ಲೋಕ ಸಮರಕ್ಕೆ ಧುಮುಕಿದ ಮೈಸೂರಿನ ಇಬ್ಬರು ಹಿರಿಯ ನಾಗರೀಕರು!
ಮೈಸೂರು, ಮಾರ್ಚ್ 20: ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಯಡಿಯೂರಪ್ಪ ಹಾಗೂ ಶ್ರೀನಿವಾಸಯ್ಯ ಎಂಬ ಇಬ್ಬರು ಹಿರಿಯ ನಾಗರೀಕರು ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣದ ನಿವಾಸಿ 66 ವರ್ಷದ ಪಿ.ಎಸ್.ಯಡೂರಪ್ಪ ನಿವೃತ್ತ ಸರ್ಕಾರಿ ನೌಕರ. ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ, ಕಳೆದ 10 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಇಂದು ಬೆಂಬಲಿಗರೊಡನೆ ಬಂದ ಯಡೂರಪ್ಪ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಗೆ ನಾಮಪತ್ರ ಸಲ್ಲಿಸಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಕೆ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡೂರಪ್ಪ, ಚುನಾವಣೆ ಎದುರಿಸುವುದು ಕಷ್ಟ. ಆದರೂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಬಹುದು. ಪ್ರಸ್ತುತ ರಾಜಕಾರಣ ಕಷ್ಟಕರ. ಆದರೂ ಜನಸೇವೆ ಮಾಡಬೇಕೆಂಬ ಆಸೆಯಿಂದ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದಿದ್ದಾರೆ.
ಅಭ್ಯರ್ಥಿಗಳು ಕುಟುಂಬದವರ ವಿರುದ್ಧ ಕೇಸ್ ಇದ್ದರೂ ಬಹಿರಂಗಪಡಿಸುವುದು ಕಡ್ಡಾಯ
ಪಾಲಿಕೆಯ ನಿವೃತ್ತ ನೌಕರ 80 ವರ್ಷದ ಶ್ರೀನಿವಾಸಯ್ಯ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದ ಶ್ರೀನಿವಾಸಯ್ಯ, ಪ್ರಸ್ತುತ ರಾಜಕಾರಣದ ಬಗ್ಗೆ ಬೇಸತ್ತು ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ . ಎಲ್ಲೆಡೆ ಅತ್ಯಾಚಾರ, ರೆಸಾರ್ಟ್ ರಾಜಕಾರಣ ನೋಡಿ ಬೇಸತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ ಎಂದು ತಿಳಿಸಿದರು.