ವರ್ಷದಲ್ಲಿ 5 ಬಾರಿ ವರ್ಗಾವಣೆ: ಪ್ರತಿಭಟಿಸಿದ್ದಕ್ಕೆ ನೌಕರಳ ಬಂಧನ
ಮೈಸೂರು, ಫೆಬ್ರವರಿ 1: ಕಂದಾಯ ಇಲಾಖೆಯ ಡಿ ಗ್ರೂಪ್ ನೌಕರರೊಬ್ಬರನ್ನು ಕಳೆದ 15 ತಿಂಗಳ ಅವಧಿಯಲ್ಲಿ ಐದು ಬಾರಿ ವರ್ಗಾವಣೆ ಮಾಡಿದ್ದು, ಮಹಿಳೆಯು ವರ್ಗಾವಣೆ ರದ್ದುಗೊಳಿಸುವಂತೆ ಪ್ರತಿಭಟಿಸಿದ್ದಕ್ಕಾಗಿ ಪೊಲೀಸ್ ದೂರು ನೀಡಿ ಬಂಧನಕ್ಕೊಳಪಡಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ್ ಜಾನ್ಸನ್ ಅವರು ನೀಡಿರುವ ದೂರಿನ ಪ್ರಕಾರ ತಕ್ಷಣ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಿ, ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಕಛೇರಿಯ ಡಿ ಗ್ರೂಪ್ ನೌಕರರೋರ್ವರನ್ನು ಪೊಲೀಸರು ಬಂಧಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ವೈದ್ಯ ದಂಪತಿಗೆ ಚಾಕುವಿನಿಂದ ಇರಿದು ದರೋಡೆ ಮಾಡಿದ ದುಷ್ಕರ್ಮಿಗಳು
ಬಂಧಿತ ನೌಕರಳನ್ನು ಮಧು ಎಂದು ಗುರುತಿಸಲಾಗಿದೆ. ಇವರ ಪತಿ ಸುರೇಶ್ ಎಂಬವರು ೬ ವರ್ಷಗಳ ಹಿಂದೆ ಮೃತಪಟ್ಟಿ ನಂತರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಡಿ ಗ್ರೂಪ್ ನೌಕರಿ ನೀಡಲಾಗಿತ್ತು. ಮೊದಲಿಗೆ ಬೆಂಗಳೂರಿನ ಕೆ.ಆರ್.ಪುರಂನ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ನಂತರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ.
ಆಕೆ ಕಳೆದ ಹಲವಾರು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಮಹಿಳೆ ಎಂಬುದನ್ನು ಗಮನಿಸದೆ ಅಧಿಕಾರಿ ವರ್ಗವು ಆಕೆಯನ್ನು ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ, ನಂಜನಗೂಡು ತಾಲ್ಲೂಕು ಕಚೇರಿ, ಚಿಕ್ಕಯ್ಯನ ಛತ್ರ ನಾಡ ಕಚೇರಿ ಹಾಗೂ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ನಿಯೋಜನೆ ಮೇಲೆ ಕೆಲಸಕ್ಕೆ ನೇಮಿಸಿದ್ದಾರೆ. ಇದೀಗ ಮತ್ತೆ ನಂಜನಗೂಡು ತಾಲ್ಲೂಕು ಕಚೇರಿಗೆ ಆಕೆಯನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಮಧು ಅವರು, ನಾನೂ ಕೂಡ ಎಲ್ಲ ಡಿ ಗ್ರೂಪ್ ನೌಕರರಂತೆ ಕೆಲಸ ನಿರ್ವಹಿಸುತ್ತಿದ್ದೆ. ಪತಿಯನ್ನು ಕಳೆದುಕೊಂಡವಳು ಎಂಬ ಕಾರಣಕ್ಕಾಗಿ ಕೆಲವರು ನನಗೆ ಲೈಂಗಿಕವಾಗಿ ಕಿರುಕುಳ ನೀಡಲಾರಂಭಿಸಿದರು. ಇದನ್ನು ವಿರೋಧಿಸಿದ ಕಾರಣ ನನ್ನನ್ನು ಕಚೇರಿಯಿಂದ, ಕಚೇರಿಗೆ ವರ್ಗಾವಣೆ ಮಾಡುತಿದ್ದಾರೆ.
ನನಗೆ 12 ವರ್ಷದ ಹೆಣ್ಣು ಮಗಳು ಹಾಗೂ ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ಪ್ರತಿ ದಿನ ನಂಜನಗೂಡಿಗೆ ಹೋಗಿ ಬರುವುದು ಕಷ್ಟವಾಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಕಾಲು ಹಿಡಿದು ಬೇಡಿಕೊಂಡರೂ ಯಾರೂ ಕೂಡ ಕರುಣೆ ತೋರುತ್ತಿಲ್ಲ. ಹೀಗಾಗಿ ಅನ್ಯ ದಾರಿ ಇಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತಿದ್ದೇನೆ ಎಂದರು.
ಇವರು ಜಿಲ್ಲಾಧಿಕಾರಿಯ ಕಚೇರಿಯ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆಯೊಡ್ಡಿದ್ದರು. ಈ ವೇಳೆ ಸ್ಥಳಕ್ಕೆ ನಾಲ್ವರು ವೈದ್ಯರನ್ನು ಕರೆಯಿಸಿ ಕೌನ್ಸೆಲಿಂಗ್ ಮಾಡಿಸಲಾಯಿತು. ಆದರೆ ಪದೇ ಪದೇ ಜಿಲ್ಲಾಧಿಕಾರಿಗಳ ಕಚೇರಿ ಒಳಗಡೆ ನುಗ್ಗಿ ಕಡತಗಳನ್ನು ಎಸೆದು ಜೋರು ದನಿಯಲ್ಲಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು.
ಈ ಕುರಿತು ಶಿರಸ್ತೇದಾರ ಜಾನ್ಸನ್ ಎಂಬವರು ದೂರು ನೀಡಿದ್ದು, ರಾತ್ರಿ ಹತ್ತು ಗಂಟೆಯವರೆಗೂ ಮನವೊಲಿಸುವ ಪ್ರಯತ್ನ ಫಲಿಸದ ಕಾರಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 353, 448 ಹಾಗೂ 426ರ ಅನ್ವಯ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.