"ಮೈಸೂರನ್ನು ಪ್ರವಾಸೋದ್ಯಮ ಬ್ರ್ಯಾಂಡ್ ಮಾಡಲು ಹೆಲಿ ಟೂರಿಸಂ''
ಮೈಸೂರು, ಮಾರ್ಚ್ 7: ಆಧುನಿಕ ಯುಗದ ಗ್ರಾಫಿಕ್ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು, ""ಇದು ಗ್ರಾಫಿಕ್ ಯುಗ, ದೃಶ್ಯ ಮಾಧ್ಯಮಗಳನ್ನು ತಿರುಚುವ, ಧ್ವನಿ ನೀಡುವ ಕೆಲಸ ಆಗುತ್ತಿದೆ. ಇದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ. ಗ್ರಾಫಿಕ್ ಮೂಲಕ ಕೈ ಕಾಲು ತಲೆ ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲಾ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಮಾನ, ಮರ್ಯಾದೆ, ಗೌರವದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ'' ಎಂದರು.
ಮೈಸೂರಿಗೆ ಶೀಘ್ರವೇ ಬರಲಿದೆ ಹೆಲಿ ಟೂರಿಸಂ
ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು
""ಸುಳ್ಳು ಬೇಗ ಹರಡುತ್ತದೆ. ಆದರೆ ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಜನರು ಅದನ್ನು ನಿಜ ಎಂದು ನಂಬುತ್ತಾರೆ. ಆದರೆ ಸತ್ಯ ಹೊರಬರುವುದು ಕೇವಲ ಪೊಲೀಸ್ ತನಿಖೆ, ನ್ಯಾಯಾಲಯದ ಮೂಲಕ. ಈ ಹಿನ್ನೆಲೆಯಲ್ಲಿ ಇದಕ್ಕೆ ನಾವೆಲ್ಲಾ ಭಯಪಡುತ್ತಿದ್ದೇವೆ'' ಎಂದು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ಕುರಿತು ಬಗ್ಗೆ ಸ್ಪಷ್ಟನೆ ನೀಡಿದರು.
ಮೈಸೂರು ಜಿಲ್ಲೆಯನ್ನು ಪ್ರವಾಸೋದ್ಯಮ ಬ್ರಾಂಡ್
ಇದೇ ವೇಳೆ ಮೈಸೂರು ಜಿಲ್ಲೆಯನ್ನು ಪ್ರವಾಸೋದ್ಯಮ ಬ್ರಾಂಡ್ ಮಾಡಲು ಚಿಂತನೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರಿನ ಹೆಸರಿನಲ್ಲಿ ಬ್ರಾಂಡ್ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಾಗಿ ಪದೇ ಪದೇ ಮೈಸೂರಿಗೆ ಬರುತ್ತಿದ್ದೇನೆ. ಇದರ ಹೊರತಾಗಿ ಇನ್ಯಾವುದೇ ರಾಜಕೀಯ ಉದ್ದೇಶ ಇಲ್ಲವೆಂದರು. ಅಲ್ಲದೇ, ನಾನು ರಾಮನಗರ ಉಸ್ತುವಾರಿ ಕೊಡಿ ಎಂದು ಕೇಳಿದ್ದೇನೆ. ಆದರೆ ಸಿಎಂ ಈ ಬಗ್ಗೆ ಇನ್ನು ಸ್ಪಷ್ಟಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ಉಸ್ತುವಾರಿ ಸಚಿವನಾಗುವ ಉದ್ದೇಶದಿಂದ ಮೈಸೂರಿಗೆ ಬರುತ್ತಿಲ್ಲ. ಪ್ರವಾಸೋದ್ಯಮ ಬಹಳ ಹಿಂದೆ ಇದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ವ್ಯವಸ್ಥೆ ಬಗ್ಗೆ ನಿರಾಸೆ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ವಿವಿಧ ಯೋಜನೆ ರೂಪಿಸಿದ್ದೇನೆ. ಆ ಕೆಲಸಕ್ಕಾಗಿ ಮೈಸೂರಿಗೆ ಬರುತ್ತಿದ್ದೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಹೆಲಿ ಟೂರಿಸಂ ನಿರ್ಮಾಣ
ಇದಕ್ಕೂ ಮುನ್ನ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಅವರು, ಶ್ರೀಚಕ್ರ ಪೂಜೆ, ಗಣಪತಿ ಹೋಮದಲ್ಲಿ ಭಾಗಿಯಾಗಿ ಗಣಪತಿ ಸಚ್ಚಿದಾನಂದ ಶ್ರೀಗಳ ಜತೆ ಸಮಾಲೋಚಿಸಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಲಿ ಟೂರಿಸಂ ನಿರ್ಮಾಣದ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ ನಡೆಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್, ಈ ಸಂಬಂಧ ಚರ್ಚಿಸುವ ನಿಟ್ಟಿನಲ್ಲಿ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಅರಮನೆ ಆವರಣದಲ್ಲಿ ಹೆಲಿಪ್ಯಾಡ್
ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಹೆಲಿ ಟೂರಿಸಂ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್ ಹಾಗೂ ಬೆಂಗಳೂರಿನ ಅರಮನೆ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಸಂಬಂಧ ಚರ್ಚೆ ನಡೆಸಿದರು. ಅಲ್ಲದೇ ಇದಕ್ಕೆ ಸಹಕಾರ ನೀಡುವಂತೆ ಪ್ರಮೋದಾದೇವಿ ಒಡೆಯರ್ ಅವರನ್ನು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇನ್ನಿತರರು ಇದ್ದರು.