ಲಾಭದ ನಿರೀಕ್ಷೆಯಲ್ಲಿ ಸಾಲಗಾರನಾಗುತ್ತಿರುವ ತಂಬಾಕು ಬೆಳೆಗಾರ
ಮೈಸೂರು, ಸೆಪ್ಟೆಂಬರ್ 4: ಸಾಲ ಮಾಡಿ ತಂಬಾಕು ಬೆಳೆದರೆ ಒಂದಷ್ಟು ಲಾಭ ಪಡೆಯಬಹುದೆಂದು ನಂಬಿದ ರೈತರು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಬ್ಯಾಂಕ್, ಕೈಸಾಲ ಮಾಡಿ ತಂಬಾಕು ಕೃಷಿ ಮಾಡಿದ ಬೆಳೆಗಾರರು ಈಗ ತಂಬಾಕು ಬೆಳೆಯಿಂದ ಲಾಭ ದೊರೆಯದೆ ಮೈ ತುಂಬಾ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
ಒಂದು ಕಾಲದಲ್ಲಿ ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರೈತರು ತಂಬಾಕು ಬೆಳೆಯುತ್ತಿದ್ದರು. ಇದು ವಾಣಿಜ್ಯ ಬೆಳೆಯಾಗಿದ್ದರಿಂದ ಒಂದಷ್ಟು ಆದಾಯ ತರುತ್ತಿತ್ತು. ರೈತರು ತಂಬಾಕು ಬೆಳೆಯಿಂದ ಆದಾಯ ಬರುತ್ತಿದೆ ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಬೆಳೆ ಬೆಳೆಯುವ ಯತ್ನವನ್ನು ಮಾಡಿದರಾದರೂ ಅದ್ಯಾವುದೂ ಅವರ ಕೈ ಹಿಡಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ಬಿಕೋ ಎನ್ನುತ್ತಿರುವ ಮಂಗಳೂರು ಮಾರ್ಕೆಟ್, ಸಮಯಕ್ಕೆ ಬಾರದ ತರಕಾರಿಗಳು
ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ದುಬಾರಿಯಾಗಿರುವುದರಿಂದ ತಂಬಾಕು ಬೆಳೆ ನಾಟಿಯಿಂದ ಆರಂಭವಾಗಿ ಹದಗೊಳಿಸಿ ಮಾರಾಟ ಮಾಡುವವರೆಗಿನ ತನಕ ಆಗುವ ಖರ್ಚುಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಬೆಲೆಗೆ ತಾಳೆ ಮಾಡಿ ನೋಡಿದರೆ ಯಾವುದೇ ರೀತಿಯ ಲಾಭಗಳು ಕಂಡು ಬರುತ್ತಿಲ್ಲ.
ಇದರಿಂದಾಗಿ ರೈತರು ಬರುಬರುತ್ತಾ ತಂಬಾಕು ಬೆಳೆಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಆದರೆ ಮೊದಲಿನಿಂದಲೂ ಇದನ್ನೇ ನಂಬಿ ಇದೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ರೈತರು ಬಿಡಲಾಗದೆ ಅನಿವಾರ್ಯವಾಗಿ ತಂಬಾಕು ಕೃಷಿ ಮಾಡುತ್ತಿದ್ದಾರೆ. ಹಿಂದೆ ತಂಬಾಕಿಗೆ ಉತ್ತಮ ದರ ದೊರೆಯುತ್ತಿದ್ದರಿಂದ ರೈತರು ಕೂಡ ಇದೇ ಬೆಳೆಯನ್ನು ಬೆಳೆಯುತ್ತಿದ್ದರು.
ಕಳೆದ ಬಾರಿ 100ಮಿಲಿಯನ್ ತಂಬಾಕು ಖರೀದಿ
ಕಳೆದ ಬಾರಿ ಕರ್ನಾಟಕದಲ್ಲಿ 100 ಮಿಲಿಯನ್ ಗೂ ಹೆಚ್ಚು ತಂಬಾಕನ್ನು ರೈತರಿಂದ ವಿವಿಧ ಕಂಪನಿಗಳು ಖರೀದಿಸಿದ್ದವು. ತಂಬಾಕು ಮಂಡಳಿಯು ಸಿಂಗಲ್ ಬ್ಯಾರನ್ ತಂಬಾಕು ಬೆಳೆಯಲು ಲೈಸೆನ್ಸ್ ನೀಡಿದ್ದು, ಅದರಂತೆ ರೈತರು 1750 ಕೆ.ಜಿ. ಮಾತ್ರ ತಂಬಾಕು ಬೆಳೆಯಬೇಕು. ಡಬಲ್ ಬ್ಯಾರನ್ ಲೈಸೆನ್ಸ್ ಹೊಂದಿರುವವರು 3500 ಕೆ.ಜಿ. ಬೆಳೆಯಬೇಕು. ಅದರಲ್ಲೂ ಲೈಸೆನ್ಸ್ ಗಿಂತ ಹೆಚ್ಚು ಬೆಳೆದರೆ ಮಂಡಳಿಯು 150 ಕೆ.ಜಿ. ಮಾತ್ರ ಖರೀದಿ ಮಾಡಿ, ಉಳಿದಂತೆ 7 ರೂ ದಂಡ ವಿಧಿಸಿ ಖರೀದಿ ಮಾಡುತ್ತದೆ.
