ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು
ಮೈಸೂರು, ಫೆಬ್ರವರಿ 14: ಮೈಸೂರಿನ ಬೃಂದಾವನ, ಕೆರೆ, ಅರಮನೆ ಎಲ್ಲವೂ ಒಂದೊಂದು ಪ್ರೇಮ ನಿವೇದನೆಯ ಕಥೆಯನ್ನು ಹಾಗೆಯೇ ತೆರೆದಿಡುತ್ತವೆ. ಇಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಅದೆಷ್ಟೋ ಮಂದಿ ಸತಿ - ಪತಿಗಳಾಗಿದ್ದಾರೆ. ಅನೇಕ ಚಿತ್ರಗೀತೆಗಳ ಹಾಡಿನ ಶೂಟಿಂಗ್, ಸಾಲುಗಳು ಮೈಸೂರನ್ನೇ ಪ್ರತಿನಿಧಿಸುತ್ತದೆ ಕೂಡ.
ಪ್ರವಾಸಿ ತಾಣಗಳಲ್ಲಿ, ಪ್ರಕೃತಿ ಮಡಿಲಿನಲ್ಲಿ ಅಡ್ಡಾಡಿ ಪ್ರೇಮದ ಹೊನಲಿನಲ್ಲಿ ತೇಲಾಡಲು ಮೈಸೂರಿಗೆ ಬರುವ ಪ್ರೇಮಿಗಳಿಗೆ ಮಾರ್ಗಸೂಚಕನಂತೆ ಅನೇಕ ಪ್ರೀತಿಯ ಹಾಡುಗಳು ಹಾಗೆ ಹಾದು ಹೋಗುತ್ತದೆ. ಇಂದು ಫೆ.14 ಪ್ರೇಮಿಗಳ ದಿನ. ಪ್ರೇಮಲೋಕವೇ ಧರೆಯಲ್ಲಿ ವಿಜೃಂಭಿಸುತ್ತದೆ.
ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು
ಪ್ರಿಯಕರನ/ಪ್ರೇಯಸಿಯ ಜೊತೆಯಲ್ಲಿ ಕಳೆದ ಕ್ಷಣಗಳನ್ನು ಮನದೊಳಗೆ ಬಚ್ಚಿಟ್ಟು, ಆಗಾಗ ಕಣ್ಮುಂದೆ ತಂದುಕೊಂಡು ಆನಂದಿಸ ಬಯಸುವವರು ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇಲ್ಲಿ ಪ್ರೇಮಿಗಳಿಗೆ ಸಾಕಷ್ಟು ಪ್ರೇಮ ತಾಣಗಳಿವೆ. ಚಾಮುಂಡಿಬೆಟ್ಟ, ಅರಮನೆ, ಕುಕ್ಕರಹಳ್ಳಿ ಕೆರೆ, ಮೃಗಾಲಯ, ಕಾರಂಜಿಕೆರೆ ಮೈಸೂರಿನಲ್ಲೇ ವೀಕ್ಷಿಸಬಹುದಾದ ಸ್ಥಳಗಳು.
ಚಾಮುಂಡಿಬೆಟ್ಟದ ದೊಡ್ಡದೊಡ್ಡ ಕಲ್ಲುಬಂಡೆಗಳ ಮೇಲೆ ಹೃದಯ ಸ್ಥಾಪಿಸಿ ಅದರೊಳಗೆ ತನ್ನೊಲವಿನರಸ, ಅರಸಿಯರ ಹೆಸರು ಕೆತ್ತಿ ಪ್ರೇಮ ಶಿಲಾಶಾಸನ ಬರೆಯಲು, ಕಲ್ಲಪೊಟರೆಯಲ್ಲಿ ಅವಿತು ಪ್ರೇಮ ಸಲ್ಲಾಪವಾಡಲು, ಆಕಾಶದೆತ್ತರಕ್ಕೆ ತಲೆಯೆತ್ತಿ ನಿಂತ ಬೆಟ್ಟದಲ್ಲಿ ಕೈಕೈಹಿಡಿದು ತಳದ ಸಣ್ಣಸಣ್ಣ ಮನೆಗಳು-ಮರಗಿಡಗಳ ನೋಡಿ ಪ್ರೇಮದ ಎತ್ತರವನ್ನು ಸಂಭ್ರಮಿಸುವುದು ಅದೆಷ್ಟು ಹಿತಕರ!?
