ಸೋತ ವಿಶ್ವನಾಥ್ ಭೇಟಿ ಮಾಡಿ ಏನಂದರು ಸೋಮಣ್ಣ?
ಮೈಸೂರು, ಡಿಸೆಂಬರ್ 24: "ವಿಶ್ವನಾಥ್ ಅವರು ಸೋತಿದ್ದು ನೋವಿನ ಸಂಗತಿ. ಆದರೆ ಸೋಲು- ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ" ಎಂದು ಹಾರೈಸಿದರು ಸಚಿವ ವಿ.ಸೋಮಣ್ಣ.
ಮೈಸೂರು ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಮಾಜಿ ಸಚಿವ ಎಚ್.ವಿಶ್ವನಾಥ್ ಭೇಟಿ ಮಾಡಿದರು. ಇದೇ ಸಂದರ್ಭ ಹಲವು ವಿಷಯಗಳನ್ನು ಹಂಚಿಕೊಂಡರು. "ನಮಗೆ ಬಹಳ ಬೇಜಾರಾದ ಸಂದರ್ಭ ವಿಶ್ವನಾಥ್ ಅವರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿದ್ದೆ" ಎಂದು ನೆನೆಸಿಕೊಂಡರು.
"ನಂಬಿದವರನ್ನು ಯಡಿಯೂರಪ್ಪ ಕೈಬಿಡಲ್ಲ"
ವಿಶ್ವನಾಥ್ ಅವರಿಗೆ ಸಚಿವ ಸ್ಥಾನಮಾನ ನೀಡುವ ವಿಚಾರವಾಗಿ ಮಾತನಾಡಿದ ಅವರು, "ನಮ್ಮ ಪಕ್ಷದ ಹಿರಿಯರು, ಯಡಿಯೂರಪ್ಪ ಇದ್ದಾರೆ. ಹೈಕಮಾಂಡ್ ಸಹ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಸದ್ಯ ಯಾವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಕುರಿತು ತಿಳಿದಿಲ್ಲ. ಒಟ್ಟಿನಲ್ಲಿ ನಂಬಿದವರನ್ನು ಯಡಿಯೂರಪ್ಪ ಅವರು ಕೈಬಿಡಲ್ಲ" ಎಂದು ಹೇಳಿದರು.
ಎಲ್ಲ ಸಿಎಂ ಕೈಯಲ್ಲಿದೆ ಎಂದ ವಸತಿ ಸಚಿವ ವಿ.ಸೋಮಣ್ಣ
ಮಂಗಳೂರು ಗಲಭೆ ಕುರಿತು ಸಿದ್ದರಾಮಯ್ಯ ತಿವಿದ ವಿ.ಸೋಮಣ್ಣ
ಮಂಗಳೂರಿನಲ್ಲಿ ನಡೆದ ಗಲಭೆಗೆ ಮುನ್ನ ಪ್ಲಾನ್ ನಡೆದಿದ್ದ ಕುರಿತು ಕೆಲವು ಸಾಕ್ಷ್ಯಾಧಾರಗಳು ದೊರೆತಿದ್ದು, ಈ ಕುರಿತು ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟ ಸೋಮಣ್ಣ, "ಸಿದ್ದರಾಮಯ್ಯ ಅವರೇ, ಈಗ ಹೇಳಿ ಯಾರು ಅಮಾಯಕರು?" ಎಂದು ಪ್ರಶ್ನಿಸಿದ್ದಾರೆ. "ಇವತ್ತು ಸಿಸಿ ಟಿವಿ ಕ್ಯಾಮರಾಗಳಿಂದ ಸಾಕ್ಷಿಗಳು ಹೊರಗಡೆ ಬಂದಿವೆ. ಈ ಬಗ್ಗೆ ನನಗೆ ಡಿ.20ರಂದು ಮಾಹಿತಿ ಲಭ್ಯವಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಡಾ.ಹರ್ಷ ದಕ್ಷ ಅಧಿಕಾರಿ. ಗಲಭೆ ಆರಂಭದಲ್ಲೇ ಇದು ಎಲ್ಲಿಗೆ ಮುಟ್ಟುತ್ತೋ ಎನ್ನವ ಆತಂಕ ವ್ಯಕ್ತಪಡಿಸಿದ್ದರು, ಬೇಕಂತಲೇ ಕೆಲವರು ಸಂಚು ಮಾಡಿದ್ದಾರೆಂದು ಹೇಳಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ಕಲ್ಲುಗಳನ್ನು ಸಾಗಿಸಿದ್ದಾರೆ. ಆಸ್ಪತ್ರೆಯ ಐಸಿಯುಗೆ ಹೋಗಿದ್ದಾರೆ. ಅಲ್ಲಿ ಹೋಗಿ ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ದಾಳಿ ಮಾಡಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಉತ್ತರ ಕೊಡಬೇಕು" ಎಂದು ಕಿಡಿಕಾರಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ ವೀಕ್ಷಿಸಿದ ಸಚಿವ
ಮಳೆಗಾಲದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ ಸಾಗುವ ರಸ್ತೆ ಮಧ್ಯೆ ಉಂಟಾಗಿದ್ದ ರಸ್ತೆ ಕುಸಿತ ಉಂಟಾಗಿದ್ದು, ಅದನ್ನು ದುರಸ್ತಿ ಮಾಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳಕ್ಕೆ ತೆರಳಿ ಕಾಮಗಾರಿ ವೀಕ್ಷಣೆ ಮಾಡಿದ ವಿ ಸೋಮಣ್ಣ ಅವರು, "ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ತ್ವರಿತವಾಗಿ ಕೆಲಸ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು" ಎಂದರು. ಕಾಮಗಾರಿ 19 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಡೆಯುತ್ತಿದ್ದು, ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್ ಮತ್ತಿತರರು ಇದ್ದರು.
