ನಾಗರಹೊಳೆ ಉದ್ಯಾನದಲ್ಲಿ ತೇಗದ ಮರ ಕದಿಯಲೆತ್ನಿಸಿದ ಇಬ್ಬರ ಬಂಧನ
ಮೈಸೂರು, ಜುಲೈ 14: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ತೇಗದ ಮರವನ್ನು ಕಡಿಯಲೆತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. ಮರ ಕಡಿದು ಸಾಗಿಸಿ ಹಣ ಸಂಪಾದಿಸುವ ದುಸ್ಸಾಹಸಕ್ಕೆ ನಾಲ್ವರು ಕೈ ಹಾಕಿದ್ದರು. ಇವರಲ್ಲಿ ಇಬ್ಬರು ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ದಕ್ಷಿಣ ಕೊಡಗಿನ ನಿಟ್ಟೂರು ಕಾರ್ಮಾಡು ಗ್ರಾಮದ ಶರತ್ ಮತ್ತು ಚಾಮ ಬಂಧಿತರಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ತೇಗದ ಮರಗಳನ್ನು ಬೆಳೆಸಲಾಗಿದೆ. ಈ ಮರಗಳನ್ನು ಕಡಿದು ಸಾಗಾಟ ಮಾಡಿದರೆ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದಿಸಬಹುದೆಂಬ ಉದ್ದೇಶದಿಂದ ನಿಟ್ಟೂರು ಕಾರ್ಮಾಡು ಗ್ರಾಮದ ಶರತ್, ಚಾಮ, ಅಪ್ಪಣ್ಣ ಮತ್ತು ಚಂದ ಎಂಬ ನಾಲ್ವರು ಹೊಂಚು ಹಾಕಿದ್ದಾರೆ. ಅರಣ್ಯ ಸಿಬ್ಬಂದಿ ಇಲ್ಲದ ಸಮಯವನ್ನು ನೋಡಿಕೊಂಡು ನಾಗರಹೊಳೆ ವನ್ಯಜೀವಿ ವಿಭಾಗದ ಕಲ್ಲಳ್ಳ ವಲಯ ವ್ಯಾಪ್ತಿಯ ತಟ್ಟೆಕೆರೆ ಅರಣ್ಯಕ್ಕೆ ತೆರಳಿದ್ದಾರೆ.
ಬಳಿಕ ತೇಗದ ಮರವೊಂದನ್ನು ಕಡಿಯಲು ಮುಂದಾಗಿದ್ದಾರೆ. ಈ ವೇಳೆ ಕೇಳಿ ಬಂದ ಶಬ್ದದಿಂದ ಎಚ್ಚೆತ್ತ ಅರಣ್ಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಆರೋಪಿಗಳಾದ ಶರತ್, ಚಾಮ ಎಂಬಿಬ್ಬರು ಮಾಲು ಸಹಿತ ಸಿಕ್ಕಿಬಿದ್ದರೆ, ಅಪ್ಪಣ್ಣ ಮತ್ತು ಚಂದ ಪರಾರಿಯಾಗಿದ್ದಾರೆ. ಇವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.