ವಿಹಾರಕ್ಕೆ ಹೇಳಿ ಮಾಡಿಸಿದ ಜಾಗ
ಕುಕ್ಕರಹಳ್ಳಿ ಕೆರೆ ತಾಣ ಪ್ರೇಮಿಗಳ ವಿಹಾರಕ್ಕೆ ಹೇಳಿ ಮಾಡಿಸಿದ್ದು. ವಿಸ್ತಾರ ಕೆರೆಯ ಅಂಚಿನ ಕಾಲುದಾರಿಯಲ್ಲಿ ಪ್ರಿಯಕರನ ತೋಳನ್ನು ಬಳಸಿ ಸಾಗುತ್ತಾ, ಅಲ್ಲಲ್ಲಿ ಮರಗಿಡದಲ್ಲಿ ಕುಳಿತು ಕೆರೆಯಲ್ಲಿ ಈಜುತ್ತಾ ಗೋಚರಿಸುವ ಬಣ್ಣಬಣ್ಣದ ಹಕ್ಕಿಪಕ್ಷಿಗಳನ್ನು ಕಣ್ತುಂಬಿಕೊಂಡು ಗಾಳಿಯ ತಂಪನ್ನು ಆಸ್ವಾದಿಸಿ ಆನಂದಿಸುವುದೇ ಪ್ರೇಯಸಿಗೆ ಸೊಗಸು.
ಪ್ರೇಮಿಗಳ ತಾಣವೆಂದು ಹೆಸರು
ಇನ್ನು ಕಾರಂಜಿಕೆರೆ ಪ್ರೇಮಿಗಳ ತಾಣ ಎಂದೇ ಹೆಸರಾಗಿದೆ. 90 ಎಕರೆ ವಿಸ್ತೀರ್ಣದ ಕೆರೆಯಲ್ಲಿ 55 ಎಕರೆಯಲ್ಲಿ ನೀರೇ ತುಂಬಿದೆ. ಅಲ್ಲಿ ಪ್ರಕೃತಿಯ ಸೌಂದರ್ಯಕ್ಕಿಂತ ಉದ್ಯಾನದ ಸೊಬಗೇ ಹೆಚ್ಚು. ಅಲ್ಲಲ್ಲಿ ಮರಗಳಲ್ಲಿ ಗೂಡು ಕಟ್ಟಿದ ದೇಶ-ವಿದೇಶದ ವೈವಿಧ್ಯಮಯ ಪಕ್ಷಿಗಳ ಬಣ್ಣಬಣ್ಣದ ಚಿಟ್ಟೆಗಳ ವಿಹಂಗಮ ನೋಟ. ಪೋಷಕರ ಭಯವಿಲ್ಲದೇ ಸ್ವತಂತ್ರ ಜೋಡಿಹಕ್ಕಿಗಳಾಗಿ ಅಲೆದಾಟ. ಸುಂದರ ಹಾಸು ಹುಲ್ಲಿನ ಗಿಡಮರದ ತಡಿಯಲ್ಲಿ ಕುಳಿತು ಇಹ ಲೋಕವ ಮರೆತು ಸವಿಯಲು ಪ್ರೇಮದ ರಸದೂಟ ವಾಹ್... ಅದೊಂದು ಪ್ರೇಮಿಗಳ ಸ್ವರ್ಗವೇ ಬಿಡಿ..
ಪ್ರೇಮಿಗಳದಿನದಂದು ಮರೆಯಲ್ಲೇ ಬಿಕ್ಕುವ ಇವರ ಅಳಲು ಕಂಡವರ್ಯಾರು?
