ಪ್ರಮೋದಾದೇವಿ ತಾಯಿ ವಿಧಿವಶ : ವಜ್ರಮುಷ್ಠಿ ಕಾಳಗ ರದ್ದು
ಮೈಸೂರು, ಅಕ್ಟೋಬರ್ 19 : ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಹಬ್ಬ ಒಂದೆಡೆ ಮನೆ ಮಾಡಿದ್ದರೆ ಇತ್ತ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಾಯಿ ಪುಟ್ಟಚಿನ್ನಮ್ಮಣಿ ನಿಧನದ ಹಿನ್ನೆಲೆ ಅರಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ತಮ್ಮ ಅಜ್ಜಿ ಅಗಲಿದ ಹಿನ್ನೆಲೆಯಲ್ಲಿ ರಾಜ ಯದುವೀರ್ ಸರಳವಾಗಿ ಪೂಜೆ ಸಲ್ಲಿಸಲಿದ್ದಾರೆ. ವೈಭವೋಪೇತವಾಗಿ ಬೆಳ್ಳಿ ಪಲ್ಲಕ್ಕಿ ಏರಿ ಯದುವೀರ್ ವಿಜಯ ಯಾತ್ರೆ ಮಾಡುವುದನ್ನು ರದ್ದುಗೊಳಿಸಲಾಗಿದ್ದು, ಕೇವಲ ಭುವನೇಶ್ವರಿ ದೇಗುಲದಲ್ಲಿ ಬನ್ನಿ ಮಂಟಪದಲ್ಲಿ ಪೂಜೆ ನಡೆಸಲು ಚಿಂತನೆ ನಡೆಸಲಾಗಿದೆ.
ಜಂಬೂಸವಾರಿಗೆ ಮುನ್ನ ನಡೆಯುತ್ತೆ ವಜ್ರಮುಷ್ಠಿ ಕಾಳಗ...!
ರಥದಲ್ಲಿ ತೆರಳುವ ಬದಲು ಕಾರಿನಲ್ಲಿ ತೆರಳಲಿರುವ ರಾಜ ಯದುವೀರ್, ಪಂಚಲೋಹದ ರಥದ ಅಡ್ಡಪಲ್ಲಕ್ಕಿಯಲ್ಲಿ ಕತ್ತಿಗಳ ಮಾತ್ರ ವಿಜಯಯಾತ್ರೆ ನಡೆಯಲಿದೆ. ಪ್ರಮೋದಾ ದೇವಿ ಅವರು, ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಅರಮನೆಯಲ್ಲಿ ಪುರೋಹಿತರೊಂದಿಗೆ ಚರ್ಚೆ ನಡೆಸಿದ್ದು, ಜಟ್ಟಿ ಕಾಳಗ ಕೂಡ ಸ್ಥಗಿತಗೊಳಿಸಿದೆ.
ವಜ್ರಮುಷ್ಠಿ ಕಾಳಗಕ್ಕೆ ಜಟ್ಟಿಗಳು ಸರ್ವ ಸನ್ನದ್ಧರಾಗಿದ್ದರು. ಆದರೆ ಸೂತಕದ ಹಿನ್ನೆಲೆ ಕಾಳಗ ಕೂಡ ರದ್ದಾಗಿದೆ. ಅಲ್ಲದೇ ಪ್ರಮೋದಾ ದೇವಿ ಒಡೆಯರ್ ಇಂದು ವಿಜಯ ದಶಮಿ ಪೂಜೆಯಲ್ಲಿ ಭಾಗವಹಿಸುವುದಿಲ್ಲ.
ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್
ಮೈಸೂರಿನ ಇಟ್ಟಿಗೆ ಗೂಡಿನಲ್ಲಿರುವ ಸಮರ್ ಪ್ಯಾಲೇಸ್ನಲ್ಲಿ ಪುಟ್ಚಚಿನ್ನಮ್ಮಣಿ ಅವರ ಅಂತಿಮ ಸಂಸ್ಕಾರ ನಡೆಸುವ ಬಗ್ಗೆ ಪ್ರಮೋದಾ ದೇವಿ ಚರ್ಚೆ ನಡೆಸಿದ್ದಾರೆ. ರಾಜ ಗುರು ಅಭಿನವ ವಾಗೀಶ ಬ್ರಹ್ಮತಂತ್ರ ಸ್ವಾತಂತ್ರ ಪರಕಾಲ ಸ್ವಾಮಿಗಳ ಬಳಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚರ್ಚಿಸಿ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇನ್ನು ಸೂತಕದ ಹಿನ್ನೆಲೆ ನೋಡುವುದಾದರೇ , ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿರುವ ಕಂಕಣ ಕಟ್ಟಿಕೊಂಡಿದ್ದರು ಧರ್ಮ ಶಾಸ್ತ್ರಗಳ ಪ್ರಕಾರ ಕಂಕಣ ಕಟ್ಟಿಕೊಂಡಿದ್ದರೆ ಸೂತಕ ಆಗಲ್ಲ. ಸದ್ಯ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ವಿಧಿವಶರಾಗಿರುವುದು, ಯದುವೀರ್ ಒಡೆಯರ್ ಕಂಕಣಕಟ್ಟಿಕೊಂಡಿರೋದಕ್ಕೆ ಸೂತಕ ಆಗುವುದಿಲ್ಲ ಎಂಬುದು ಧಾರ್ಮಿಕ ಚಿಂತನೆ.