ದೇಶಸೇವೆಗೆ ಅತಿಬುದ್ಧಿವಂತರು ಬೇಕಿಲ್ಲ ಎಂದರು ಡಿಸಿ
ಮೈಸೂರು, ಫೆಬ್ರವರಿ 13 : ದೇಶ ಸೇವೆಗೆ ಅತೀ ಬುದ್ದಿವಂತರು ಬೇಕಿಲ್ಲ. ದೇಶದ ಬಗ್ಗೆ ಅರಿವಿರುವ, ಸಾರ್ವಜನಿಕರಿಗೆ ಸ್ಪಂದಿಸುವ ಸರ್ಕಾರಿ ಕೆಲಸಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವವರು ಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಡಳಿತ ವತಿಯಿಮದ ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ನಡೆದ ಒಂದು ದಿನ ಯುಪಿಎಸ್ ಸಿ ಕಾರ್ಯಾಗಾರವನ್ನು ಡಿ.ರಂದೀಪ್ ಉದ್ಘಾಟಿಸಿ ಮಾತನಾಡಿ, ನಿಮ್ಮ ಮುಂದೆ ಸಂಪನ್ಮೂಲ ವ್ಯಕ್ತಿಗಳಾಗಿ ಕುಳಿತಿರುವ ನಾವು ದೊಡ್ಡ ಸಾಧಕರಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮೇಲೆ ಬಂದಿದ್ದೇವೆ. ಹಿಂದೆ ನಾನೂ ಸಹ ಇದೇ ಕಾರ್ಯಗಾರದಲ್ಲಿ ಭಾಗವಹಿಸಿದ್ದೆ. ಪರೀಕ್ಷೆ 100 ಮೀ. ಓಟವಲ್ಲ. ಅದು ಬಹುದೂರ ಸಾಗುವ ಮ್ಯಾರಥಾನ್. ತಯಾರಿ ನಡೆಸದೇ ಪರೀಕ್ಷೆ ತೆಗೆದುಕೊಂಡು ಪ್ರಯತ್ನವನ್ನು ಹಾಳು ಮಾಡಿಕೊಳ್ಳಬಾರದು. 6 ಬಾರಿ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಎಂದು ತಿಳಿಸಿದರು.[ನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿ]
ಐಎಎಸ್, ಐಪಿಎಸ್ ಅಧಿಕಾರಿಗಳ ಆಯ್ಕೆಯಲ್ಲಿ ಆಯ್ಕೆಯ ವಿಧಾನ ಪಾರದರ್ಶಕವಾಗಿರುತ್ತದೆ. ಯುಪಿಎಸ್ಸಿ ಪರೀಕ್ಷೆ ವಿಶ್ವದ ಅತ್ಯಂತ ಕಷ್ಟಕರ ಪರೀಕ್ಷೆ ಹೀಗಾಗಿ ಉತ್ತಮ ಸಿದ್ಧತೆ ಮುಖ್ಯ. ಪೂರ್ವ ತಯಾರಿ ಇಲ್ಲದೆ ಪರೀಕ್ಷೆ ಎದುರಿಸಬಾರದು. ಈ ಪರೀಕ್ಷೆ ಯಾರಿಗೂ ಸುಲಭವಲ್ಲ. ಚಿನ್ನದ ಪದಕವಾಗಲಿ, ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದಾಗಲಿ ಬೇಕಿಲ್ಲ. ಇಂದು ಮೀಸಲಾತಿ ಇಲ್ಲದಿದ್ದರು ಮಹಿಳೆಯರು ಮೊದಲ ಶ್ರೇಣಿ ಪಡೆಯುತ್ತಿರುವುದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸರಕಾರಿ ಸೇವೆಯಲ್ಲಿದ್ದುಕೊಂಡೇ ಸಮಾಜ ಸೇವೆ ಮಾಡಬೇಕೆಂದೆನೂ ಇಲ್ಲ ಅದರೆ ಸರಕಾರಿ ಸೇವೆಯಲ್ಲಿ ನಿರ್ಧಾರಗಳಿಗೆ ಅವಕಾಶವಿದೆ. ನಾಗಾಲ್ಯಾಂಡ್ನಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಆರ್ಮ್ಸ್ಟ್ರಾಂಗ್ ಎಂಬುವವರು ಸರ್ಕಾರದ ಅನುದಾನ ಬಳಿಸಿಕೊಳ್ಳದೆ ಸಾರ್ವಜನಿಕರ ಸಹಾಯಪಡೆದು 100 ಕಿ.ಮೀ ರಸ್ತೆಯನ್ನೇ ನಿರ್ಮಿಸಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೆ ಇಂತಹ ಕಾರ್ಯಾಗಾರ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಜಿಲ್ಲೆಯ ಜಾಲತಾಣದಲ್ಲಿ ಹೊಸ ಬ್ಲಾಗ್ ಆರಂಭಿಸಿ ಅದರಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.