ಏನಿದು "ಡಬಲ್ ಇಂಜಿನ್" ಹಾವು? ಅದೃಷ್ಟದ ನೆಪದಲ್ಲಿ ಮಾರಾಟ ದಂಧೆ
ಮೈಸೂರು, ಫೆಬ್ರವರಿ 25: ಕಷ್ಟಪಟ್ಟು ದುಡಿಯದೆ ಸುಲಭವಾಗಿ ಅದೃಷ್ಟ ಒಲಿದು ಬರುತ್ತದೆ ಎನ್ನುವುದು ಡೋಂಗಿತನ. ಆದರೂ ಬಹಳಷ್ಟು ಜನ ಕುಳಿತಲ್ಲೇ ಶ್ರೀಮಂತರಾಗಬೇಕೆಂದು ಬಯಸುತ್ತಾರೆ. ಇಂಥವರು ಅದೃಷ್ಟವನ್ನು ನಂಬುತ್ತಾರೆ. ಜೊತೆಗೆ ಬಹುಬೇಗ ಮೂಢನಂಬಿಕೆಗೂ ಜೋತು ಬೀಳುತ್ತಾರೆ. ಇಂತಹವರನ್ನೇ ಟಾರ್ಗೆಟ್ ಮಾಡಿ ಹಣ ಲಪಟಾಯಿಸುವವರೂ ಇದ್ದಾರೆ.
ಬಿಳಿ ಗೂಬೆ, ಎರಡು ತಲೆ ಹಾವು, ನಕ್ಷತ್ರ ಆಮೆ ಹೀಗೆ ವಿವಿಧ ಪ್ರಾಣಿಗಳ ಬಗ್ಗೆ ವಿಚಿತ್ರವಾದ ನಂಬಿಕೆಯನ್ನು ಹುಟ್ಟಿಸಿ ಅವು ಅದೃಷ್ಟ ತರುವ ಜೀವಗಳು, ಮನೆಯಲ್ಲಿದ್ದರೆ ಅದೃಷ್ಟ ಒಲಿದು ಬರುತ್ತದೆ ಎಂಬಂತೆ ನಂಬಿಸಿ ಹಣ ಮಾಡುವ ದೊಡ್ಡ ಜಾಲವೇ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ದಶಕಗಳ ಹಿಂದೆಯೇ ಈ ದಂಧೆ ಕಾರ್ಯಾಚರಣೆಯಲ್ಲಿತ್ತು. ಪ್ರತಿಯೊಂದು ಜೀವಿಗೂ ತಮ್ಮದೇ ಆದ ಕೋಡ್ ವರ್ಡ್ ಬಳಸಿಕೊಂಡು ವ್ಯವಹಾರ ನಡೆಸುತ್ತಿದ್ದರು. ಇಂತಹವರನ್ನು ಈ ಹಿಂದೆಯೇ ಬಂಧಿಸಲಾಗಿತ್ತಾದರೂ ದಂಧೆ ಮಾತ್ರ ನಿಂತಂತೆ ಕಾಣುತ್ತಿಲ್ಲ.
ಚಿಕ್ಕಮಗಳೂರಿನಲ್ಲಿ ಮೀನಿಗೆಂದು ಬಲೆ ಬೀಸಿದರೆ ಸಿಕ್ಕಿದ್ದೇ ಬೇರೆ!
ಎರಡು ತಲೆ ಹಾವಿಗೆ ಕೋಡ್ ವರ್ಡ್ ಡಬಲ್ ಇಂಜಿನ್!
ಮಣ್ಣು ಹಾವು, ಎರಡು ತಲೆ ಹಾವುಗಳನ್ನು ಬೇರೆಡೆಗೆ ಸಾಗಿಸಿ ಮಾರಾಟ ಮಾಡುವ ಜಾಲ ಈಗಾಗಲೂ ಕಾರ್ಯನಿರ್ವಹಿಸುತ್ತಿದೆ. ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಹಾವುಗಳನ್ನು ರಕ್ಷಿಸಲಾಗಿದೆ. ಇತ್ತೀಚೆಗಷ್ಟೆ ಕೊಡಗಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಡಬಲ್ ಇಂಜಿನ್ ಎಂಬ ಕೋರ್ಡ್ ವರ್ಡ್ ಮೂಲಕ ಎರಡು ತಲೆಯ ಹಾವುಗಳ ಸಂಗ್ರಹಣೆ ಮತ್ತು ಸಾಗಾಟ ಗೌಪ್ಯವಾಗಿ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಚಾಮರಾಜನಗರದಲ್ಲಿ ಎರಡು ತಲೆ ಹಾವು ಹಿಡಿದವರ ಬಂಧನ
ಬಂಧನಗಳು ಆಗುತ್ತಿದ್ದರೂ ಒಬ್ಬರಾದ ಮೇಲೆ ಮತ್ತೊಬ್ಬರು ಎಂಬಂತೆ ಖದೀಮರು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಹಳ್ಳಿಗರಿಗೆ ಒಂದಷ್ಟು ಹಣ ಕೊಟ್ಟು ಹಾವುಗಳನ್ನು ಪಡೆಯುವ ವಂಚಕರು ಬಳಿಕ ಅದನ್ನು ಬೇರೆಡೆಗೆ ಸಾಗಿಸುತ್ತಾರೆ. ಕೊಡಗಿನ ಕಾಡು ಮತ್ತು ಮಲೆಮಹದೇಶ್ವರ ವನ್ಯಧಾಮಗಳ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳನ್ನು ಸೆರೆ ಹಿಡಿದು ಸಾಗಿಸುವ ಪ್ರಕರಣಗಳು ಮೇಲಿಂದ ಮೇಲೆ ಬೆಳಕಿಗೆ ಬರುತ್ತಿವೆ. ಇದೀಗ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡು ತಲೆ ಹಾವು ಹಿಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾರ್ಟಳ್ಳಿ ಗ್ರಾಮದ ಫ್ರಾನ್ಸಿಸ್ ಸೆಲ್ವಂ ಹಾಗೂ ವಡ್ಡರದೊಡ್ಡಿ ಗ್ರಾಮದ ಚಾರ್ಲ್ಸ್ ಸರ್ವಿಯರ್ ಎಂಬಿಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಹಾವನ್ನು ರಕ್ಷಿಸಿದ್ದಾರೆ.
