ಕುಸಿದ ಟೊಮ್ಯಾಟೊ ಬೆಲೆ: ಮೈಸೂರಿನಲ್ಲಿ ರೈತರು ಮಾಡಿದ್ದು ಹೀಗೆ
ಮೈಸೂರು, ಮಾರ್ಚ್ 30: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಗೆ ಆದೇಶಿಸಲಾಗಿದ್ದು, ಮೈಸೂರಿನಲ್ಲಿಯೂ ಅದು ಮುಂದುವರೆದಿದೆ. ಆದರೂ ರೈತರಿಗೆ ತರಕಾರಿಯನ್ನು ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು.
Recommended Video
ಎಪಿಎಂಸಿ ಮಾರುಕಟ್ಟೆಗೆ ತರಕಾರಿಗಳನ್ನು ಹಾಕಲು ರೈತರಿಗೆ ಭಾನುವಾರ ಅವಕಾಶ ಕಲ್ಪಿಸಲಾಗಿದ್ದು, ಕೆಲವರು ಅಲ್ಲಿಯೇ ತರಕಾರಿ ಖರೀದಿಸಲು ಮುಗಿಬಿದ್ದದ್ದು ಕಂಡು ಬಂದಿದೆ. ಇಲ್ಲಿ ಹೋಲ್ ಸೇಲ್ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಚಿಲ್ಲರೆ ಮಾರಾಟಗಾರರು ನಿಮ್ಮ ಮನೆಯ ಬಾಗಿಲಿಗೇ ತರಕಾರಿಗಳನ್ನು ಕೊಂಡು ತರುತ್ತಾರೆ. ನೀವು ಅಲ್ಲಿಯೇ ಖರೀದಿಸಿ, ಇಲ್ಲಿಗೆ ಬರಬೇಡಿ ಎಂದು ಎಪಿಎಂಸಿ ಅಧಿಕಾರಿಗಳು ಗ್ರಾಹಕರನ್ನು ವಾಪಾಸ್ ಕಳಿಸಿದ್ದಾರೆ.
ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಉತ್ತಮ ಬೆಲೆ ಸಿಗದೆ, ಕೆ.ಜಿ ಗೆ ಕೇವಲ ಒಂದು ರುಪಾಯಿಗೆ ಸಗಟು ವ್ಯಾಪಾರಸ್ಥರು ಕೇಳಿದ ಕಾರಣ, ರೈತರು ತಾವು ಬೆಳೆದ ಟೊಮ್ಯಾಟೊವನ್ನು ಎಪಿಎಂಸಿ ಆವರಣದಲ್ಲಿಯೇ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರೈತರಿಗೆ ತರಕಾರಿ ಬೆಳೆದ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ, ಮತ್ತೊಂದೆಡೆ ಮಧ್ಯವರ್ತಿಗಳು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.