ಮೈಸೂರು; ಯುವಕರ ಗುಂಪಿನಿಂದ ಟೋಲ್ ಸಿಬ್ಬಂದಿ ಕೊಲೆ
ಮೈಸೂರು, ಅಕ್ಟೋಬರ್ 12: ಟೋಲ್ ಶುಲ್ಕ ಪಾವತಿಸುವ ವಿಚಾರಕ್ಕೆ ಜಗಳ ಉಂಟಾಗಿ ಟೋಲ್ ಸಿಬ್ಬಂದಿಯೊಬ್ಬರನ್ನು ಯುವಕರ ಗುಂಪೊಂದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಕೊಲೆಯಾದವರನ್ನು ನಂಜನಗೂಡು ತಾಲ್ಲೂಕಿನ ಕಳಕೊಳ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ.
ಟೋಲ್ ಸಂಗ್ರಹಣೆ ಮಾಡುವ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ನಂಜನಗೂಡಿನ ನಾಲ್ಕೈದು ಯುವಕರ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ
ಈ ಯುವಕರು ನಂಜನಗೂಡಿನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಟೋಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮೈಸೂರಿನಿಂದ ನಂಜನಗೂಡಿಗೆ ವಾಪಸ್ಸಾಗುವ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಗಣೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದುಷ್ಕೃತ್ಯ ಎಸಗಿದ್ದ ಯುವಕರ ಗುಂಪನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.