ಸಾಲಿಗ್ರಾಮ ಗ್ರಾ.ಪಂ ಅಧ್ಯಕ್ಷರಾಗಿ ಮಂಗಳಮುಖಿ ಆಯ್ಕೆ
ಮೈಸೂರು, ಫೆಬ್ರವರಿ 4: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗುವ ಮೂಲಕ ತೃತೀಯ ಲಿಂಗಿಗಳು ರಾಜಕೀಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವ ಅವಕಾಶವನ್ನು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದ ಜನತೆ ಕಲ್ಪಿಸಿಕೊಟ್ಟಿದ್ದಾರೆ.
ದೇವಿಕಾ ಅವರೇ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದವರು. ಸಾಲಿಗ್ರಾಮದಲ್ಲಿ ಒಟ್ಟು 30 ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು.
ಗ್ರಾ.ಪಂ ಚುನಾವಣೆಯಲ್ಲಿ ಮಂಗಳಮುಖಿಯ ಗೆಲುವು
ಅಧ್ಯಕ್ಷ ಸ್ಥಾನಕ್ಕೆ ಮಂಗಳಮುಖಿ ದೇವಿಕಾ ಮತ್ತು ಲಕ್ಷ್ಮಿ ಸೋಮಶೇಖರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಲಕ್ಷ್ಮಿ ಸೋಮಶೇಖರ್ ನಾಮಪತ್ರ ವಾಪಸ್ ಪಡೆದ ಕಾರಣ ಮಂಗಳಮುಖಿ ದೇವಿಕಾ ಒಬ್ಬರೆ ಕಣದಲ್ಲಿ ಉಳಿದ ಕಾರಣ, ಇವರು ಅವಿರೋಧವಾಗಿ ಆಯ್ಕೆಯಾದರು.
ಸಾಲಿಗ್ರಾಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರ ಸಾಲಿಗ್ರಾಮದ 7ನೇ ವಾರ್ಡ್ನಿಂದ ಕಣಕಿಳಿದಿದ್ದ ಮಂಗಳಮುಖಿ ದೇವಿಕಾ 5 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟದಲ್ಲೂ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನ ಲಭಿಸಿದ್ದು, ಇವರಿಗೆ ವರದಾನವಾಗಿತ್ತು. ಜತೆಗೆ ಪ್ರತಿಸ್ಪರ್ಧಿ ಲಕ್ಷ್ಮಿ ಸೋಮಶೇಖರ್ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಗೊಂಡು ಗೆಲುವಿನ ನಗೆ ಬೀರಿದರು.
ನಂತರ ಮಾತನಾಡಿದ ಅಧ್ಯಕ್ಷೆ ದೇವಿಕಾ ಅವರು, ಮಂಗಳಮುಖಿಯರನ್ನು ಕಂಡರೆ ಅಪಹಾಸ್ಯ ಮಾಡಿ ನಮ್ಮನ್ನು ಬೇರೆ ರೀತಿಯಲ್ಲಿಯೇ ಕಾಣುತ್ತಿದ್ದ ಈ ಸಮಾಜದಲ್ಲಿ ನನ್ನನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ ಸಾಲಿಗ್ರಾಮ ಜನತೆಗೆ ಮತ್ತು ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಶಾಸಕ ಸಾ.ರಾ.ಮಹೇಶ್ ಅಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷೆ ದೇವಿಕಾ ಅವರು ಮುಂದುವರೆದು, ಜನತೆಗೆ ಗ್ರಾ.ಪಂ ವತಿಯಿಂದ ಬರುವ ಎಲ್ಲ ಸವಲತ್ತುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.