ಟಿ.ನರಸೀಪುರ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ: ಹೆಡ್ ಕಾನ್ಸ್ ಟೆಬಲ್ಗಳ ಅಮಾನತು
ಮೈಸೂರು, ಜೂನ್ 04: ತಿ.ನರಸೀಪುರದ ಪೊಲೀಸ್ ಠಾಣೆಯಲ್ಲಿ 303 ಬಂದೂಕಿನ 50 ಬುಲೆಟ್ಗಳು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೆಡ್ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಲಾಗಿದೆ.
ಕೃಷ್ಣೇಗೌಡ ಮತ್ತು ನಿಂಗರಾಜು ಎಂಬುವರೇ ಅಮಾನತುಗೊಂಡ ಹೆಡ್ ಕಾನ್ಸಟೇಬಲ್ಗಳು.
ಟಿ.ನರಸೀಪುರ ಠಾಣೆಯಲ್ಲಿ ರೈಫಲ್ ನ 50 ಬುಲೆಟ್ಗಳೇ ನಾಪತ್ತೆ
ಎಲ್ಲ ಠಾಣೆಯ ಶಸ್ತ್ರಾಸ್ತ್ರಗಳ ಜವಾಬ್ದಾರಿ ಠಾಣೆಯ ರೈಟರ್ ಅವರದ್ದಾಗಿರುತ್ತದೆ. ಹಾಗಾಗಿ, ಶಸ್ತ್ರಾಸ್ತ್ರ ದಾಸ್ತಾನಿನ ಬೀಗದ ಕೀ ಕೂಡ ಅವರ ಬಳಿಯೇ ಇರುತ್ತದೆ. ಠಾಣೆಯ ಹಿಂದಿನ ರೈಟರ್ ಆಗಿದ್ದ ಕೃಷ್ಣೇಗೌಡ ಮತ್ತು ಪ್ರಸ್ತುತ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಂಗರಾಜು ಅವರನ್ನು ಅಮಾನತು ಮಾಡಿದ್ದು, ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುವ ಜವಾಬ್ದಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮದ್ದುಗುಂಡು ಪರಿಶೀಲನಾ ತಂಡದ್ದಾಗಿರುತ್ತದೆ. ಇವರು ನಿಗದಿತವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪರಿಶೀಲಿಸುತ್ತಾರೆ. ವಾಡಿಕೆಯಂತೆ ಕಳೆದ ಶನಿವಾರ, ಮೇ 30ರಂದು ಟಿ.ನರಸೀಪುರ ಠಾಣೆಯ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದಾಗ 50 ಬುಲೆಟ್ಗಳು ಕಡಿಮೆ ಇರುವುದು ಕಂಡುಬಂದಿತ್ತು.