ಗೂಬೆ ಮಾರಾಟದಿಂದ ಲಕ್ಷಾಧಿಪತಿಯಾಗಲು ಹೊರಟರು; ಮುಂದೇನಾಯ್ತು?
ಮೈಸೂರು, ನವೆಂಬರ್ 23: ಕಾಡಿನಲ್ಲಿ ಸಿಗುವ ಗೂಬೆಗಳನ್ನು ಹಿಡಿದು ಮಾರಾಟ ಮಾಡುವ ಮೂಲಕ ಯುವಕರಿಬ್ಬರು ಲಕ್ಷಾಧಿಪತಿಯಾಗಲು ಹೊರಟು ಈಗ ಅರಣ್ಯಾಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ.
ಜೆಟ್ ಏರ್ವೇಸ್ ನಲ್ಲಿ ಗೂಬೆ! ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ
ಆರೋಪಿಗಳು ನಾಗಮಂಗಲದ ಮೀಸಲು ಅರಣ್ಯದಲ್ಲಿ ಎರಡು ಗೂಬೆಗಳನ್ನು ಸೆರೆ ಹಿಡಿದು ಶುಕ್ರವಾರ ಸಂಜೆ ಮೈಸೂರಿನ ಉದ್ಯಮಿಗಳಿಗೆ, ಶ್ರೀಮಂತರಿಗೆ ತಲಾ ಐದು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಗೂಬೆಗಳನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಖುಲಾಯಿಸುತ್ತದೆ, ಹೀಗೆ ಇಟ್ಟುಕೊಂಡವರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಇವರು ಕಥೆ ಕಟ್ಟುತ್ತಿದ್ದರು.
ಈ ಯುವಕರು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಮಿಂಚಿನ ದಾಳಿ ನಡೆಸಿದ ಮೈಸೂರಿನ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಮತ್ತು ತಂಡದ ಬಲೆಗೆ ಬಿದ್ದಿದ್ದಾರೆ. ಗೂಬೆಗಳ ಮಾರಾಟಕ್ಕೆ ಯತ್ನಿಸುತಿದ್ದ ವ್ಯಕ್ತಿ ನಾಗಮಂಗಲ ತಾಲೂಕಿನ ಶಿಖರಿಪುರ ಗ್ರಾಮದ ಧವನಿಕುಮಾರ್ ಆಗಿದ್ದು, ಈತನ ಸಹ ಆರೋಪಿ ಪರಾರಿಯಾಗಿದ್ದಾನೆ. ಮೊಕದ್ದಮೆ ದಾಖಲು ಮಾಡಿಕೊಂಡಿರುವ ಅರಣ್ಯಾಧಿಕಾರಿಗಳು ಬಂಧಿತನನ್ನು ನಾಗಮಂಗಲ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.