ಲಾಕ್ ಡೌನ್ ತೆರವಿನ ಬಳಿಕ ಪ್ರಥಮ ಬಾರಿಗೆ ಮೈಸೂರಿನಲ್ಲಿ ಕರಕುಶಲ ಮೇಳ
ಮೈಸೂರು, ಸೆಪ್ಟೆಂಬರ್ 22: ಕೊರೊನಾ ಲಾಕ್ ಡೌನ್ ತೆರವಾದ ಬಳಿಕ ಮೈಸೂರು ನಗರದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 18 ರಿಂದ ಹೆಬ್ಬಾಳದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಆರಂಭಗೊಂಡಿರುವ ಕರಕುಶಲ ಮೇಳವು ನೋಡುಗರ ಮನಸೆಳೆಯುತ್ತಿದೆ.
ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಕರಕುಶಲ ಇಲಾಖೆ ಸಹಯೋಗದಲ್ಲಿ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ನಡೆಯುತ್ತಿರುವ ಈ ಮೇಳವು ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯುತ್ತಿದ್ದು, ಕೊರೊನಾ ಭಯದ ನಡುವೆಯೂ ಜನ ಆಗಮಿಸುತ್ತಿರುವುದಕ್ಕೆ ಕಾರಣವೂ ಇದೆ. ಇಲ್ಲಿ ಈ ಬಾರಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.
ಸುರಕ್ಷತಾ ಕ್ರಮಗಳೊಂದಿಗೆ ನಡೆಯುತ್ತಿರುವ ಮೇಳ
ಮೇಳದ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ದ್ವಾರ, ಅಲ್ಲಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ಯಂತ್ರಗಳು, ಪ್ರವೇಶದ ದ್ವಾರದಲ್ಲೇ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಒಳಬಿಡುವ ಸಿಬ್ಬಂದಿ, ಖರೀದಿ ವೇಳೆ ಗ್ರಾಹಕರು ಸುರಕ್ಷಿತ ಅಂತರ ಪಾಲಿಸಲು ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ, ಡಿಜಿಟಿಲ್ ವ್ಯವಹಾರಕ್ಕೆ ಒತ್ತು ನೀಡುವ ಮೂಲಕ ಕೊರೊನಾ ತಡೆಗೆ ಎಲ್ಲ ಕ್ರಮಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.
ಈ ಬಾರಿಯ ಸರಳ ದಸರಾ ಆಚರಣೆ ಅರಮನೆಗೆ ಮಾತ್ರ ಸೀಮಿತ: ಏನಿರುತ್ತೆ? ಏನಿರಲ್ಲ?
ಹಲವು ಆಕರ್ಷಣೆಯ ಕೇಂದ್ರ
ಕೆಲವು ತಿಂಗಳ ಬಳಿಕ ಆಯೋಜನೆಗೊಳ್ಳುತ್ತಿರುವ ಈ ಮೇಳವು ಹಲವು ಆಕರ್ಷಣೆಯ ಕೇಂದ್ರವಾಗಿವೆ. ಆವರಣ ಪ್ರವೇಶಿಸುತ್ತಿರುವಂತೆ ಕೊಳಲ ನಾದ ಮನಸೆಳೆಯುತ್ತದೆ. ಧಾವಂತದಲ್ಲಿದ್ದರೂ ಒಂದರೆಕ್ಷಣ ಕೊಳಲ ನಾದಕ್ಕೆ ಕಿವಿಯಾಗಬೇಕು ಎಂದು ನಿಂತರೆ ತಮಿಳುನಾಡಿನ ತಿರುನಳ್ವೇಲಿಯ ಕೆ.ಮಣಿ ಮೋಹನ್ ಅವರ ಕೊಳಲು ಮಾರಾಟದ ಮಳಿಗೆ ಮನಸೆಳೆಯುತ್ತದೆ. ಕೊಳಲು ಶಿಕ್ಷಕ, ಮಾರಾಟಗಾರ, ತಯಾರಕರಾಗಿರುವ ಮಣಿ ಅವರು ಕೊಳಲು ನುಡಿಸುವುದನ್ನೂ ಕಲಿಸುತ್ತಾರೆ. ಅವರ ಮಳಿಗೆಯಲ್ಲಿ 6, 7, 8 ರಂಧ್ರದ ಕೊಳಲುಗಳು ಇವೆ. ತಮಿಳುನಾಡಿನಲ್ಲಿ ಸಿಗುವ ವಿಶಿಷ್ಟವಾದ ಬಿದಿರಿನಿಂದ ತಯಾರಿಸಲಾದ ಈ ಕೊಳಲುಗಳ ನಾದ ಭಿನ್ನವೂ, ಕರ್ಣಾನಂದಕರವೂ ಆಗಿದೆ.
