ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ತಿರುವು!
ಮೈಸೂರು, ಮಾರ್ಚ್ 23: ಮೈಸೂರಿನಲ್ಲಿ ಸಂಚಾರಿ ಪೊಲೀಸರ ತಪಾಸಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಜನರಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದ್ದ ಅಪಘಾತಕ್ಕೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ಸೋಮವಾರ ಸಂಜೆ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ವಾಹನವನ್ನು ಜಖಂ ಗೊಳಿಸಿದ್ದರು.
ಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು
ಇದೀಗ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅಪಘಾತದಲ್ಲಿ ಮೃತಪಟ್ಟ ದೇವರಾಜ್ ಸ್ನೇಹಿತ ಸುರೇಶ್, "ಅಪಘಾತಕ್ಕೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ನಾವು ಕೆಲಸದ ಮೇಲೆ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದೆವು. ಈ ವೇಳೆ ನಾವಿಬ್ಬರೂ ಹೆಲ್ಮೆಟ್ ಹಾಕಿದ್ದೆವು. ನಾವು ತೆರಳುತ್ತಿದ್ದ 200 ಮೀಟರ್ ದೂರದ ಮುಂದೆ ಪೊಲೀಸರು ನಿಂತಿದ್ದರು" ಎಂದು ಹೇಳಿದ್ದಾರೆ.
ಮೃತ ದೇವರಾಜ್ ಸ್ನೇಹಿತನನ್ನು ಭೇಟಿಯಾದ ಪೊಲೀಸರು ಸುರೇಶ್ ಅವರನ್ನು ಬೆದರಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸುರೇಶ್ ಅವರನ್ನು ಬೆದರಿಸಿ ಹೇಳಿಕೆ ಪಡೆದಿದ್ದಾರೆ ಎಂದೂ ಸಹ ಆರೋಪಿಸಲಾಗುತ್ತಿದೆ.
ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ
"ನಾವು ಪೊಲೀಸರು ಇದ್ದಾರೆ ಅಂತ ನಿಧಾನವಾಗಿ ಎಡಗಡೆಗೆ ಹೋಗುತ್ತಿದ್ದೆವು ಅಷ್ಟೇ. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ವಾಹನ ನಮ್ಮ ಗಾಡಿಗೆ ಟಚ್ ಮಾಡಿದ್ದಷ್ಟು ನನಗೆ ನೆನಪಿದೆ. ನಂತರ ನಡೆದ ಅಪಘಾತದಲ್ಲಿ ನನಗೆ ಪ್ರಜ್ಞೆ ಇರಲಿಲ್ಲ, ಪ್ರಜ್ಞೆ ಬಂದ ನಂತರ ಅಲ್ಲಿದ್ದ ಪೊಲೀಸರನ್ನು ಕೇಳಿದೆ ನನ್ನ ಸ್ನೇಹಿತ ಎಲ್ಲಿ ಅಂತ?, ಆಗ ಅವರು ನಿಮ್ಮ ಸ್ನೇಹಿತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ" ಎಂದು ತಿಳಿಸಿದರು" ಎಂದು ಸುರೇಶ್ ತಿಳಿಸಿದ್ದಾರೆ.
ನಮ್ಮ ಬಳಿ ದಾಖಲೆಗಳಿತ್ತು
"ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಎಂದರು ಆಮೇಲೆ ಆಸ್ಪತ್ರೆಗೆ ಸೇರಿಸಿದರು. ಪೊಲೀಸರು ನಮಗೆ ಏನೂ ತೊಂದರೆ ಮಾಡಲಿಲ್ಲ. ನಮ್ಮ ಬಳಿ ಎಲ್ಲಾ ದಾಖಲೆಗಳಿತ್ತು. ಆದರೆ ಟಿಪ್ಪರ್ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತು" ಎಂದು ಅಪಘಾತದ ಕುರಿತು ಸುರೇಶ್ ಮಾತನಾಡಿದ್ದಾರೆ.
ಇಂದು ಪ್ರತಿಭಟನೆಗೆ ಕರೆ
ಮೈಸೂರಿನ ಸಂಚಾರಿ ಪೊಲೀಸರ ದುಂಡಾವರ್ತನೆ ಖಂಡಿಸಿ ಇಂದು ಪ್ರತಿಭಟನೆಗೆ ಕರೆ ನೀಡಲಾಗಿದೆ. ಮೃತ ದೇವರಾಜ್ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಮೈಸೂರು ನಗರ ಸಂಚಾರಿ ಪೊಲೀಸರ ಟ್ರಾಫಿಕ್ ಫೈನ್ ವಸೂಲಿ ನೀತಿ ಖಂಡಿಸಿ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿ ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪೊಲೀಸರ ವಿರುದ್ಧ ಆರೋಪವೇನು?
ಸಿವಿಲ್ ಇಂಜಿನಿಯರ್ ದೇವರಾಜು (46), ಸುರೇಶ್ ಬೈಕ್ನಲ್ಲಿ ಹೋಗುತ್ತಿದ್ದರು. ದೇವರಾಜು ಹೆಲ್ಮೆಟ್ ಧರಿಸಿದ್ದರೂ ವಾಹನ ಅಡ್ಡಗಟ್ಟಿ ಪೊಲೀಸರು ಹಳೆಯ ಕೇಸ್ ದಂಡ ವಸೂಲಿಗೆ ಮುಂದಾಗಿದ್ದಾರೆ. ಪೊಲೀಸರನ್ನು ಕಂಡು ಗಾಬರಿಯಾಗಿದ್ದ ದೇವರಾಜು ಅವರಿಂದ ತಪ್ಪಿಸಿಕೊಳ್ಳುವಾಗ ಬೇರೆ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂಬುದು ಆರೋಪ. ಆದ್ದರಿಂದ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ವಾಹನ ಜಖಂಗೊಳಿಸಿದ್ದರು.