ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಸ್ಪೆಷಲ್ ಆಫರ್!
ಮೈಸೂರು, ಡಿಸೆಂಬರ್ 12: ವಿಶ್ವ ಪರ್ವತಾರೋಹಣ ದಿನಾಚರಣೆ ಅಂಗವಾಗಿ ಗೋಕುಲಂನ ಟೈಗರ್ ಅಡ್ವೆಂಚರ್ ಫೌಂಡೇಶನ್ ವತಿಯಿಂದ ಮೇ ತಿಂಗಳಲ್ಲಿ ಬಂಡೀಪುರ ಮತ್ತು ನಾಗರಹೊಳೆ ಸಮೀಪದ ಬುಡಕಟ್ಟು ಸಮುದಾಯಕ್ಕೆ ಸೇರಿದ 12 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹಿಮಾಲಯ ಪರ್ವತಾರೋಹಣ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಡಿ.ಎಸ್.ಡಿ. ಸೋಲಂಕಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಡಿಸ್ ಸರ್ಕಲ್ ಮತ್ತು ಸ್ವಾಮಿ ವಿವೇಕಾನಂದ ಯುತ್ ಮೂವ್ಮೆಂಟ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜೇನು ಕುರುಬ, ಕಾಡು ಕುರುಬ, ಬೇಡ ಮತ್ತು ಸೋಲಿಗ ಬುಡಕಟ್ಟು ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಕಿಲಿಮಂಜಾರೋ ಪರ್ವತ ಏರಿದ ಮೊದಲ ಕನ್ನಡತಿ ಹುಬ್ಬಳ್ಳಿಯ ನಂದಿತಾ
ಮೇ 2ರಂದು ಮೈಸೂರಿನಿಂದ ಪ್ರಯಾಣಿಸಿ ನಂತರ ಹಿಮಾಲಯ ಪರ್ವತ ಶ್ರೇಣಿಯ ಸಾರಾಸಾಯ್, ಸೆಗ್ಲಿ, ಹೊರಾ ಥ್ಯಾಚ್, ಮಾಯಲೀ, ಧೋರಾ, ಲೋಂಗಾ ಥ್ಯಾಚ್ಮತ್ತು ಲೆಖಿಗಳಲ್ಲಿ ಪರ್ವತಾರೋಹಣದಲ್ಲಿ ವಿದ್ಯಾರ್ಥಿನಿಯರು ತೊಡಗಲಿದ್ದಾರೆ ಎಂದರು.
ಚಾಮುಂಡಿಬೆಟ್ಟ, ಕುಂತಿಬೆಟ್ಟ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಮುಂತಾದ ಕಡೆಗಳಲ್ಲಿ ಪರ್ವತಾರೋಹಣದಲ್ಲಿ ತೊಡಗುವ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುವುದು. ಜೊತೆಗೆ ಪ್ಯಾರಾ ಗ್ಲೈಡಿಂಗ್, ರಾಪೆಲ್ಲಿಂಗ್, ರಿವರ್ ಕ್ರಾಸಿಂಗ್ ಮೊದಲಾದ ಸಾಹಸ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ಹಿಮದ ಪರ್ವತವೇರಿದ ಕೊಡಗಿನ ಯುವತಿ ಭವಾನಿ
ಪರ್ವತಾರೋಹಣಕ್ಕೆ ಒಟ್ಟು 6.7 ಲಕ್ಷ ರೂ.ವೆಚ್ಚವಾಗಲಿದ್ದು, ಸಾರ್ವಜನಿಕರ ಸಹಕಾರ ನಿರೀಕ್ಷಿಸಲಾಗಿದೆ. ಇದಲ್ಲದೆ ದೆಹಲಿ, ಆಗ್ರಾ, ಮಥುರಾ, ಜಲಿಯನ್ ವಾಲಾಬಾಗ್, ಅಮೃತಸರ, ವಾಘಾಗಡಿ, ಮನಾಲಿ ಸೇರಿದಂತೆ ಹಲವಾರು ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದರು.
ಇನ್ನು ಕಾರ್ಯಕ್ರಮಕ್ಕೆ ಆಶಾ-2019' ಎಂದು ಹೆಸರಿಟ್ಟಿದ್ದು, 2018ರ ಆಗಸ್ಟ್ 15 ರಂದು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ನಮ್ಮ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ. 12 ಮಹಿಳೆಯರಿಗೆ ಇಬ್ಬರು ಮಹಿಳಾಸಿಬ್ಬಂದಿ ಹಾಗೂ ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿರುವ ಒಬ್ಬ ಪುರುಷ ಸಿಬ್ಬಂದಿ ಚಾರಣದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.