ಅವೈಜ್ಞಾನಿಕ ಕಾಮಗಾರಿ: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮತ್ತೆ ಅಪಾಯ!
ಮೈಸೂರು, ಆಗಸ್ಟ್, 19: ಚಾಮುಂಡಿಬೆಟ್ಟದ ನಂದಿ ಮಾರ್ಗದ ರಸ್ತೆ ದುರಸ್ತಿ ಕಾಮಗಾರಿ 10 ತಿಂಗಳ ಬಳಿಕ ಏನೋ ಶುರುವಾಯಿತು. ಆದರೆ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಇದೀಗ ಬೆಟ್ಟಕ್ಕೆ ಮತ್ತಷ್ಟು ಅಪಾಯ ಉಂಟಾಗುವ ಆತಂಕ ಎದುರಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರು ನೀಡಿರುವ ವರದಿಯಂತೆ ವೈಜ್ಞಾನಿಕ ಹಾಗೂ ಹೊಸ ತಂತ್ರಜ್ಞಾನದ ಮೂಲಕ ಕಾಮಗಾರಿಗೆ ವೆಚ್ಚವನ್ನು ಭರಿಸಲಾಗಿತ್ತು. ಲೋಕೋಪಯೋಗಿ ಇಲಾಖೆ 9.75 ಕೋಟಿ ರೂಪಾಯಿ ಅಂದಾಜು ವೆಚ್ಚವನ್ನು ಭರಿಸಿತ್ತು. ಆದರೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಕೆಲ ಮೀಟರ್ಗಳ ಅಂತರದಲ್ಲಿಯೇ ರಸ್ತೆ ಬಿರುಕುಬಿಟ್ಟಿದೆ. ಮಳೆ ಹೆಚ್ಚಾಗಿ ಸುರಿದರೆ ಬಿರುಕು ಬಿಟ್ಟಿರುವ ಜಾಗದಲ್ಲಿ ನೀರು ಸೇರ್ಪಡೆಯಾಗುತ್ತದೆ. ನೀರು ಸೇರ್ಪಡೆಯಾದರೆ ಈ ಭಾಗವೂ ಕುಸಿಯುವುದು ಖಚಿತ ಎಂದು ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಡೇ ಆಷಾಢ ಶುಕ್ರವಾರ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತಸಾಗರ
ಇನ್ನು ಉತ್ತನಹಳ್ಳಿ ಕಡೆಯಿಂದ ನಂದಿಗೆ ಬರುವ ರಸ್ತೆ ಕೂಡ ಅಪಾಯದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿ ನಡೆಯುತ್ತಿರುವ ಜಾಗದಿಂದ ಮಣ್ಣು ತುಂಬಿದ್ದ ಟಿಪ್ಪರ್ ಲಾರಿಗಳು ನಿರಂತರವಾಗಿ ಸಂಚಾರಿಸುತ್ತವೆ. ಇದರಿಂದ ಕಿರಿದಾದ ಈ ರಸ್ತೆಗೆ ಹೆಚ್ಚಿನ ಒತ್ತಡ ಬಿದ್ದಿದೆ. ಜೊತೆಗೆ ಅಲ್ಲಲ್ಲಿ ಸಣ್ಣ ಬಂಡೆಗಳು ಕುಸಿಯುತ್ತಿದ್ದು,ಮಣ್ಣಿನ ಸವಕಳಿ ಸಂಭವಿಸುತ್ತಿದೆ. ಚಾಮುಂಡಿಬೆಟ್ಟದ ನಂದಿ ದೇಗುಲಕ್ಕೆ ತೆರಳುವ ರಸ್ತೆ ದುರಸ್ತಿ ಕಾಮಗಾರಿಯಲೂ ಟಿಪ್ಪರ್ ಲಾರಿಗಳ ಸಂಚಾರ ಹೆಚ್ಚಾಗಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಮತ್ತಷ್ಟ ಹಾಳಾಗಿದೆ.
