ಮೈಸೂರು ದಸರೆ ಜೊತೆ ನಗರದ 65 ವಾರ್ಡ್ಗಳಲ್ಲಿ ಮನೆ ಮನೆ ದಸರೆಗೂ ಚಿಂತನೆ
ಮೈಸೂರು, ಆಗಸ್ಟ್ 30: ಸೆ.29 ರಿಂದ ಅ.8ವರೆಗೆ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರೆಗೆ ಈ ಬಾರಿ ವಿಶೇಷ ಯೋಜನೆಗಳನ್ನು ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆ ನಗರದ 65 ವಾರ್ಡ್ಗಳಲ್ಲಿ ಮನೆ ಮನೆ ದಸರಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಹೃದಯ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ಉತ್ಸವ ಇತರ ಭಾಗಗಳಿಗೂ ವಿಸ್ತರಣೆಯಾಗಲಿದೆ.
ಅರ್ಜುನ ಸಾರಥ್ಯದಲ್ಲಿ ಆರಂಭವಾಗಿದೆ ಜಂಬೂಸವಾರಿ ತಾಲೀಮು
ಆ.29ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿ ಅಧಿಕಾರಾವಧಿಯಲ್ಲಿ, ಅಂದರೆ 2008ರಲ್ಲಿಯೂ ಮನೆ ಮನೆ ದಸರಾ ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಯಕ್ರಮ ಕೈಬಿಡಲಾಗಿತ್ತು. ಮನೆ ಮನೆ ದಸರಾವನ್ನು ಮತ್ತೆ ಆರಂಭಿಸಬೇಕು ಎಂಬ ಸಲಹೆಯನ್ನು ಶಾಸಕ ಎಸ್.ಎ.ರಾಮದಾಸ್ ಸಭೆಯ ಮುಂದಿಟ್ಟ ಹಿನ್ನೆಲೆ ಈ ಕಾರ್ಯಕ್ರಮ ಮುಂದಿಡಲು ಚಿಂತಿಸಲಾಗಿದೆ" ಎಂದರು.
"ಪ್ರತಿ ವಾರ್ಡ್ ನಲ್ಲಿಯೂ ಎಲ್ಲ 65 ವಾರ್ಡ್ಗಳಿಗೆ ತಲಾ 1.5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ಈ ಮನೆ ಮನೆ ದಸರಾದಲ್ಲಿ ವಾರ್ಡ್ ಮಟ್ಟದಲ್ಲಿ ನಗರದ ಮನೆಗಳಲ್ಲಿ ವಿವಿಧ ಕಾರ್ಯಕ್ರಮ, ಸ್ಫರ್ಧೆಗಳು ನಡೆಯಲಿವೆ" ಎಂದು ತಿಳಿಸಿದರು.
ಜಂಬೂ ಸವಾರಿ ದಿನ ಪಾಲಿಕೆ ಸದಸ್ಯರಿಗೆ ಅರಮನೆ ಆವರಣದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲು ಮತ್ತು ಎಲ್ಲರಿಗೂ ತಲಾ ಐದು ಪಾಸ್ಗಳನ್ನು ನೀಡುವಂತೆ ಸಂಸದರು ಮತ್ತು ಶಾಸಕರಿಗೆ ಸಚಿವ ಸೋಮಣ್ಣ ಸೂಚಿಸಿದರು. ದಸರಾ ಅವಧಿಯಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚುವರಿಯಾಗಿ 330 ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅವರು ಮೂರು ಪಾಳಿಗಳಲ್ಲಿ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ವರ್ಷದಿಂದಲೇ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲೂ ಗ್ರಾಮೀಣ ದಸರಾ ಆಚರಿಸೋಣ. ಇದಕ್ಕಾಗಿಯೇ ತಲಾ 1 ಲಕ್ಷ ಅನುದಾನ ನೀಡಲಾಗುವುದು ಎಂದು ಘೋಷಿಸಿದರು. "ಎಲ್ಲರನ್ನೂ ಒಳಗೊಂಡ ದಸರಾ ಆಚರಿಸೋಣ. ಈ ಬಾರಿಯ ಯಶಸ್ಸಿಗೆ ಶ್ರಮಿಸಿ. ಮುಂದಿನ ವರ್ಷದಿಂದ ವ್ಯವಸ್ಥಿತವಾಗಿ, ಅದ್ದೂರಿಯಾಗಿ ದಸರಾ ಆಚರಣೆಯಲ್ಲಿ ಪಾಲ್ಗೊಳ್ಳೋಣ. ದುಡ್ಡಿಂದ ದಸರಾ ಆಚರಿಸಲು ಸಾಧ್ಯವಿಲ್ಲ. ಮನಸ್ಸುಗಳಿಂದ ದಸರಾ ಆಚರಿಸಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವೆ. ಅಧಿಕಾರಿ ವರ್ಗ, ಚುನಾಯಿತ ಜನಪ್ರತಿನಿಧಿಗಳು ಸಾಥ್ ನೀಡಿ. ದೇಶದಲ್ಲೇ ಸರ್ಕಾರದಿಂದ ನಡೆಯಲಿರುವ ಏಕೈಕ ಪರಂಪರೆಯ ಹಬ್ಬ ಇದಾಗಿದ್ದು, ಯಶಸ್ಸಿಗೆ ಎಲ್ಲರೂ ದುಡಿಯೋಣ" ಎಂದು ಅವರು ಹೇಳಿದರು.
"ದಸರೆ ಮೆರವಣಿಗೆಯ ಸ್ತಬ್ದಚಿತ್ರಗಳು ಪುನಾರವರ್ತನೆ ಆಗುತ್ತಿವೆ. 2-3 ಜಿಲ್ಲೆಗಳು ಒಂದೇ ರೀತಿಯ ಸ್ತಬ್ಧಚಿತ್ರ ಮಾಡಿಕೊಂಡು ಬರುತ್ತಿವೆ. ಈ ಬಾರಿ ವೈವಿಧ್ಯಮಯವಾಗಿ ರಚಿಸಲು ಪ್ರಯತ್ನಿಸಬೇಕು" ಎಂದು ಸಂಸದ ಪ್ರತಾಪಸಿಂಹ ಹೇಳಿದರು.
"ಇಸ್ರೊ, ಸೈನಿಕರ ಸಾಧನೆ ಕುರಿತು ಸ್ತಬ್ಧಚಿತ್ರ ರಚಿಸಿ, ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಾದ ಉಜ್ವಲ ಯೋಜನೆ, ಫಸಲ್ ಬಿಮಾ ಯೋಜನೆ ಬಗ್ಗೆ ಮಾಡಿ. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿ ಕುರಿತು ರಚಿಸಿ" ಎಂದು ಸಲಹೆ ನೀಡಿದರು.