾಗಿರುತ್ತಾರೆ. ಆಹಾರದ ಗುಣಮಟ್ಟ ಹೆಚ್ಚಿಸುವ ಭರವಸೆ ನೀಡಿ ಶುಲ್ಕ ಹೆಚ್ಚಿಸಲಾಗಿದೆ. ಆದರೆ ಈ ಹಿಂದೆ ನೀಡಲಾಗುತ್ತಿದ್ದ ಶುಲ್ಕಕ್ಕೆ ನೀಡಬೇಕಾಗಿದ್ದ ಗುಣಮಟ್ಟದ ಆಹಾರ ನೀಡದೇ ವಿದ್ಯಾರ್ಥಿಗಳನ್ನು ವಂಚಿಸಿದ್ದಾರೆ ಎಂದರು.
ನಮ್ಮನ್ನು ನಮ್ಮ ತಂದೆ ತಾಯಿಗಳು ಕಷ್ಟಪಟ್ಟು ಓದೋದಿಕ್ಕೆ ಕಳುಹಿಸುತ್ತಾರೆ. ಈ ರೀತಿ ಮೆಸ್ ಬಿಲ್ ಜಾಸ್ತಿ ಮಾಡುತ್ತಿದ್ದರೆ ಅವರು ಎಲ್ಲಿಂದ ಹಣ ಭರಿಸಬೇಕು ಎಂದು ಪ್ರಶ್ನಿಸಿದರು. ಭೋಜನ ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕು. ಹಾಸ್ಟೆಲ್ ಪ್ರವೇಶಾತಿ ಶುಲ್ಕ ತೆಗೆದು ಹಾಕಬೇಕು. ಹಾಸ್ಟೇಲ್ ನಿರ್ವಹಣೆಯನ್ನು ಪೂರ್ತಿಯಾಗಿ ವಿಶ್ವವಿದ್ಯಾನಿಲಯವೇ ವಹಿಸಿಕೊಳ್ಳಬೇಕು. ಹಾಸ್ಟೇಲ್ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.