ಪ್ರಕೃತಿ ಮೋಹಕತೆಗೆ ಮೈಮರೆಯುವಿರಿ
ಇನ್ನು ಶ್ರೀರಂಗಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಮೈಸೂರಿನಿಂದ 15 ಕಿ.ಮೀ. ದೂರದಲ್ಲಿ ಪ್ರೇಮಿಗಳ ಬರಸೆಳೆವುದು ಬಲಮುರಿ ಮತ್ತು ಎಡಮುರಿ ಜಲಪಾತಗಳು. ಚಳಿಗಾಲದ ಭೇಟಿಗೆ ಅತ್ಯಂತ ಪ್ರಶಸ್ತವಾದ ಸ್ಥಳ. ನೀರಿನ ಸುತ್ತ ದೋಣಿ ವಿಹಾರಮಾಡಲು ಹಾಗೂ ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯಲು ಇಲ್ಲಿಗೆ ಬರಬೇಕು. ಹಾಗೆಯೇ, ಪಕ್ಷಿದಾಮ ಎಂದೇ ಪ್ರಸಿದ್ಧಿ ಪಡೆದ ರಂಗನತಿಟ್ಟು. ಇಲ್ಲಿನ ವೈವಿಧ್ಯಮಯ ಪಕ್ಷಿಗಳು, ಪ್ರೀತಿಯ ಜೋಡಿಹಕ್ಕಿಗಳ ಆಗಮನಕ್ಕೆ ಕಾಯುತ್ತಿರುತ್ತವೆ. ಹಕ್ಕಿಗಳ ಚಿಲಿಪಿಲಿಯಂತೆ ಇಲ್ಲಿ ಪ್ರೇಮಿಗಳು ಒಲವಿನ ಮಾತುಗಳನ್ನು ಪಿಸುಗುಡುತ್ತಾ ಪ್ರಕೃತಿ ಮೋಹಕತೆಗೆ ಮೈಮರೆಯದೆ ಇರಲಾರಿರಿ.
ವ್ಯಾಲೆಂಟೈನ್ ಡೇ:ಎಂದಿಗೂ ವಂಚಕ ಪ್ರೇಮಿಯಾಗದಿರಿ...!
ಈ ಜಾಗವೆಲ್ಲವೂ ಹೌಸ್ ಫುಲ್
ಮೈಸೂರಿಂದ 20 ಕಿ.ಮೀ. ದೂರದಲ್ಲಿ ವಿಶ್ವೇಶ್ವರಯ್ಯ ಅವರ ಯೋಜಿತ, ಒಡೆಯರ ಪರಿಶ್ರಮದ ಕನ್ನಂಬಾಡಿ ಕಟ್ಟೆಯ ದರ್ಶನ ಮೈ ರೋಮಾಂಚನಗೊಳಿಸುವಂತಾದ್ದು. ಸಂಜೆ ಹೊತ್ತಿನ ನೀರಿನ ನರ್ತನವಂತೂ ಅವಿಸ್ಮರಣೀಯ. ಇತ್ತ ಮೈಸೂರಿನಿಂದ 45 ಕಿ.ಮೀ. ಪ್ರಯಾಣ ಮಾಡಿದರೆ ಸಿಗುವುದು ಪವಿತ್ರ ಯಾತ್ರಾಸ್ಥಳ ತಲಕಾಡು. ಗಂಗಾನದಿಯಲ್ಲಿ ಮಿಂದು, ತೀರದ ನುಣ್ಪಿನ ಬೆಚ್ಚನೆಯ ಮರಳಿನಲ್ಲಿ ತುಂಟಾಟ ಆಡಲು ಭೇಟಿ ಕೊಡಬೇಕು. ಗಂಗರ ಕಾಲದ ಸುಂದರ ಕೆತ್ತನೆಯ ಪ್ರಸಿದ್ಧ ದೇವಾಲಯಗಳ ಕಲೆಗೆ ಮನಸೋಲದೆ ಇರುವವರಿಲ್ಲ. ಅಲ್ಲಿಂದ 5 ಕಿ.ಮೀ. ದೂರದಲ್ಲಿ ಮುಡುಕುತೊರೆಯ ದೇಗುಲಗಳ ದರ್ಶನ ಅಷ್ಟೇ ಸೊಗಸಾಗಿರುತ್ತದೆ. ಪ್ರವಾಸಿ ತಾಣಗಳನ್ನು ಸಹ ಒಲವಿನ ಹಾಸಿಗೆಯ ಮೂಲಕ ತೆರದಿಡುವ ಇಂದಿನ ದಿನ ಈ ಜಾಗವೆಲ್ಲವೂ ಹೌಸ್ ಫುಲ್.