ದುರಂತಗಳನ್ನು ತಪ್ಪಿಸಲು ಕ್ರಮ
ಬೆಟ್ಟದಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಬಾರದು ಎಂಬ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರು ಮೂರು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದರು. ನಂದಿಗೆ ಹೋಗುವ ರಸ್ತೆಯಲ್ಲಿ ಕುಸಿತವಾಗಿದ್ದ ಸ್ಥಳವನ್ನು ಪರಿಶೀಲಿಸಲಾಗಿದ್ದು, ಮಣ್ಣಿನ ಸ್ಯಾಂಪಲ್ ತೆಗೆದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದರು. ನಂತರ ತಂತ್ರಜ್ಞಾನದ ಮೂಲಕ ರಸ್ತೆಯನ್ನು ಯಥಾಸ್ಥಿತಿಗೆ ತರಲು ತಗಲುವ ವೆಚ್ಚದೊಂದಿಗೆ ಸಮಗ್ರ ವರದಿ ಸಲ್ಲಿಸಿದ್ದರು.
ಭೂಕುಸಿತ ಪ್ರದೇಶದಲ್ಲಿ ತಡೆಗೋಟೆ ನಿರ್ಮಾಣ
ಭೂಮಿ ಕುಸಿದಿದ್ದ ಸ್ಥಳದದಿಂದ ಮಣ್ಣನ್ನು ತೆಗೆದು, ತಳಮಟ್ಟದಲ್ಲಿ ಕಾಂಕ್ರಿಟ್ ಬೇಸ್ ಮೆಂಟ್ ಹಾಕಬೇಕಾಗುತ್ತದೆ. ಇದರ ಆಧಾರದ ಮೇಲೆ ಸುಭದ್ರವಾಗಿ ತಡೆಗೋಡೆ ನಿರ್ಮಿಸುವುದು. ಭೂಕುಸಿದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದರೆ ಮುಂದೆ ದುರಂತ ಸಂಭವಿಸದಂತೆ ನೋಡಿಕೊಳ್ಳಬಹುದು ಎಂಬುದು ವರದಿಯ ಸಾರಾಂಶವಾಗಿದೆ.
2021ರಲ್ಲಿ ನಾಲ್ಕು ಬಾರಿ ಭೂಕುಸಿತ
2021ರ ಅಕ್ಟೋಬರ್ 21ರಂದು ಭಾರಿ ಮಳೆಯ ಸುರಿದ ಪರಿಣಾಮ ಚಾಮುಂಡಿ ಬೆಟ್ಟದ ನಂದಿ ವಿಗ್ರಹ ಬಳಿ ಭೂಕುಸಿತ ಉಂಟಾಗಿತ್ತು. ನಂತರ ನವೆಂಬರ್ 5ರಂದು 50 ಮೀಟರ್ನಷ್ಟು ಬಿರುಕು ಬಿಟ್ಟು ರಸ್ತೆಯ ಅರ್ಧ ಭಾಗ ಕುಸಿದಿತ್ತು. ತಿಂಗಳೊಳಗೆ 4 ಬಾರಿ ಬೆಟ್ಟದಲ್ಲಿ ಭೂಕುಸಿತವಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಸದ್ಯ ಮುಂಜಾಗ್ರತಾ ಕ್ರಮವಾಗಿ ಆ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. 2019ರಿಂದಲೂ ಮಳೆಗಾಲದಲ್ಲಿ ಚಾಮುಂಡಿ ಬೆಟ್ಟದ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ.
ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂಕುಸಿತ ಉಂಟಾಗಿ 8 ತಿಂಗಳು ಕಳೆದರೂ ದುರಸ್ತಿ ಕಾಮಗಾರಿ ಶುರು ಮಾಡದೇ ಇರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಆಗಿದೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಅಪಾಯ ತಡೆಗೆ ಅಭಿಪ್ರಾಯಗಳು
ಬೆಟ್ಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಿಂದೆಂದಿಗಿಂತಲೂ ಈಗ ಅಧಿಕವಾಗಿದೆ. ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಬರುವುದರಿಂದ ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳು ಕೂಡ ಬೆಟ್ಟದ ಆಯುಷ್ಯವನ್ನು ಕಡಿಮೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಬೆಟ್ಟವನ್ನು ಅಪಾಯ ಮಟ್ಟದಿಂದ ತಪ್ಪಿಸಬೇಕೆಂದು ನಗರದ ಪರಿಸರವಾದಿಗಳ ಅಭಿಪ್ರಾಯವಾಗಿದೆ.