ಮೈಸೂರು ದಸರಾ ನೋಡಲು ಬರುತ್ತಿದೆ ಪ್ರವಾಸಿಗರ ದಂಡು, ಹೋಟೆಲ್ ಮಾಲೀಕರು ಹೇಳೋದೇನು?
ಮೈಸೂರು, ಅಕ್ಟೋಬರ್. 17: ಒಂದಲ್ಲಾ ಒಂದು ಕಾರಣಕ್ಕೆ ಕಳೆಗುಂದುತ್ತಿದ್ದ ಹಾಗೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿದ್ದ ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಸರಾ ಆರಂಭದ ದಿನದಿಂದಲೂ ಪ್ರವಾಸಿಗರು ಮೈಸೂರಿಗೆ ಲಗ್ಗೆ ಇಡಲು ಆರಂಭಿಸಿದ್ದು, ನಗರದ ಎಲ್ಲಾ ಪ್ರವಾಸಿ ಸ್ಥಳಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳು ತುಂಬಿ ತುಳುಕುತ್ತಿವೆ. ನಗರದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಿದೆ. ಎಲ್ಲಿ ನೋಡಿದರಲ್ಲಿ ಪ್ರವಾಸಿಗರ ದಂಡು ಕಂಡು ಬರುತ್ತಿದೆ.
ನಗರದ ಬಹುತೇಕ ಹೋಟೆಲ್ ಗಳಲ್ಲಿ ಈಗಾಗಲೇ ವಿಜಯದಶಮಿ ದಿನದವರೆಗೆ ಶೇ.80ಕ್ಕಿಂತ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಕೆಲವು ಪ್ರಮುಖ ಹೋಟೆಲ್ ಗಳಲ್ಲಿ ಶೇ.100 ಕೊಠಡಿಗಳು ಭರ್ತಿಯಾಗಿವೆ. ಕಳೆದ ಬಾರಿ ಪ್ರಾರಂಭದಲ್ಲಿ ಹೋಟೆಲ್ ಗಳು ಖಾಲಿ ಹೊಡೆಯುತ್ತಿದ್ದವು.
ಮೈಸೂರು ಅರಮನೆಯ ಗೈಡ್ ಗಳು ಅತಂತ್ರ ಸ್ಥಿತಿಯಲ್ಲಿರುವುದಕ್ಕೆ ಕಾರಣ ಇದೇ!
ದಸರಾ ಕೊನೆಯ ಮೂರು ದಿನಗಳಲ್ಲಿ ಮಾತ್ರ ಶೇ.60ರಿಂದ 70 ರವರೆಗೆ ಕೊಠಡಿಗಳು ಭರ್ತಿಯಾಗಿದ್ದವು. ಆದರೆ ಈ ಬಾರಿ ಆತಿಥೇಯ ಉದ್ಯಮ ಖುಷಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಕೆಲವೊಂದು ವರ್ಷ ದಸರಾ ಸಂದರ್ಭದಲ್ಲೇ ಅವಘಡಗಳು ಸಂಭವಿಸುವ ಜತೆಗೆ, ಅತಿವೃಷ್ಟಿ, ಅನಾವೃಷ್ಟಿಗಳೂ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮ ಬೀರಿತ್ತು.
ಈ ಬಾರಿ ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಮೈಸೂರಿಗೆ ಭೇಟಿ ನೀಡುತ್ತಿದ್ದು, ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡಿ ಆನಂದಿಸುತ್ತಿದ್ದಾರೆ ಎಂದು ಪ್ರಮುಖ ಪ್ರವಾಸಿ ಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಮೇಲ್ವಿಚಾರಕರಾಗಿರುವ ಹಿರಿಯರೊಬ್ಬರು ಹೇಳಿದರು.
ಉತ್ತಮ ಪ್ರತಿಕ್ರಿಯೆ
ಈ ಬಾರಿ ದಸರಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಲ್ಪ ತಡವಾದರೂ ದಸರಾ ಪ್ರಚಾರ ದೇಶ, ವಿದೇಶಗಳಲ್ಲಿ ಚೆನ್ನಾಗಿ ಆಗಿದೆ. ವೆಬ್ ಸೈಟ್ ಮೂಲಕ ಹಾಗೂ ವಿಮಾನ ನಿಲ್ದಾಣಗಳಲ್ಲಿ, ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಚಾರ ಮಾಡಲಾಗಿದೆ.
ಈ ಬಾರಿ ಜಂಬೂ ಸವಾರಿ ವೀಕ್ಷಕರು ಟೋಪಿಯನ್ನು ಧರಿಸಲೇಬೇಕು!
ರೈತರ ಮುಖದಲ್ಲಿ ಸಂತಸ
ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಜಲಾಶಯಗಳು ತುಂಬಿದ್ದು, ರೈತರ ಮುಖದಲ್ಲಿ ಸಂತಸದ ಜೊತೆಗೆ ನೆಮ್ಮದಿಯನ್ನು ತಂದಿದೆ. ಕೃಷಿ ಚಟುವಟಿಕೆ ತೃಪ್ತಿಕರವಾಗಿದೆ. ಎಲ್ಲರೂ ಉತ್ಸಾಹದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ.
ಸಂಪೂರ್ಣ ತೊಡಗಿಸಿಕೊಂಡ ಸಚಿವರು
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಅತ್ಯಂತ ಶಿಸ್ತು ಬದ್ಧವಾಗಿ ಕಾರ್ಯಕ್ರಮಗಳು ನಡೆಯುವಂತೆ ಮಾಡಿ ಸ್ವತಃ ಅವರೇ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.
ಜಿಲ್ಲಾಡಳಿತ ಕೂಡ ಇದನ್ನು ಯಶಸ್ವಿಗೊಳಿಸಲು ತನ್ನೆಲ್ಲಾ ಪ್ರಯತ್ನಗಳನ್ನು ಮಾಡಿರುವುದು ಗಮನಾರ್ಹ.