ಹಿರೀಕ್ಯಾತನಹಳ್ಳಿಯಲ್ಲಿ ಮೇ 29, 30 ಕ್ಕೆ ಮಾರಮ್ಮನ ಅದ್ಧೂರಿ ಜಾತ್ರೆ
ಮೈಸೂರು, ಮೇ 28: ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ಮೇ.29, 30ರಂದು ಎರಡು ದಿನಗಳ ಕಾಲ ಮಾರಮ್ಮನ ಹಬ್ಬದ ಜಾತ್ರೆನಡೆಯಲಿದೆ. ಹೊಸ ಬಾವಿ ತೆಗೆದು ಆ ಬಾವಿಯ ನೀರಲ್ಲಿ ದೇವರ ವಿಗ್ರಹ ಶುದ್ಧಿಗೊಳಿಸುವುದು ಜಾತ್ರೆಯ ವಿಶೇಷವಾಗಿದೆ.
ಮಂಗಳವಾರ ಗ್ರಾಮದ ಮಾರಿ ಅಮ್ಮನ ದೇವಸ್ಥಾನದಿಂದ ಮಂಗಳವಾದ್ಯ ಕೊಂಬು ತಮಟೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ವೀರಶೈವ ಮುಖಂಡರ ಅಡಿಕೆ ತೆಂಗಿನ ತೋಟದಲ್ಲಿ ಹೊಸದಾಗಿ ಬಾವಿ ತೆಗೆಯುತ್ತಾರೆ. ಈ ಬಾವಿಯಲ್ಲಿ ಬರುವ ಹೊಸನೀರಿನಿಂದ ದೇವರ ವಿಗ್ರಹವನ್ನು ಶುಚಿಗೊಳಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಾರಿಗುಡಿ ದೇವಸ್ಥಾನ ದೇವರ ವಿಗ್ರಹವನ್ನು ತಂದು ಗುಡಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಅದ್ಧೂರಿಯಾಗಿ ಜರುಗಿದ ನಂಜುಂಡೇಶ್ವರನ ಪಂಚ ಮಹಾರಥೋತ್ಸವ
ಜಾತ್ರೆಯ ಎರಡನೆಯ ದಿನವಾದ ಬುಧವಾರ ಬೆಳಿಗ್ಗೆ ಗ್ರಾಮದಲ್ಲಿ ಮಹಿಳೆಯರೆಲ್ಲ ತಮ್ಮ ಮನೆಯ ಮುಂದೆ ಹಸುವಿನ ಗಂಜಲ ಹಾಗೂ ಸಗಣಿಯಿಂದ ಮನೆ ಶುಚಿಗೊಳಿಸುತ್ತಾರೆ. ಬಗೆಬಗೆಯ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ಗ್ರಾಮದ ಯುವತಿಯರು, ಮಹಿಳೆಯರು ಹೊಸ ಉಡುಪು ಧರಿಸಿಕೊಂಡು ಮಾರಮ್ಮನಿಗೆ ತಂಬಿಟ್ಟನ್ನು ತಂಪು ನೀಡುತ್ತಾರೆ. ಈ ತಂಬಿಟ್ಟನ್ನು ವಿವಿಧ ಅಲಂಕಾರದಲ್ಲಿ ತಯಾರಿಸಿ, ತಲೆ ಮೇಲೆ ಹೊತ್ತುಕೊಂಡು ಗ್ರಾಮದ ಪ್ರತಿ ಬೀದಿಗಳಲ್ಲಿ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮಾರಮ್ಮನಿಗೆ ಬಡಿಸಿ, ತಂಪು ನೀಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ನಂತರ ಮಾರಿ ಅಮ್ಮನ ದೇವಸ್ಥಾನಕ್ಕೆ ಪ್ರತಿಯೊಂದು ಕುಟುಂಬವು ಕೋಳಿ ಬಲಿನೀಡಿ ದೇವಸ್ಥಾನದ ಮೇಲೆ ಎಸೆದು ಅದು ಮೇಲಿನಿಂದ ಹಾರಾಡಿ ಬಿದ್ದಾಗ ಎತ್ತಿಕೊಂಡು ಮನೆಗೆ ಹೋಗುತ್ತಾರೆ. ಈ ಹಬ್ಬವು ಕಳೆದ ಹತ್ತು ತಲೆಮಾರಿನಿಂದ ನಡೆದುಕೊಂಡು ಬಂದಿರುವುದಾಗಿ ಗ್ರಾಮದ ಹಿರಿಯರಾದ ಪುಟ್ಟಯ್ಯ ಹೇಳುತ್ತಾರೆ.
ನೋಡಬನ್ನಿ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಸಂಭ್ರಮ...
ಗ್ರಾಮದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ಮಾರಿಯಮ್ಮ ತಡೆಯುತ್ತಾ ಬಂದಿದ್ದು, ಆ ನಂಬಿಕೆಯಿಂದ ಜಾತ್ರೆ ಮಾಡಿ ದೇವರಿಗೆ ಪೂಜೆ ಹರಕೆ ಸಲ್ಲಿಸಲಾಗುತ್ತದೆ ಎಂದು ಗ್ರಾಮದ ಹಿರಿಯರಾದ ಕಡ್ಡಿಪುಡಿ ತಮ್ಮೇಗೌಡ ಹೇಳಿದ್ದಾರೆ.