ಶಾಲೆಗಳು ಆರಂಭಗೊಂಡು ಎರಡೂವರೆ ತಿಂಗಳಾದರೂ ವಿದ್ಯಾರ್ಥಿಗಳಿಗೆ ಸಿಗದ ಸಮವಸ್ತ್ರ, ಶೂ
ಮೈಸೂರು, ಆಗಸ್ಟ್ 1: ಕೊರೊನಾದಿಂದ ಎರಡು ವರ್ಷ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆದಿರಲಿಲ್ಲ. ಪರಿಣಾಮ ಈ ಬಾರಿ ಮೇ 16 ರಿಂದಲೇ ಶಾಲೆಗಳನ್ನು ತೆರೆದು ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಮಕ್ಕಳಿಗೆ ಬೇಕಾದ ಸಮವಸ್ತ್ರ ಹಾಗೂ ಶೂಗಳೇ ಇನ್ನೂ ಪೂರೈಕೆ ಆಗಿಲ್ಲ. ಜಿಲ್ಲೆಯಲ್ಲಿ 1,664 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 232 ಸರಕಾರಿ ಪ್ರೌಢಶಾಲೆಗಳಿವೆ. ಒಟ್ಟು 1.80 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಶೂ, ಸಾಕ್ಸ್ಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಬಹುತೇಕ ಸರಕಾರಿ ಶಾಲೆಗಳಲ್ಲಿ ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರು, ಗ್ರಾಮಾಂತರ ಭಾಗದವರು ಹಾಗೂ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಂಡಿರುತ್ತಾರೆ. ಕೊರೊನಾ ರಗಳೆ ಮುಗಿದು ಹೊಸ ಶಾಲೆಗೆ ಪ್ರವೇಶ ಪಡೆಯುವಾಗ ಆ ಮಕ್ಕಳು ಹೊಸ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ತೆರಳಬಹುದೆಂಬ ಕನಸು ಕಟ್ಟಿಕೊಂಡಿರುತ್ತಾರೆ.
ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿವಾದ: 132 ಕೋಟಿ ಕೊಟ್ಟು ಅಂತ್ಯವಾಡಿದ ಸಿಎಂ ಬೊಮ್ಮಾಯಿ
ಆದರೆ, 2022-23ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳಾದರೂ ಸರಕಾರಿ ಶಾಲೆಗಳಿಗೆ ಸಮವಸ್ತ್ರ ಬಂದಿಲ್ಲ. ಶೂ, ಸಾಕ್ಸ್ ಸಿಕ್ಕಿಲ್ಲ. ಇದರಿಂದ ಕೆಲವು ಮಕ್ಕಳು ಕಲರ್ ಬಟ್ಟೆ ಮತ್ತು ಹಲವು ವಿದ್ಯಾರ್ಥಿಗಳು ಕಳೆದ ವರ್ಷದ ಹಳೆಯ ಸಮವಸ್ತ್ರವನ್ನೇ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.
ಎರಡೂವರೆ ತಿಂಗಳಾದರೂ ಬಾರದ ಸಮವಸ್ತ್ರ
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಸರಿಯಾಗಿ ಶೈಕ್ಷಣಿಕ ಚಟುವಟಿಕೆ ನಡೆಯದ ಪರಿಣಾಮ ಈ ಬಾರಿ 15 ದಿನ ಮುನ್ನವೇ ಶಾಲೆ ಪ್ರಾರಂಭಿಸಲಾಗಿತ್ತು. ಮೇ 16ರಿಂದ 1ರಿಂದ 10ನೇ ತರಗತಿಗಳು ಆರಂಭವಾಗಿದ್ದವು. ಕೋವಿಡ್ನಿಂದ ಭಣಗುಡುತ್ತಿದ್ದ ಶಾಲೆಗಳಲ್ಲಿ ಇದೀಗ ಮಕ್ಕಳ ಕಲರವ ಕೇಳಿ ಬರುತ್ತಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಎರಡೂವರೆ ತಿಂಗಳಾದರೂ ಸಮವಸ್ತ್ರ ಬಾರದ ಕಾರಣ ಹಳೆ ಬಟ್ಟೆ ಧರಿಸಿಯೇ ಮಕ್ಕಳು ಶಾಲೆ ಕಡೆ ಹೆಜ್ಜೆ ಹಾಕುತ್ತಿದ್ದಾರೆ.
ಶಿಕ್ಷಕರಿಗೆ ತಲುಪದ ಕೈಪಿಡಿ
ಕೋವಿಡ್ನಿಂದ ಮಿಸ್ ಆದ ಪಾಠಗಳನ್ನು ಮನನ ಮಾಡಲು ಸರಕಾರ ಈ ವರ್ಷ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ, ಇದಕ್ಕೆ ಮಕ್ಕಳಿಗೆ ಕಲಿಕಾ ಹಾಳೆಗಳು ಹಾಗೂ ಶಿಕ್ಷಕರಿಗೆ ಕೈಪಿಡಿ ಕೊಡಬೇಕು. ಆದರೆ, ಕಲಿಕಾ ಚೇತರಿಕೆ ಅಂಶಗಳನ್ನು ಒಳಗೊಂಡಿರುವ ಶಿಕ್ಷಕರ ಕೈಪಿಡಿಯೇ ಸಾಕಷ್ಟು ಶಿಕ್ಷಕರಿಗೆ ಸಿಕ್ಕಲ್ಲ. ಇದರಿಂದ ಕೈಪಿಡಿ ಇಲ್ಲದೆ ಮಕ್ಕಳಿಗೆ ಬೋಧನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ವಿಷಯಗಳ ಪಠ್ಯಪುಸ್ತಕವೂ ಪೂರೈಕೆ ಆಗಿಲ್ಲ. ಶೇ.94ರಷ್ಟು ಮಾತ್ರ ಪಠ್ಯಪುಸ್ತಕ ಪೂರೈಕೆಯಾಗಿದೆ.
ಬೈಸಿಕಲ್ ಅನುಮಾನ ?
ಇನ್ನೂ 8ನೇ ತರಗತಿ ಮಕ್ಕಳಿಗೆ ಈ ಹಿಂದೆ ವಿತರಣೆಯಾಗುತ್ತಿದ್ದ ಬೈಸಿಕಲ್ ಸೌಲಭ್ಯವಂತೂ ಗಗನಕುಸುಮವಾಗಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಬೈಸಿಕಲ್ ವಿತರಣೆ ಆಗಿಲ್ಲ. ಈ ವರ್ಷವೂ ಬೈಸಿಕಲ್ ಕೊಡುವುದು ಅನುಮಾನ ಎನ್ನಲಾಗಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಸೈಕಲ್ ಭಾಗ್ಯ ಯೋಜನೆ ಪ್ರಕಟಿಸಿದ್ದರು. ನಗರಪಾಲಿಕೆ ಸರಹದ್ದಿನಲ್ಲಿ ಬರುವ ಶಾಲೆಗಳ ಮಕ್ಕಳು, ಬಸ್ ಪಾಸ್, ಹಾಸ್ಟೆಲ್ ಸೌಲಭ್ಯ ಇರುವ ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೆ ಬೈಸಿಕಲ್ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಆಗುತ್ತಿತ್ತು.
ಸರಕಾರ ಹಣ ಹಾಕಿಲ್ಲ
ನಾನು ಕೂಲಿ ಕಾರ್ಮಿಕ. ಮಗ ನಿತ್ಯ ಕಲರ್ ಬಟ್ಟೆ ಹಾಕಿಕೊಂಡೆ ಶಾಲೆಗೆ ಹೋಗುತ್ತಿದ್ದಾನೆ. ಚಪ್ಪಲಿಯಲ್ಲೇ ಶಾಲೆಗೆ ತೆರಳುತ್ತಿದ್ದಾರೆ. ನಾವು ಕೂಲಿನಾಲಿ ಮಾಡಿ ಮಗನನ್ನು ಸಾಕುತ್ತಿದ್ದೇವೆ. ಹೀಗಿರುವಾಗ ಸರಕಾರ ಮಕ್ಕಳಿಗೆ ಶೂ, ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ವಿತರಿಸಬೇಕು. ಆದರೆ, ಶಾಲೆಯಲ್ಲಿ ಕೇಳಿದರೆ ಸರಕಾರದಿಂದ ಇನ್ನೂ ಖಾತೆಗೆ ಹಣ ಬಂದಿಲ್ಲ ಎನ್ನುತ್ತಾರೆ. ಈಗಾದರೆ ನಾವು ಏನು ಮಾಡುವುದು? ಎಂದು ಪೋಷಕರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಇದರ ಬಗ್ಗೆ ನೋಡಲ್ ಅಧಿಕಾರಿ ದೇವರಾಜ್ ಕೇಳಿದ್ದಕ್ಕೆ, " ಇದು ಕೇವಲ ಮೈಸೂರಿನ ಸಮಸ್ಯೆಯಲ್ಲ ಇಡೀ ರಾಜ್ಯದ ಸಮಸ್ಯೆ. ಸರಕಾರ ಖಾತೆಗೆ ಇನ್ನೂ ಹಣ ಕಳುಹಿಸಿಲ್ಲ. ವಾರದೊಳಗೆ ಸಮವಸ್ತ್ರ ಬರುವ ನಿರೀಕ್ಷೆ ಇದೆ" ಎಂದು ತಿಳಿಸಿದ್ದಾರೆ.