ಚಾಮುಂಡಿ ಬೆಟ್ಟದಲ್ಲಿ ಹರಿದ್ವಾರ ರೀತಿ ರೋಪ್ ವೇ: ಸೋಮಣ್ಣ
ಶೀಘ್ರವೇ ವ್ಯಾಪಾರಸ್ಥರಿಗೆ ಮಳಿಗೆ
ಚಾಮುಂಡಿ ಬೆಟ್ಟದಲ್ಲಿ ಮಳಿಗೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದು, ಶೀಘ್ರದಲ್ಲೇ ವ್ಯಾಪಾರಸ್ಥರಿಗೆ ಮಳಿಗೆ ನೀಡುವುದಾಗಿ ಸೋಮಣ್ಣ ಭರವಸೆ ನೀಡಿದರು. ಇನ್ನು ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಬಳಿಕ ಫಲಾನುಭವಿಗಳಿಗೆ ಮಳಿಗೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ವಸತಿ ಯೋಜನೆಯಲ್ಲಿ ಗೋಲ್ಮಾಲ್ ನಡೆದ ಹಿನ್ನೆಲೆಯಲ್ಲಿ ಈಗಾಗಲೇ 7ಲಕ್ಷ ಮನೆಯನ್ನು ವಾಪಾಸ್ ಪಡೆದಿದ್ದೇವೆ. ಇದರಲ್ಲಿ ಸಾಕಷ್ಟು ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ.ನಮ್ಮ ಹಾಗೂ ಹಿಂದಿನ ಸರ್ಕಾರ ಕೊಟ್ಟ ಮನೆಗಳ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿ ಸಾಕಷ್ಟು ಮನೆಗಳು ಅರೆಬರೆ ಕೆಲಸ ಆಗಿವೆ. ಆ ಕಾಮಗಾರಿ ಶೀಘ್ರವಾಗಿ ಮುಗಿಸಿ ಅರ್ಹರಿಗೆ ನೀಡುವುದು ನಮ್ಮ ಗುರಿ. ಗ್ರಾಮಸಭೆಯಲ್ಲಿ ಮನೆ ನೀಡುವಿಕೆ ತೀರ್ಮಾನ ಮಾಡಿದ್ರು ರದ್ದಾಗುವುದು. ಇನ್ಮುಂದೆ ಶಾಸಕರು ಕೂಡ ಸರಿಯಾಗಿ ಪರಿಶೀಲನೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಮನೆ ನೀಡಲು ಖುದ್ದಾಗಿ ಪರಿಶೀಲನೆ ನಡೆಸಬೇಕು. ಮೊದಲಿನ ಹಾಗೆ ನೋಡದೆ ಸೈನ್ ಮಾಡಿ ಮನೆ ಕೊಡುವ ಹಾಗಿಲ್ಲ. ಇದೀಗ ನಾವು ಸಿದ್ಧಪಡಿಸಿದ ಮನೆಗಳಲ್ಲೂ 7 ಸಾವಿರದಷ್ಟು ಬೇರೆಯವರು ಇದ್ದಾರೆ. ಅದು ಕೂಡ ನಮ್ಮ ಗಮನಕ್ಕೆ ಬಂದಿದ್ದು ಅದನ್ನು ಕ್ಯಾನ್ಸಲ್ ಮಾಡಿದ್ದೇವೆ ಎಂದರು.