ಅಕಾಲಿಕ ಮಳೆ ಹಾನಿಗೆ ಪರಿಹಾರ; ಸರ್ಕಾರಕ್ಕೆ ಎಚ್ಡಿಕೆ ಆಗ್ರಹ
ಮೈಸೂರು, ನವೆಂಬರ್ 22; "ರಾಜ್ಯದಲ್ಲಿ 5 ರಿಂದ 6 ಲಕ್ಷ ಎಕ್ಟೆರ್ ಬೆಳೆ ನಷ್ಟವಾಗಿದ್ದು, ಸರ್ಕಾರ ಕೇವಲ ಪರಿಹಾರದ ಗೈಡ್ ಲೈನ್ ನಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಗೈಡ್ ಲೈನ್ ವರದಿ ಇಟ್ಟುಕೊಂಡು ಪರಿಹಾರ ಕೊಡೋದು ಸರಿಯಲ್ಲ. ಮೊದಲು ಅದನ್ನ ಬದಿಗೊತ್ತಿ ನಷ್ಟವಾಗಿರುವ ಬಗ್ಗೆ ಪರಿಹಾರ ಕೊಡಿ" ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದಲ್ಲಿ ರಸ್ತೆ, ಬ್ರಿಡ್ಜ್ ಹಾಳಾಗಿದೆ. 20ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸರ್ಕಾರದಲ್ಲಿರುವ ಮಂತ್ರಿಗಳು ಕಾಟಾಚಾರಕ್ಕೆ ಸರ್ವೆ ಮಾಡಬಾರದು. ಈಗಾಗಲೇ ಸಚಿವರು ಹೋಗಿ ಸರ್ವೆ ಮುಗಿಸಬೇಕಿತ್ತು. ಆದರೆ ಈ ವರೆಗೂ ಸರ್ಕಾರ ಆ ಕೆಲಸ ಮಾಡಿಲ್ಲ" ಎಂದು ಕಿಡಿಕಾರಿದರು.
"ಈ ಸರ್ಕಾರದಲ್ಲಿ ಕೇವಲ ಘೋಷಣೆ ಮಾತ್ರ ಇದೆ. ಕೇವಲ ಹೋಗಿ ಪರಿಹಾರ ಘೋಷಣೆ ಮಾಡುತ್ತಾರೆ. ಸರ್ಕಾರಕ್ಕೆ ಆಕಾಶ ಮಾತ್ರ ಕಾಣುತ್ತಿದೆ, ಭೂಮಿ ಕಾಣುತ್ತಿಲ್ಲ. ಕೊಡಗಿನ ಜನರಿಗೆ ಈವರೆಗೂ ಸರಿಯಾಗಿ ಪರಿಹಾರ ಇಲ್ಲ. ಎಲ್ಲದಕ್ಕೂ ಕೂಡ ಒಂದು ಇತಿ ಮಿತಿ ಇದೆ. ಜನರು ರೊಚ್ಚಿಗೆದ್ದು ನಿಮ್ಮನ್ನು ತಿರಸ್ಕಾರ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ" ಎಂದರು.
ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ
"ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರಲ್ಲ. ಇದನ್ನು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡರೆ ಆಯಿತು. ಅನುಮತಿ ಪಡೆದು ಪರಿಹಾರ ಕೊಡಬಹುದು" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಹಾಸನ; ಮಳೆಗೆ ನೆಲಕಚ್ಚಿದ ಬೆಳೆ, ಚಿಂತಾಕ್ರಾಂತರಾದ ರೈತರು
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ರೇಗಿದ ವಿಚಾರದ ಕುರಿತು ಮಾತನಾಡಿದ ಅವರು, "ತಮ್ಮನ್ನ ಚುನಾವಣೆಯಲ್ಲಿ ಸೋಲಿಸಿದವರನ್ನು ಅಪ್ಪಿಕೊಳ್ಳುತ್ತಾರೆ. ಜಿ. ಟಿ. ದೇವೇಗೌಡರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡು, ವೇದಿಕೆ ಮೇಲೆ ಅವರನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ರೇಗುತ್ತಾರೆ. ಇದು ನನಗೆ ನಿಜಕ್ಕೂ ಸೋಜಿಗವೆನಿಸಿತು" ಎಂದರು.