ಅವರ ಚೀಲದಲ್ಲಿತ್ತು ಎರಡು ತಲೆ ಹಾವು
ಈ ವ್ಯಾಪ್ತಿಯಲ್ಲಿ ಹಾವು ಮಾರಾಟದ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಬಂದಿತ್ತು. ಹೀಗಾಗಿ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದು, ಅವರಿಗೆ ಹೂಗ್ಯಂ ವನ್ಯಜೀವಿ ವಲಯದ ಸಂದನಪಾಳ್ಯ ಗ್ರಾಮದಲ್ಲಿ ಫ್ರಾನ್ಸಿಸ್ ಸೆಲ್ವಂ ಹಾಗೂ ಚಾರ್ಲ್ಸ್ ಸರ್ವಿಯರ್ ಎಂಬಿಬ್ಬರು ಚೀಲದೊಂದಿಗೆ ನಿಂತಿರುವುದು ಕಾಣಿಸಿತ್ತು. ಸಂಶಯ ಬಂದು ಅವರನ್ನು ತಪಾಸಣೆ ಮಾಡಿದಾಗ ಅವರ ಬಳಿಯಿದ್ದ ಚೀಲದಲ್ಲಿ ಎರಡು ತಲೆಯ ಹಾವಿರುವುದು ಪತ್ತೆಯಾಗಿತ್ತು. ತಕ್ಷಣ ಅವರಿಬ್ಬರನ್ನು ಬಂಧಿಸಿ ಹಾವನ್ನು ವಶಪಡಿಸಿಕೊಳ್ಳಲಾಯಿತು.
ತೂಕ ಹೆಚ್ಚಲು ಹಾವಿಗೆ ಡಾಂಬರು ತಿನಿಸಿದ್ದರು
ವಿಚಾರಣೆ ವೇಳೆ ಅವರು ತಮಗೆ ಹಾವು ಜಮೀನಿನಲ್ಲಿ ಸಿಕ್ಕಿದ್ದಾಗಿಯೂ, ಅದನ್ನು ಕಾಡಿಗೆ ಬಿಡಲು ಹೊರಟಿದ್ದಾಗಿ ಹೇಳಿದ್ದಾರೆ. ಒಂದು ವೇಳೆ ಆ ರೀತಿಯೇ ಆಗಿದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬಹುದಿತ್ತು. ಮೇಲ್ನೋಟಕ್ಕೆ ಅವರ ಮಾತು ಕಟ್ಟುಕತೆಯಾಗಿದ್ದು, ಅವರ ಹಿಂದೆ ದೊಡ್ಡ ಜಾಲವೇ ಇರುವುದಂತು ಸತ್ಯ.
ಈ ಭಾಗದಲ್ಲಿ ಎರಡು ತಲೆಯ ಹಾವನ್ನು ಹಿಡಿಯುವ ದೊಡ್ಡ ಜಾಲವಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೂಡ ಎರಡು ತಲೆ ಹಾವನ್ನು ಹಿಡಿದು ಅದು ಹೆಚ್ಚು ತೂಕ ಬರಲಿ ಎಂಬ ಕಾರಣಕ್ಕೆ ಅದಕ್ಕೆ ಡಾಂಬರು ತಿನ್ನಿಸಿದ್ದರು. ಅದನ್ನು ಮಾರಾಟ ಮಾಡಿದ್ದರು. ಆದರೆ ಮಾರಾಟ ಮಾಡಿದ ಬಳಿಕ ಅದು ಸತ್ತಿತ್ತು. ಅರಣ್ಯಾಧಿಕಾರಿಗಳು ಪ್ರಕರಣದ ಕುರಿತಂತೆ ತನಿಖೆ ನಡೆಸಿ ಜಾಲದ ಹಿಂದಿರುವ ಕಾಣದ ಕೈಗಳನ್ನು ಮಟ್ಟ ಹಾಕಬೇಕಾಗಿದೆ. ಇಲ್ಲದೆ ಹೋದರೆ ಅಪರೂಪದ ಜೀವರಾಶಿಗಳು ಅಳಿದು ಹೋಗುವುದರಲ್ಲಿ ಸಂಶಯವಿಲ್ಲ.