ಮೈಸೂರಿನ ಈ ಹೋಟೆಲ್ನಲ್ಲಿ ಸಂಚಾರಿ ನಿಯಮದ ಪಾಠ!
ಮೈಸೂರು, ಸೆಪ್ಟೆಂಬರ್ 10: ಸಾಮಾನ್ಯವಾಗಿ ದಸರಾ ವೇಳೆ ವ್ಯಾಪಾರಿಗಳು ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುವ ಕಸರತ್ತು ಮಾಡುತ್ತಾರೆ. ಅದೇ ರೀತಿ ಇಲ್ಲಿನ ಹೋಟೆಲ್ ಮಾಲೀಕರೊಬ್ಬರು ಜನರಲ್ಲಿ ಸಂಚಾರ ನಿಯಮ ಪಾಲನೆಯ ಬಗ್ಗೆ ಅರಿವು ಮೂಡಿಸುವ ಮತ್ತು ನಿಯಮ ಪಾಲನೆ ಮಾಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ ಶೇ.5ರಷ್ಟು ರಿಯಾಯಿತಿ ಘೋಷಿಸಿದ್ದಾರೆ.
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಅಪೂರ್ವ ದರ್ಶಿನಿ ಹೋಟೆಲ್ ಮಾಲೀಕರಾದ ಅಪೂರ್ವ ಸುರೇಶ್ ಅವರು ದಸರಾ ಸಂದರ್ಭದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಹೋಟೆಲ್ಗೆ ಬರುವ ಗ್ರಾಹಕರಿಗೆ ಶೇ.5ರಷ್ಟು ರಿಯಾಯಿತಿಯನ್ನು ನೀಡುವ ಸಂಕಲ್ಪ ಮಾಡಿದ್ದಾರೆ. ಈಗಾಗಲೇ ನೂತನ ಸಂಚಾರಿ ನಿಯಮವನ್ನು ಪಾಲಿಸುವಂತೆ ಹೋಟೆಲ್ಗೆ ಬರುವ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ; ರಾಮನಗರದಲ್ಲಿ ಎಂಟೇ ದಿನದಲ್ಲಿ ವಸೂಲಾಯ್ತು 10 ಲಕ್ಷ ರೂ. ದಂಡ
ತಮ್ಮ ಹೋಟೆಲ್ ಆವರಣದಲ್ಲಿ ಎಲ್ಲರೂ ಸಂಚಾರಿ ನಿಯಮ ಪಾಲಿಸಬೇಕು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ನೂತನ ಪರಿಷ್ಕೃತ ದಂಡಗಳ ಮೊತ್ತದ ವಿವರವನ್ನು ಫಲಕಗಳಲ್ಲಿ ಬರೆದು ಅಂಟಿಸಿದ್ದಾರೆ. ಜೊತೆಗೆ ಗ್ರಾಹಕರಿಗೆ ನೀಡುವ ಬಿಲ್ ನಲ್ಲೂ ಗ್ರಾಹಕರೇ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. ಸಂಚಾರ ನಿಯಮ ಪಾಲಿಸಿ ಎಂಬ ಘೋಷಣೆಗಳನ್ನು ಮುದ್ರಿಸಿ ಸಂಚಾರಿ ನಿಯಮ ಪಾಲನೆಯನ್ನು ಮಾಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ನಾವು ಸಂಚಾರ ನಿಯಮ ಪಾಲಿಸಿದರೆ ದಂಡ ಪ್ರಮಾಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅದೆಷ್ಟೋ ಗ್ರಾಹಕರು ಹೆಲ್ಮೆಟ್ ಇಲ್ಲದೇ ವಾಹನ ಓಡಿಸಿಕೊಂಡು ಬರುತ್ತಾರೆ. ಮಾರ್ಗ ಮಧ್ಯೆ ಪೊಲೀಸರಿಗೆ ಸಿಕ್ಕಿ ಬಿದ್ದು, ಭಾರೀ ದಂಡ ಕಟ್ಟಿ ಇಲ್ಲಿಗೆ ಬಂದು ಪೇಚಾಡುತ್ತಾರೆ. ಹೆಲ್ಮೆಟ್ ಧರಿಸುವುದು ದಂಡದಿಂದ ಪಾರಾಗಲು ಮಾತ್ರವಲ್ಲ ಅದು ನಮ್ಮ ಜೀವ ರಕ್ಷಕ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಜನತೆಗೆ ತಿಳಿಸುವ ಸಣ್ಣ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಶಿಕ್ಷಕರು, ಪೊಲೀಸರು, ವಕೀಲರು ಮತ್ತು ವಿದ್ಯಾವಂತ ಜನರು ಮೊದಲು ಹೆಲ್ಮೆಟ್ ಬಳಸಲು ಪ್ರಾರಂಭಿಸಿದರೆ ಅವರನ್ನು ನೋಡಿ ಇತರರು ಪಾಲಿಸುತ್ತಾರೆ. ಅಮೂಲ್ಯ ಜೀವದ ಉಳಿವಿಗಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುವ ಮೂಲಕ ಶಿಸ್ತುಬದ್ಧ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.