ಬಿಜೆಪಿಗೆ ಮಳೆ ಪರಿಹಾರಕ್ಕಿಂತ ಚುನಾವಣೆ ಮುಖ್ಯವಾಗಿದೆ: ಕುಮಾರಸ್ವಾಮಿ
"ನಾನು ಎಚ್. ಡಿ. ದೇವೇಗೌಡರಾದಿಯಾಗಿ ಹಲವು ಬಾರಿ ಚುನಾವಣೆಯಲ್ಲಿ ಸೋತಿದ್ದೇವೆ. ನಾವೆಂದೂ ಕೂಡ ಪಕ್ಷದ ಕಾರ್ಯಕರ್ತರನ್ನು ಸೋಲಿಗೆ ಹೊಣೆ ಮಾಡಿಲ್ಲ. ಕಾರ್ಯಕರ್ತರು ನನ್ನನ್ನು ಸೋಲಿಸಿದ್ದೀರಿ ಎಂದು ರೇಗಾಡಿಲ್ಲ. ನಮ್ಮ ಕೆಲವು ತಪ್ಪುಗಳಿಂದ ಸೋಲುಂಟಾಗುತ್ತದೆ. ಅದಕ್ಕೆ ಕಾರ್ಯಕರ್ತರನ್ನು ದೂರುವುದು ಸರಿಯಲ್ಲ" ಎಂದು ಸಿದ್ದರಾಮಯ್ಯ ವರ್ತನೆಗೆ ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗು ಅವಿನಾಭಾವ ಸಂಬಂಧ ಇದೆ. 2006ರಿಂದಲು ನಾನು ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಅವಿನಾಭಾವ ಸಂಬಂಧ ಇದೆ. 2013ರಲ್ಲೇ ನಾನು ಮಂಜೇಗೌಡರನ್ನ ಅಭ್ಯರ್ಥಿಯಾಗಿ ನಿಲ್ಲಿಸುತ್ತಿದ್ದೆ. ಕಾರಣಾಂತರದಿಂದ ಅಂದು ಅದು ಸಾಧ್ಯವಾಗಲಿಲ್ಲ. ಇದೀಗ ನಮ್ಮ ಪಕ್ಷಕ್ಕೆ ಬರಲು ಅರ್ಜಿ ಹಾಕಿದ್ದಾರೆ. ಇಂದು ಸಂಜೆ ನಡೆಯುವ ಪಕ್ಷದ ಮುಖಂಡರ ಸಭೆಯಲ್ಲಿ ಇದನ್ನು ತೀರ್ಮಾನ ಮಾಡುತ್ತೇವೆ. ಕಾರ್ಯಕರ್ತರು, ಮುಖಂಡರು ನೀಡುವ ಸಲಹೆ ಮೇರೆಗೆ ಅಭ್ಯರ್ಥಿ ಆಯ್ಕೆ ಆಗಲಿದೆ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಂದೇಶ ನಾಗರಾಜ್ ಜೆಡಿಎಸ್ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಂದೇಶ್ ನಾಗರಾಜ್ಗೆ ಜೆಡಿಎಸ್ ಬಾಗಿಲು ಮುಚ್ಚಿದೆ. ಅವರು ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನು ಮಾಡಲ್ಲ. ಇಂದು ಸಂಜೆ ಜೆಡಿಎಸ್ ಸಭೆ ಇದೆ ಅಲ್ಲಿ ಅಭ್ಯರ್ಥಿ ತೀರ್ಮಾನ ಆಗುತ್ತದೆ. ಸಂದೇಶ್ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಗೊತ್ತಿಲ್ಲ. ಅವರು ಯಾರನ್ನು ಸಂಪರ್ಕ ಮಾಡಿದರು ಅದು ನನಗೆ ಗೊತ್ತಿಲ್ಲ" ಎಂದರು.
ಮಹತ್ತರ ಬೆಳವಣಿಗೆ; ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ನಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿತು. ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಆಪ್ತ ಹಾಗೂ ಮೈಮುಲ್ ಮಾಜಿ ಅಧ್ಯಕ್ಷ ಸಿದ್ದೇಗೌಡ ಮನೆಯಲ್ಲಿ ಕುಮಾರಸ್ವಾಮಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸಿದ್ದೇಗೌಡ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಭೋಜನ ಸ್ವೀಕರಿಸಿದರು. ಈ ವೇಳೆ ಕುಮಾರಸ್ವಾಮಿ ಅವರೊಂದಿಗೆ ಸಿದ್ದೇಗೌಡ ಮನೆಗೆ ಸಂದೇಶ್ ನಾಗರಾಜ್, ಸಾ. ರಾ. ಮಹೇಶ್ ಕೂಡ ಆಗಮಿಸಿ ಔತಣಕೂಟದಲ್ಲಿ ಭಾಗಿಯಾಗಿದ್ದರು.
ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಟೆಕೆಟ್ ಆಕಾಂಕ್ಷಿಯಾಗಿದ್ದ ಸಂದೇಶ್ ನಾಗರಾಜ್ಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಈ ಹಿನ್ನೆಲೆಯಲ್ಲಿ ಪಕ್ಷ ತೊರೆದು ಅತಂತ್ರರಾಗಿರುವ ಸಂದೇಶ್ ನಾಗರಾಜ್ ಹಾಗೂ ಕುಮಾರಸ್ವಾಮಿ ಭೇಟಿ ಕುತೂಹಲ ಮೂಡಿಸಿದೆ.