ಶ್ರೀಲಂಕಾ ಸರಣಿ ಸ್ಫೋಟ ಹಿನ್ನೆಲೆ:ಮುಂಗಡ ಕಾಯ್ದಿರಿಸಿದ ಟಿಕೆಟ್ ರದ್ದು
ಮೈಸೂರು, ಏಪ್ರಿಲ್ 28:ಉಗ್ರರ ಆತ್ಮಾಹುತಿ ದಾಳಿಯಿಂದ ನಲುಗಿರುವ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ನಾಗರೀಕರು ಹಿಂದೇಟು ಹಾಕುತ್ತಿದ್ದಾರೆ. ದ್ವೀಪ ರಾಷ್ಟ್ರವಾದ ಶ್ರೀಲಂಕಾ ಪ್ರವಾಸಿಗರ ನೆಚ್ಚಿನ ತಾಣವಾಗಿ ವಿಶ್ವ ಪ್ರಸಿದ್ಧವಾಗಿತ್ತು. ಆದರೆ ಕಳೆದ ಭಾನುವಾರ ನಡೆದ ಅಮಾನುಷ ಘಟನೆ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತ್ತು.
ಶ್ರೀಲಂಕಾ ಪ್ರವಾಸಕ್ಕಾಗಿ ಟ್ರಾವೆಲ್ಸ್ ಸಂಸ್ಥೆಗಳ ಮೂಲಕ ವಿಮಾನದಲ್ಲಿ ಆಸನಗಳನ್ನು ಮುಂಗಡವಾಗಿ ಕಾದಿರಿಸಿದ್ದ ಜಿಲ್ಲೆಯ ಹಲವು ಮಂದಿ ಇದೀಗ ಹಿಂದೆ ಸರಿದ ಸಂಗತಿ ತಿಳಿದುಬಂದಿದೆ. ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಈ ಪೈಕಿ ಕರ್ನಾಟಕದ ಒಂಬತ್ತು ಮಂದಿ ಸಹಿತ 10 ಭಾರತೀಯರು ಬಲಿಯಾಗಿದ್ದಾರೆ. ಒಟ್ಟು 38 ಮಂದಿ ವಿದೇಶಿಯರು ಅಸುನೀಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ಜತೆ ಕಾದಾಟದಲ್ಲಿ ಸ್ಫೋಟಿಸಿಕೊಂಡ ಮೂವರು ಐಎಸ್ ಐಎಸ್ ಉಗ್ರರು
ಈ ಸಾವು - ನೋವುಗಳನ್ನು ಕೆಲವರು ಹತ್ತಿರದಿಂದ ಕಂಡವರು, ಆಶ್ಚರ್ಯಕರ ರೀತಿಯಲ್ಲಿ ಬದುಕಿ ಬಂದವರು ಘಟನೆಯ ಕುರಿತು ಕಣ್ಣೀರಿಡುತ್ತಾ ಮಮ್ಮಲ ಮರಗುತ್ತಿದ್ದಾರೆ. ವಿಶ್ವದ ನಾನಾ ಭಾಗಗಳಿಂದ ಪ್ರವಾಸಕ್ಕೆ ತೆರಳಿದ್ದವರು, ಶ್ರೀಲಂಕಾ ಪೊಲೀಸ್ ವ್ಯವಸ್ಥೆ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ವಾಪಸ್ಸಾಗಿದ್ದಾರೆ.
ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರ ಪೈಕಿ ಕೆಲವರು ಶಾಂಗ್ರಿಲಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಬಾಂಬ್ ಸ್ಫೋಟದ ವೇಳೆಯಲ್ಲಿ ಕೆಲವರು ಹೊರಗೆ ಉಳಿದಿದ್ದರು. ಹಾಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಉಗ್ರರ ಈ ಭೀಕರ ಅಟ್ಟಹಾಸಕ್ಕೆ ನಲುಗಿದ ದೇಶದಲ್ಲಿ ಇದೀಗ ಹೈ ಅಲರ್ಟ್ ಘೋಷಣೆಯಾಗಿದೆ.
ಶಾಕಿಂಗ್: ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ದಕ್ಷಿಣ ಭಾರತದ ನಂಟು
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಭಾರತಕ್ಕೆ ಹಿಂದಿರುಗಲು ಮುಂಗಡ ಟಿಕೆಟ್ ಬುಕ್ ಮಾಡಿದ್ದವರು ಉಗ್ರರ ದಾಳಿ ನಂತರ ಬುಕ್ಕಿಂಗ್ ರದ್ದು ಮಾಡಿದ್ದಾರೆ ಎಂದು ಮೈಸೂರಿನ ಟ್ರಾವೆಲ್ಸ್ ಸಂಸ್ಥೆಯ ಮೂಲಗಳು ತಿಳಿಸಿವೆ.