ಬಾಯ್ ಫ್ರೆಂಡ್ ಗೆ ಗುಲಾಬಿ ನೀಡಿದ್ದಕ್ಕಾಗಿ ಹೊಡೆದಾಡಿಕೊಂಡ ಹೈಸ್ಕೂಲ್ ಹುಡುಗಿಯರು
ಮೈಸೂರು, ಫೆಬ್ರವರಿ 08: ಬಾಯ್ ಫ್ರೆಂಡ್ ಗೋಸ್ಕರ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲಿ ಹೊಡೆದಾಡಿಕೊಂಡ ಘಟನೆ ಆನೇಕಲ್ ನಲ್ಲಿ ನಿನ್ನೆ ಗುರುವಾರ (ಫೆ.08) ನಡೆದಿದೆ.
ಪ್ರೇಮಿಗಳ ದಿನಾಚರಣೆ ಮುನ್ನ ನಿನ್ನೆ ಗುಲಾಬಿ ದಿನದ ಅಂಗವಾಗಿ ಇಬ್ಬರು ವಿದ್ಯಾರ್ಥಿನಿಯರು ಒಬ್ಬ ಹುಡುಗನಿಗೆ ಗುಲಾಬಿ ಹೂ ನೀಡಿದರು. ಈ ಘಟನೆಯೇ ಹೊಡೆದಾಟಕ್ಕೆ ಕಾರಣ ಎನ್ನಲಾಗಿದೆ. ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಹೊಸೂರು ಸರ್ಕಾರಿ ಹೈಸ್ಕೂಲ್ ಹುಡುಗಿಯರಿಬ್ಬರು ಹೊಡೆದಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ : ರಾಖಿ ಸಾವಂತ್ ಇನಿಯನಿಗೆ ಬಿತ್ತು ಭರ್ತಿ ಒದೆ
ತನ್ನ ಬಾಯ್ ಫ್ರೆಂಡ್ ಗೆ ಹೂ ನೀಡಿದ್ದಾಳೆಂದು ಗುಂಪು ಕಟ್ಟಿಕೊಂಡು ಬಂದು ಮತ್ತೋರ್ವ ವಿದ್ಯಾರ್ಥಿನಿಗೆ ಹೊಡೆದಿದ್ದಾಳೆ. ಹೈಸ್ಕೂಲ್ ಹುಡುಗಿಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಡೆದಾಟ ನೋಡಿದ ಪ್ರಯಾಣಿಕರು ಗಲಾಟೆ ಬಿಡಿಸಿ ಮನೆಗೆ ಕಳುಹಿಸಿದ್ದಾರೆ.
ಹೊಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ರಂಪಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.