ಡಾ.ಬಿ.ಆರ್.ಅಂಬೇಡ್ಕರ್ 64ನೇ ಪರಿನಿರ್ವಾಣ ದಿನ; ಸಚಿವರಿಂದ ಗೌರವ ಸಮರ್ಪಣೆ
ಮೈಸೂರು, ಡಿಸೆಂಬರ್ 06: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನದ ಅಂಗವಾಗಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಗರದ ಪುರಭವನ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಇದೇ ಸಂದರ್ಭ ಬೌದ್ಧ ಧರ್ಮ ಗುರುಗಳು ಬುದ್ಧವಂದನೆ ಧಮ್ಮವಂದನೆ, ಸಂಘವಂದನೆ ಸಲ್ಲಿಸಿದರು. ನಂತರ ಮಾತನಾಡಿದ ಸಚಿವರು, "ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಣೆ ಮಾಡಿದ್ದೇವೆ. ಅಂಬೇಡ್ಕರ್ ಅವರು ತಮ್ಮ ಬಾಲ್ಯದಲ್ಲಿ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ ಅನುಭವಿಸಿದ್ದರು. ಅದರ ಆಧಾರದ ಮೇಲೆ ಸಂವಿಧಾನ ರಚಿಸಿದರು. ಆ ಸಂವಿಧಾನವೇ ನಮಗೆ ದಾರಿ ದೀಪವಾಗಿದೆ" ಎಂದರು.
ಅಷ್ಟೊಂದು ಅವಮಾನವಾಗದಿದ್ದರೆ ಅಂಬೇಡ್ಕರ್ ಹುಟ್ಟುತ್ತಿದ್ದರೆ?
ಮೈಸೂರಿನಲ್ಲಿ ಸ್ಥಗಿತಗೊಂಡಿರುವ ಡಾ. ಅಂಬೇಡ್ಕರ್ ಭವನ ಕಾಮಗಾರಿ ಮುಂದುವರಿಸಲು ಶಾಸಕ ಎಲ್. ನಾಗೇಂದ್ರ ಅವರ ಮನವಿ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಸಮಾಜ ಕಲ್ಯಾಣ ಸಚಿವರು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳ ಸಭೆ ಮಾಡಲಾಗಿದೆ. ಹೆಚ್ಚುವರಿ 16 ಕೋಟಿ ರೂ. ಅನುದಾನ ಬೇಕಾಗಿದೆ ಎಂದು ಅಂದಾಜು ತಯಾರಿಸಲಾಗಿದೆ. ಕ್ಯಾಬಿನೆಟ್ನಲ್ಲಿ ಇಟ್ಟು ಅನುಮೋದನೆ ಮಾಡಿಸಲಾಗುವುದು. ಹಿಂದೆ 20 ಕೋಟಿ ರೂ. ಮಂಜೂರಾಗಿತ್ತು. ಭಾರತದಲ್ಲೇ ಎರಡನೇ ಅತಿದೊಡ್ಡ ಅಂಬೇಡ್ಕರ್ ಭವನ ಇದಾಗಬೇಕು ಎಂದು ಶ್ರೀನಿವಾಸ್ ಪ್ರಸಾದ್ ಅವರು ಈ ಭವನವನ್ನು ಹೆಚ್ಚು ವಿಸ್ತಾರ ಮಾಡುವಂತೆ ಸಲಹೆ ಮಾಡಿದ್ದಾರೆ. ಅದರಂತೆ ಮಾಡಲು ಹೆಚ್ಚುವರಿ ವೆಚ್ಚ ಆಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಆರ್. ಧರ್ಮಸೇನ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಹರ್ಷವರ್ಧನ್, ಮೇಯರ್ ತಸ್ನಿಂ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.