ಮುಕ್ತ ವಿವಿ ಸಮಸ್ಯೆ ಬಗೆಹರಿಸದ ಜಾವ್ಡೇಕರ್ ವಿರುದ್ಧ ಟ್ವೀಟರ್ ಸಮರ
ಮೈಸೂರು, ಜನವರಿ 29 : ಕಳೆದ 3 ವರುಷದಿಂದಲೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯಕ್ಕೆ ಯುಜಿಸಿಯಿಂದ ಮಾನ್ಯತೆ ದೊರೆಕದ ಹಿನ್ನೆಲೆ ವಿದ್ಯಾರ್ಥಿಗಳ ಸಿಟ್ಟು ನೆತ್ತಿಗೇರಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಟ್ವಿಟರ್ನಲ್ಲಿ ನಿರಂತರವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ಮುಕ್ತ ವಿವಿಯ ಯುಜಿಸಿಯ ಮಾನ್ಯತೆ ರದ್ಧತಿಯಿಂದ ತೊಂದರೆ ಆಗಿರುವ ಸಾವಿರಾರು ವಿದ್ಯಾರ್ಥಿಗಳು ಪ್ರಕಾಶ್ ಜಾವಡೇಕರ್ ಅವರನ್ನು ಫಾಲೋ ಮಾಡುತ್ತಿದ್ದು ಸಚಿವರ ಟ್ವೀಟ್ಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸಚಿವ ಪ್ರಕಾಶ್ ಜಾವಡೇಕರ್ ಅವರು ತಾವು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಟ್ವೀಟ್ ಮಾಡಿದ್ದರು. ಈ ಸಂಬಂಧ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿರುವ ಮುಕ್ತ ವಿವಿಯ ವಿದ್ಯಾರ್ಥಿಗಳು ''ಮೊದಲು ಮುಕ್ತ ವಿವಿಯ ಸಮಸ್ಯೆಯನ್ನು ಬಗೆಹರಿಸಿ. ಬಳಿಕ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ. ವಿದ್ಯಾರ್ಥಿಗಳ ತಾಳ್ಮೆ ಪರೀಕ್ಷೆ ಮಾಡುವುದಕ್ಕೆ ಮಿತಿ ಇರಲಿ. ಇದು ಕೊನೆಯ ಎಚ್ಚರಿಕೆ ಎಂದು ಖಾರವಾಗಿ ಸಚಿವ ಜಾವಡೇಕರ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ದಿನ (ಫೆ. 4) ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರು ಅರಮನೆ ಮೈದಾನದ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಕಾಶ್ ಜಾವಡೇಕರ್ ಅವರು ಫೆ.3ರಂದು ವಿದ್ಯಾರ್ಥಿಗಳ ಜೊತೆಗೆ ಸಭೆ ನಡೆಸುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಮುಕ್ತ ವಿವಿಯ ಮಾನ್ಯತೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಟ್ವೀಟ್ ಮಾಡಿದ್ದಾರೆ.
ಮುಕ್ತ ವಿವಿ ವಿದ್ಯಾರ್ಥಿಗಳು ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ಪ್ರತಿಭಟನೆ ಮಾಡಲು ಉದ್ದೇಶಿಸಿದ್ದಾರೆ. ಅಂದು ಮುಕ್ತ ವಿವಿಯ ವಿದ್ಯಾರ್ಥಿಗಳು 'ಮೋದಿ, ಮುಕ್ತ ವಿವಿಯ ಸಮಸ್ಯೆ ಸಂಬಂಧ ಉತ್ತರ ನೀಡಬೇಕು ಎನ್ನುವ ಆಶಯದೊಂದಿಗೆ ಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಮಾಡುವುದಾಗಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಆದರೆ ಇದನ್ನು ತಪ್ಪಿಸಲು ಸಚಿವರು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಕೆಲ ವಿದ್ಯಾರ್ಥಿಗಳ ಆರೋಪ.
ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಫೆ.25ರಂದು ನಡೆದ ಪರಿವರ್ತನಾ ಯಾತ್ರೆಯಲ್ಲಿ ಸಚಿವ ಜಾವಡೇಕರ್ ಭಾಗವಹಿಸಿದ್ದರು ಆದರೆ ಅಂದು ಮುಕ್ತ ವಿವಿಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಲಿಲ್ಲ. ಮೈಸೂರಿನಲ್ಲೇ ಇರುವ ಮುಕ್ತ ವಿವಿಯ ಅಧಿಕಾರಿಗಳ ಜೊತೆ ಸಭೆ, ಚರ್ಚೆ ಮಾಡುವ ಗೊಡವೆಗೂ ಹೋಗಲಿಲ್ಲ. ಅಮಿತ್ ಶಾ ಜೊತೆ ಬಂದ ಅವರು 40 ನಿಮಿಷದಲ್ಲಿ ಪರಿವರ್ತನಾ ಯಾತ್ರೆಯಿಂದ ನಿರ್ಗಮಿಸಿದರು.
ಅಂತೆಯೇ ಕೆಲ ವಿದ್ಯಾರ್ಥಿಗಳು ಸಂಸದ ಪ್ರತಾಪ್ ಸಿಂಹ ಅವರನ್ನು ಉದ್ದೇಶಿಸಿಯೂ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಅವರಿಗೆ ಪ್ರಕಾಶ್ ಜಾವಡೇಕರ್ ಅವರನ್ನು ಸಂಪುಟದಿಂದ ಕೈ ಬಿಡಲು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಜಾವಡೇಕರ್ ಮನುಷ್ಯರೇ? ನಿಮಗಿಂತ ಭಯೋತ್ಪಾದಕರೇ ಮೇಲು. ಈ ರೀತಿ ಯಾಕೆ ವಿದ್ಯಾರ್ಥಿಗಳನ್ನು ಕೊಲ್ಲುತ್ತೀರಿ? ಈ ಬಾರಿಯ ಚುನಾವಣೆಯಲ್ಲಿ ನೋಟಾ ಬಳಸುತ್ತೇವೆ ಎಂದು ಅಮಿತ್ ಶಾ ಅವರಿಗೆ ಟ್ವೀಟ್ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.
ಫೆ.4ರಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ. 4ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರು ಅರಮನೆ ಮೈದಾನದ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಮೋದಿ ಮುಕ್ತ ವಿವಿಯ ಸಮಸ್ಯೆ ಸಂಬಂಧ ಉತ್ತರ ನೀಡಬೇಕು ಎನ್ನುವ ಆಶಯದೊಂದಿಗೆ ಕಪ್ಪು ಧ್ವಜದೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಎನ್ನುವ ಟ್ವೀಟ್ ಮುಕ್ತ ವಿವಿಯ ವಿದ್ಯಾರ್ಥಿಗಳಿಂದ ಹರಿದಾಡುತ್ತಿದೆ.