ಮೈಸೂರಿನಲ್ಲಿ ವೈಕುಂಠ ಏಕಾದಶಿ ಸಡಗರ: ಭಕ್ತಾದಿಗಳಿಗೆ ವಿಶೇಷ ದ್ವಾರದಲ್ಲಿ ಪ್ರವೇಶ
ಮೈಸೂರು, ಡಿಸೆಂಬರ್ 18 : ನಗರದ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವೈಕುಂಠ ಏಕಾದಶಿ ಸಡಗರ. ಅದರಲ್ಲೂ ವೆಂಕಟೇಶ್ವರ ದೇವಸ್ಥಾನಕ್ಕೆ ನಸುಕಿನಲ್ಲೇ ಬಂದ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಹಲವು ಕಡೆ ವಿಶೇಷವಾಗಿ ನಿರ್ಮಿಸಿದ್ದ ಉತ್ತರ ವೈಕುಂಠ ದ್ವಾರವನ್ನು ಪ್ರವೇಶಿಸಿದ ಜನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಜಯನಗರದ 'ಇಸ್ಕಾನ್' ದೇವಸ್ಥಾನದಲ್ಲಿ ಈ ದಿನವನ್ನು ಪ್ರತಿವರ್ಷವೂ ವಿಶೇಷವಾಗಿ ಆಚರಿಸುವುದು ವಾಡಿಕೆ. ಈ ವರ್ಷ ಕೂಡ ಬೃಹತ್ ವೈಕುಂಠ ದ್ವಾರ ನಿರ್ಮಿಸಿ ಭಕ್ತರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಯಿತು. ದ್ವಾರಪಾಲಕರಾದ ಜಯ- ವಿಜಯರ ಮೂರ್ತಿಗಳನ್ನು ಅಕ್ಕಪಕ್ಕದಲ್ಲಿ ನಿರ್ಮಿಸಿ, ತಳಿರು ತೋರಣ, ಹೂ- ಗಂಧಗಳನ್ನು ಬಾಗಿಲನ್ನು ಸಿಂಗಾರ ಮಾಡಲಾಗಿತ್ತು.
ವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷ
ಗರ್ಭಗುಡಿಯಲ್ಲಿನ ಕೃಷ್ಣ- ಬಲರಾಮರಿಗೆ ವಿಶೇಷ ಪುಷ್ಪಾಲಂಕಾರ, ಮಡಿ ಉಡುಗೆಯಿಂದ ಪೂಜೆ ಮಾಡಲಾಯಿತು. ಬೆಳಗ್ಗೆ 6.30ಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಲೋಕಕಲ್ಯಾಣಾರ್ಥವಾಗಿ ಒಂದು ಲಕ್ಷ ಬಾರಿ 'ಹರಿನಾಮ ಜಪಯಜ್ಞ' ನಡೆಯಿತು. ಹರಿನಾಮ ಜಪಕ್ಕಾಗಿ ಮಾಡಿದ್ದ ವಿಶೇಷ ಮಂಟಪದಲ್ಲೂ ಜನಜಂಗುಳಿ ತುಂಬಿತ್ತು.
ಇಡೀ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ 2ರಿಂದ ನಿರಂತರವಾಗಿ ದಾಸಪದಗಳ ಗಾಯನ, ಭಜನೆ, ಕೀರ್ತನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ 10.30ರವರೆಗೂ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಆಚರಣೆ ಹೇಗೆ, ವಿಶೇಷ ಏನು?
ದೇವಸ್ಥಾನಕ್ಕೆ ಕಳೆದ ವರ್ಷ 17 ಸಾವಿರ ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಇಸ್ಕಾನ್ ಉಪಾಧ್ಯಕ್ಷ ರಸಿಕಶೇಖರದಾಸ ತಿಳಿಸಿದರು.
ಒಂಟಿಕೊಪ್ಪಲು ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಜನಜಂಗುಳಿ ಇತ್ತು. ನಗರ ಮಾತ್ರವಲ್ಲದೇ, ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಸಾವಿರಾರು ಭಕ್ತರು ಇಲ್ಲಿಗೆ ಬಂದು ವೈಕುಂಠ ದ್ವಾರ ಪ್ರವೇಶ ಮಾಡಿದರು. ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇವಸ್ಥಾನ ಹಾಗೂ ಕುವೆಂಪುನಗರದ ವೆಂಕಟೇಶ್ವರ ದೇವಸ್ಥಾನದಲ್ಲಂತೂ ಸಾವಿರಾರು ಮಂದಿ ಸರದಿಯಲ್ಲಿ ನಿಂತು ದರ್ಶನ ಪಡೆದರು. ಭಕ್ತರ ಅನುಕೂಲಕ್ಕಾಗಿ ಅಲ್ಲಲ್ಲಿ ಮಾರ್ಗಸೂಚಿ ಫಲಕಗಳನ್ನು ಹಾಕಲಾಗಿತ್ತು.
ಸರಸ್ವತಿಪುರಂನ ಕೃಷ್ಣಧಾಮ, ವೆಂಕಟೇಶ್ವರ ಮಂದಿರ, ಊಟಿ ರಸ್ತೆಯ ದೊಡ್ಡಾಂಜನೇಯ ದೇವಸ್ಥಾನ, ಚಾಮುಂಡಿ ಬೆಟ್ಟ, ಗಾಂಧಿನಗರದ ಮನೆಮಂಚಮ್ಮ ದೇವಸ್ಥಾನ, ಶ್ರೀರಾಂಪುರ 2ನೇ ಹಂತದ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಮುಂತಾದ ಕಡೆಗಳನ್ನೂ ವೈಕುಂಠ ದ್ವಾರಕ್ಕೆ ಪ್ರವೇಶ ಕಲ್ಪಿಸಲಾಯಿತು.