ಮಣ್ಣಿನ ಆಲಂಕಾರಿಕ ವಸ್ತುಗಳ ಪ್ರಾತ್ಯಕ್ಷಿಕೆ
ಈ ಬಾರಿಯ ಮೇಳದಲ್ಲಿ ಆಭರಣಗಳು, ಕೈಮಗ್ಗದ ಬಟ್ಟೆಗಳ ಮಳಿಗೆಗಳು, ಸಾಂಪ್ರದಾಯಿಕ ಆಭರಣಗಳು, ರುದ್ರಾಕ್ಷಿ ಥೆರಪಿ, ಕರಕುಶಲ ವಸ್ತುಗಳ ಮಳಿಗೆಗಳು, ವಿಶಿಷ್ಟವಾದ ಚನ್ನಪಟ್ಟಣದ ಗೊಂಬೆಗಳ ಮಾರಾಟ ಮಳಿಗೆಗಳು, ಕಾಟನ್ ಬಟ್ಟೆಗಳು, ಕುರ್ತಾಗಳು, ಷರ್ಟ್ ಗಳು, ಬ್ಯಾಗ್ ಗಳು, ಬೆಡ್ ಶೀಟ್ ಗಳು, ಬೆಡ್ ಕವರ್ ಗಳು, ಮರದ ಕೆತ್ತನೆಗಳೂ ಸೇರಿದಂತೆ ಕುಶಲಕರ್ಮಿಗಳಿಂದ ತಯಾರಾದ ವಸ್ತುಗಳ ಮಾರಾಟಕ್ಕೆ 50 ಮಳಿಗೆಗಳು ಇವೆ. ಇನ್ನು ಮಣ್ಣಿನ ಆಲಂಕಾರಿಕ ವಸ್ತುಗಳ ಮಾರಾಟದ ಜತೆಗೆ ಅವುಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಿರುವುದು ವಿಶೇಷವಾಗಿದೆ.
ಮೈಸೂರಿನ ಅರ್ಬನ್ ಹಾತ್ ನಲ್ಲಿ ಮಾ.8ರವರೆಗೆ ಕರಕುಶಲ ಪ್ರದರ್ಶನ ಮೇಳ
ಕುಶಲಕರ್ಮಿಗಳ ಆರೋಗ್ಯದ ಕಾಳಜಿ
ಕರ್ನಾಟಕವೂ ಸೇರಿದಂತೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ ಮೊದಲಾದ ರಾಜ್ಯಗಳ ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಿದ್ದು, ಮಧುಬನಿ ಚಿತ್ರಕಲೆ, ರತ್ನಗಂಬಳಿ, ಸೆಣಬಿನ ಉತ್ಪನ್ನಗಳು, ವೈಸೂರಿನ ವುಡ್ ಇನ್ಲೇ, ಚನ್ನಪಟ್ಟಣದ ಬೊಂಬೆಗಳು, ಹೈದರಾಬಾದಿನ ಮುತ್ತಿನ ಆಭರಣಗಳು, ಗೊಂಡ್ ವರ್ಣ ಚಿತ್ರಗಳು, ಬಿದಿರಿನ ಪೀಠೋಪಕರಣಗಳು, ಕುಸುರಿ ಕಲಾಕೃತಿಗಳ ಮಾರಾಟ, ಪ್ರದರ್ಶನದಲ್ಲಿವೆ.
ಈ ಬಾರಿಯ ಮೇಳದಲ್ಲಿ ವಸ್ತು ಪ್ರದರ್ಶನಕ್ಕೆ ಬರುವ ಗ್ರಾಹಕರ, ಕುಶಲಕರ್ಮಿಗಳ ಆರೋಗ್ಯದ ಮೇಲೂ ಕಾಳಜಿ ವಹಿಸುವ ಕಾರಣ ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಇರುವ ಕುಶಲಕರ್ಮಿಗಳು ಮಾತ್ರ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ.