ಮೈಸೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಎಸ್ಕೇಪ್ ಆಗಿದ್ದವರ ಬಂಧನ
ಮೈಸೂರು, ಜುಲೈ 30: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಾಳ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸುಭಾಷ್ ನಗರದ ಕಿರಣ್(29), ಕೆ.ಆರ್ ಪೇಟೆಯ ತಂಡೆಕೆರೆ ಗ್ರಾಮದ ದಿಲೀಪ್(34) ಬಂಧಿತ ಆರೋಪಿಗಳು.
ಜು.21 ರಂದು ರಾತ್ರಿ ಮೈಸೂರು ನಗರದ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯ ತರಕಾರಿ ಮಾರುಕಟ್ಟೆ, ಎಸ್ಬಿಐ ಮುಖ್ಯ ರಸ್ತೆಯಲ್ಲಿ ದರ್ಶನ್(20) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರ ಬಗ್ಗೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತನಿಖೆ ಕೈಗೊಂಡ ಹೆಬ್ಬಾಳ್ ಪೊಲೀಸರಿಗೆ ಜು.28 ರಂದು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿ, ಕೊಲೆಯಾದ ದರ್ಶನ್ ಎಂಬುವವನು ಮೈಸೂರು ಹೋಟೆಲ್ ಕಾಂಪ್ಲೆಕ್ಸ್ ನಲ್ಲಿ ಇರುವ ಪಾರ್ಲರ್ ಅಂಗಡಿಗಳಿಗೆ ಗ್ರಾಹಕರನ್ನು ಕರೆದುಕೊಂಡು ಬಂದು ಕಮೀಷನ್ ಪಡೆಯುತ್ತಿದ್ದನು.
ಈ ವಿಚಾರವಾಗಿ ವೈಮನಸ್ಸು ಉಂಟಾಗಿ, ಗಲಾಟೆ ನಡೆದು ಆರೋಪಿಗಳು ದರ್ಶನ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಪೊಲೀಸರು ಎದುರು ಒಪ್ಪಿಕೊಂಡಿದ್ದಾರೆ.