ದಸರಾ ಆನೆ ಕಾವೇರಿಗೆ ಚುಚ್ಚಿದ ಮೊಳೆ; ಜಾಗರೂಕರಾಗಿರಲು ಸೂಚನೆ
Recommended Video
ಮೈಸೂರು, ಸೆಪ್ಟೆಂಬರ್ 23: ವಿಶ್ವ ವಿಖ್ಯಾತ ಮೈಸೂರು ದಸರಾ 7 ದಿನಗಳ ಅಂತರದಲ್ಲಿರುವಾಗಲೇ ಅರಣ್ಯ ಇಲಾಖೆಯ ಆನೆ ಕಾವೇರಿಯ ಕಾಲಿಗೆ ಮೊಳೆ ಚುಚ್ಚಿಕೊಂಡಿದ್ದು, ಅದನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದೆ.
ಭಾನುವಾರ ದೈನಂದಿನ ಅಭ್ಯಾಸದ ಅಂಗವಾಗಿ, 12 ದಸರಾ ಆನೆಗಳನ್ನು ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಐದು ಕಿಲೋ ಮೀಟರ್ ವಾಡಿಕೆಯಂತೆ ಕರೆದೊಯ್ಯಲಾಯಿತು. ಬೆಳಿಗ್ಗೆ 7.25ರ ಸುಮಾರಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ಬಲರಾಮ ಗೇಟ್ನಿಂದ ಆನೆ ತಂಡ ಹೊರಟಾಗ, ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಕಾವೇರಿ ಇದ್ದಕ್ಕಿದ್ದಂತೆ ನಡೆಯುವುದನ್ನು ನಿಲ್ಲಿಸಿತು. ಮಾವುತರು ಆನೆಯನ್ನು ಎಳೆದರೂ ಅದು ಮುಂದೆ ಹೆಜ್ಜೆ ಇಡಲಿಲ್ಲ. ನಂತರ ಆನೆಯ ಮುಂಗಾಲುಗಳನ್ನು ಮೇಲೆತ್ತಲು ಸೂಚಿಸಿ ನೋಡಿದಾಗ ಎರಡು ಮೊಳೆಗಳು ಚುಚ್ಚಿಕೊಂಡಿರುವುದು ಪತ್ತೆ ಆಯಿತು. ನಂತರ ಮಾವುತರೇ ಅವುಗಳನ್ನು ಹೊರ ತೆಗೆದು ಔಷಧಿ ಹಾಕಿದರು. ಮೊಳೆ ತೆಗೆದಾಗ ರಕ್ತ ಬಾರದಿದ್ದುದು ಕೊಂಚ ನೆಮ್ಮದಿ ತಂದಿತು.
ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಅರ್ಜುನ
ಆಶ್ಚರ್ಯಕರ ಸಂಗತಿಯೆಂದರೆ, ಜಂಬೂ ಸವಾರಿ ಮಾರ್ಗದಲ್ಲಿ ಆನೆಗಳ ಮುಂದೆ ಚಲಿಸುವ ವಾಹನಕ್ಕೆ ಸ್ಥಿರವಾಗಿರುವ, ಸ್ವಯಂಚಾಲಿತ ಅಯಸ್ಕಾಂತದ ಉಪಕರಣವನ್ನು ಅಳವಡಿಸಲಾಗಿದ್ದರೂ ಇದು ರಸ್ತೆಯಲ್ಲಿದ್ದ ಮೊಳೆಗಳನ್ನು ಗುರುತಿಸಲಿಲ್ಲ. ಇದು ಯಂತ್ರದ ಕಾರ್ಯ ಕ್ಷಮತೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾನುವಾರವಾದ್ದರಿಂದ, ಆನೆಗಳ ಮೆರವಣಿಗೆಗೆ ಸಾಕ್ಷಿಯಾಗಲು ಹೆಚ್ಚಿನ ಸಂಖ್ಯೆಯ ಜನರು ಬಲರಾಮ ಗೇಟ್ ಬಳಿ ಜಮಾಯಿಸಿದ್ದರು. ಮೊಳೆಗಳು ಕಾವೇರಿಯನ್ನು ಚುಚ್ಚುವ ಸುದ್ದಿ ಹರಡುತ್ತಿದ್ದಂತೆ, ಜನರು ಈ ಪ್ರದೇಶದಲ್ಲಿ ತೀಕ್ಷ್ಣವಾದ ವಸ್ತುಗಳನ್ನು ಹುಡುಕಲಾರಂಭಿಸಿದರು ಮತ್ತು ಬೆರಳೆಣಿಕೆಯಷ್ಟು ಮೊಳೆಗಳನ್ನು ಸಾರ್ವಜನಿಕರೇ ತೆಗೆದು ದೂರ ಹಾಕಿದರು.
ದಸರಾ ಸಂದರ್ಭದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ವಿವಿಧ ಕಾರ್ಯಕ್ರಮಗಳ ಆಯೋಜಕರು ಕಾರ್ಮಿಕರ ಡೇರೆಗಳು, ಶಾಮಿಯಾನಗಳು, ಹೋರ್ಡಿಂಗ್ ಗಳು ಮತ್ತು ಜರ್ಮನ್ ಡೇರೆಗಳನ್ನು ನಿರ್ಮಿಸುತ್ತಾರೆ. ಆದರೆ ಡೇರೆಗಳನ್ನು ಹಾಕುವಾಗ, ಕಾರ್ಮಿಕರು ಅಜಾಗರೂಕತೆಯಿಂದ ರಸ್ತೆಯಲ್ಲೇ ಮೊಳೆಗಳನ್ನು ಬಿಡುತ್ತಾರೆ ಮತ್ತು ನಂತರ ಅವುಗಳನ್ನು ತೆಗೆಯುವುದಿಲ್ಲ. ಈ ನಿರ್ಲಕ್ಷ್ಯದಿಂದಾಗಿ ಮೂಕ ಪ್ರಾಣಿಗಳು ಅಪಾಯ ಎದುರಿಸುವಂತಾಗಿದೆ.
ದಸರೆಗೆ ಮುನ್ನವೇ ಹಿಂತಿರುಗಿ ಹೋಗುವನೇ ಈಶ್ವರ ಆನೆ?
ಕಾವೇರಿ ಆನೆಯ ಕಾಲಿಗೆ ಮೊಳೆ ಚುಚ್ಚಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡರೂ, ಇದು ಒಂದು ಸಣ್ಣ ಘಟನೆ ಎಂದು ಅವರು ಹೇಳಿದರು. "ಇನ್ನುಮುಂದೆ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ "ಎಂದು ದಸರಾ ಆನೆಗಳ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ಪಶುವೈದ್ಯ ಡಾ.ಡಿ.ಎನ್.ನಾಗರಾಜು ಹೇಳಿದರು.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಉಪ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಲೆಕ್ಸಾಂಡರ್, "ಇದು ಸಣ್ಣ ವಿಷಯ. ಕಾಡುಗಳಲ್ಲಿಯೂ ಆನೆಗಳಿಗೆ ಬಿದಿರಿನ ಮುಳ್ಳುಗಳು ಮತ್ತು ಇತರ ಚೂಪಾದ ಮರಗಳು ಚುಚ್ಚುತ್ತವೆ. ನಾವು ಕಾವೇರಿಯ ಕಾಲಿಗೆ ಚುಚ್ಚಿಕೊಂಡಿದ್ದ ಒಂದು ಮೊಳೆಯನ್ನು ತೆಗೆದುಹಾಕಿದ್ದೇವೆ. ಜಾಗರೂಕರಾಗಿರಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ" ಎಂದರು.