'ಡೀಸೆಲ್ ಬೆಲೆ ಇಳಿದಾಗ ಟಿಕೆಟ್ ದರ ಕಡಿಮೆ ಮಾಡಿದ್ದೀರಾ?'
ಮೈಸೂರು, ಜುಲೈ 25 : 'ಡೀಸೆಲ್ ಬೆಲೆ ಇಳಿಕೆಯಾದಾಗ ಸರ್ಕಾರಿ ಬಸ್ಸುಗಳ ಟಿಕೆಟ್ ದರಗಳನ್ನು ಯಾವತ್ತಾದರೂ ಕಡಿಮೆ ಮಾಡಿದ್ದೀರಾ?. ಸಾರಿಗೆ ಇಲಾಖೆ ನಷ್ಟದಲ್ಲೇನೂ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಸೋಮವಾರ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿದ ಅವರು, 'ಇಲಾಖೆ ನಷ್ಟದಲ್ಲೇನೂ ಇಲ್ಲ. ನಷ್ಟವಾಗುತ್ತಿರುವುದು ಪ್ಯಾಕೇಜ್ ವಸೂಲಿಗಳಲ್ಲಿ. ಮೊದಲು ವಸೂಲಿಗಳನ್ನು ನಿಲ್ಲಿಸಿ. ಆಗ ಇಲಾಖೆಯ ಎಲ್ಲಾ ಹಂತದಲ್ಲೂ ಲಾಭ ಬರುತ್ತದೆ' ಎಂದು ಟೀಕಿಸಿದರು.
'ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ನೌಕರರ ಜೊತೆ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿ, ಅವುಗಳನ್ನು ಬಗೆಹರಿಸಿ, ಎಸ್ಮಾ ಜಾರಿಯಿಂದ ಹೋರಾಟವನ್ನು ಹತ್ತಿಕಲು ಸಾಧ್ಯವಿಲ್ಲ. ನಿಮ್ಮದೇನೂ ಬ್ರಿಟಿಷ್ ಸರ್ಕಾರವಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
'ಕರ್ನಾಟಕ ಸರ್ಕಾರ ತನ್ನ ಹಠಮಾರಿ ತನದ ಧೋರಣೆಯನ್ನು ಬಿಡಬೇಕು. ಮುಷ್ಕರ ನಡೆಸುತ್ತಿರುವ ನೌಕರರ ಮುಖಂಡರ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬೇಕು, ಬಸ್ ಸಂಚಾರ ಸ್ಥಗಿತದಿಂದ ಉಂಟಾಗುವ ತೊಂದರೆಯನ್ನು ಪರಿಹರಿಸಬೇಕು' ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಜುಲೈ 25ರ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಜೊತೆ ನೌಕರರು ನಡೆಸಿದ ಮಾತುಕತೆ ಮುರಿದುಬಿದ್ದಿದೆ.