ಮರಿಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!
ಮೈಸೂರು, ಜುಲೈ 20 : ದಂಡಾಧಿಕಾರಿಗಳೂ ಹಾಗೂ ಜಿಲ್ಲಾಧಿಕಾರಿಗಳೂ ಆದಂತಹ ಸಿ.ಶಿಖಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮರೀಗೌಡನನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದಲ್ಲಿ 'ಅರಿವು' ಸಂಸ್ಥೆ ಗಾಳಿಪಟ ಹಾರಿಸುವ ಮೂಲಕ ಬುಧವಾರ ವಿಭಿನ್ನ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗೆ ಧಮಕಿ ಹಾಕಿದ ಪ್ರಕರಣ ನಡೆದು ಸುಮಾರು 18 ದಿನ ಕಳೆದರೂ ಪೊಲೀಸರು ಮರಿಗೌಡನನ್ನು ಬಂಧಿಸುವಲ್ಲಿ ವಿಫಲರಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮರೀಗೌಡ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಂತಿರುವುದರಿಂದ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ ಎಂಬ ಕಿಡಿಮಾತು ಕೇಳಿಬರುತ್ತಿದೆ. [ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಮೈಸೂರಿನ ಸೆಷನ್ಸ್ ನ್ಯಾಯಾಲಯ ಮರಿಗೌಡನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದರೂ ಪೊಲೀಸರಿಗೆ ಆತನನ್ನು ಹಿಡಿಯಲಾಗಿಲ್ಲ. ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ಶಿಖಾರನ್ನು ಏಕವಚನದಲ್ಲಿ ನಿಂದಿಸಿದ್ದ ಮರೀಗೌಡ ಅವರು ತಲೆಮರೆಸಿಕೊಂಡಿದ್ದಾನೆ. [ಮರೀಗೌಡರಿಗೆ ನಿರೀಕ್ಷಣಾ ಜಾಮೀನು ನಕಾರ]
ಇಷ್ಟೆಲ್ಲ ಆದರೂ ನಿರ್ಲಿಪ್ತವಾಗಿ ಕೂತಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮ ಖಂಡಿಸಿದ ಅರಿವು ಸಂಸ್ಥೆ, ನಗರದ ದೊಡ್ಡಕೆರೆ ಮೈದಾನದಲ್ಲಿ, ಕಾಗೆ ಹಾಗೂ ಮರೀಗೌಡನ ಭಾವಚಿತ್ರವಿರುವ ಗಾಳಿಪಟವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಣಕು ಪ್ರದರ್ಶನವನ್ನು ನಡೆಸಿತು.
ವಿಭಿನ್ನ ರೀತಿಯ ಪ್ರತಿಭಟನೆಯಲ್ಲಿ ಅರಿವು ಸಂಸ್ಥೆಯ ಸಂಸ್ಥಾಪಕರಾದ ಶ್ರೀಕಾಂತ್ ಕಶ್ಯಪ್, ಯುವ ಮುಖಂಡ ವಿಕ್ರಮ್, ಜೋಗಿ ಮಂಜು, ರವಿತೇಜ, ಆನಂದ್, ಮುರುಳಿ, ಸ್ವಾಮಿ, ಸಂದೀಪ್ ಭಾಗವಹಿಸಿ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಒಂದು ಕಡೆಯಾದರೆ, ಡಿವೈಎಸ್ಪಿ ಎಂ.ಕೆ.ಗಣಪತಿ, ಕಲ್ಲಪ್ಪ, ಐಎಎಸ್ ಅಧಿಕಾರಿ ರವಿ ಅವರ ಆತ್ಮಹತ್ಯೆಗಳು ನಡೆದಿರುವುದು ಸರ್ಕಾರದ ದುರ್ಬಲದ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ತವರಲ್ಲೇ ಮಹಿಳಾ ಅಧಿಕಾರಿಗೆ ರಕ್ಷಣೆಯಿಲ್ಲ ಅಂದ ಮೇಲೆ ಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು. ಅಲ್ಲದೆ ಕೂಡಲೇ ಮರೀಗೌಡ ಎಲ್ಲೇ ತಲೆಮರೆಸಿಕೊಂಡಿದ್ದರೂ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. [ಡಿಸಿ ಕೆಲಸಕ್ಕೆ ಅಡ್ಡಿಪಡಿಸಿದ ಮರೀಗೌಡರಿಗೆ ಬಂಧನ ಭೀತಿ]