ಇನ್ನು ಹಲವು ತಂಬಾಕು ಬೆಳೆಯುವ ರೈತರಿಗೆ ತಾತ್ಕಾಲಿಕ ಕಾರ್ಡ್ ನೀಡಿದ್ದಾರೆ. ಆವರು ಅನಧಿಕೃತ ತಂಬಾಕು ಬೆಳೆಯುವವರು ಎಂದು ಮಂಡಳಿ 1000 ರೂ.ಗಳಿಗೆ ರೂ.150 ದಂಡ ಜೊತೆಗೆ 1 ಕೆ.ಜಿ. ಗೆ ರೂ.2 ರಂತೆ ಪ್ರತ್ಯೇಕವಾಗಿ ದಂಡ ವಿಧಿಸಿ ತಂಬಾಕು ಖರೀದಿಸಿಕೊಳ್ಳುತ್ತಾರೆ. ಇದರ ಬದಲು ಅಧಿಕೃತ ಮತ್ತು ಅನಧಿಕೃತ ಬೆಳೆಗಾರರ ಸೊಪ್ಪನ್ನು ಏಕ ಕಾಲದಲ್ಲಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ.
ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...
ಕೂಲಿ ಹೆಚ್ಚಾಗಿದೆ
ಕಳೆದ ವರ್ಷ ಗಂಡಸರಿಗೆ 250 ರೂ. ಕೂಲಿ ನೀಡುತ್ತಿದ್ದರೆ, ಈ ಬಾರಿ 300ರೂ. ಕೂಲಿ ನೀಡಬೇಕಾಗಿದೆ. ಮಹಿಳೆಯರಿಗಂತೂ 150ರೂ. ಗಳಿಂದ 200ರೂ. ಹೆಚ್ಚಾಗಿದೆ. ಜೊತೆಗೆ ಊಟ ಮತ್ತು ಇನ್ನಿತರೆ ಖರ್ಚು ವೆಚ್ಚ ಪ್ರತ್ಯೇಕ ಇದ್ದು, ಕೆಲಸದ ವೇಳೆಯೂ ಬೆಳಿಗ್ಗೆ 6 ಗಂಟಗೆ ಕೆಲಸಕ್ಕೆ ಬಂದರೆ ಮಧ್ಯಾಹ್ನ 12 ಗಂಟೆಗೆ ವಾಪಸ್ ಮನೆಗೆ ತೆರಳುತ್ತಾರೆ.
ಹುಲುಗಾರುಬೈಲುವಿನಲ್ಲಿ ಭತ್ತವೆಲ್ಲಾ ಮಣ್ಣು ಪಾಲು, ಆತಂಕದಲ್ಲಿ ರೈತರು
ತಂಬಾಕು ಹದಗೊಳಿಸಲು ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆ
ತಂಬಾಕು ಹದಗೊಳಿಸಲು ಸೌದೆಯ ಬೆಲೆ ಕಳೆದ ವರ್ಷ 1 ಟನ್ ಗೆ ರೂ.3000 ಇದ್ದರೆ, ಈ ವರ್ಷ ರೂ.3500 - 4000 ಹೆಚ್ಚಾಗಿದ್ದು, ತಂಬಾಕು ಎಲೆಗಳನ್ನು ಜಮೀನಿನಿಂದ ಮನೆಯ ಹತ್ತಿರ ತರಲು ಎತ್ತಿನ ಗಾಡಿ ಅಥವಾ ಡಿಸೇಲ್ ವಾಹನಗಳಿಗೆ ಡಿಸೇಲ್ ಬೆಲೆ ಏರಿಕೆಯಿಂದ 2-3 ಕಿಲೋ ಮೀಟರ್ ದೂರವಿದ್ದರೆ, ಕಳೆದ ಬಾರಿ ರೂ.600 ಇದ್ದ ಬಾಡಿಗೆ ಈ ವರ್ಷ ರೂ.800 ಗಳಿಗೆ ಹೆಚ್ಚಾಗಿದೆ. ಜೊತೆಗೆ ಸ್ಥಳೀಯ ಕೂಲಿಗಾರರು ಗುತ್ತಿಗೆ ಆಧಾರದಲ್ಲಿ ಒಂದು ಸಿಂಗಲ್ ಬ್ಯಾರನ್ ಗೆ ರೂ.30000 ತೆಗೆದುಕೊಳ್ಳುತ್ತಾರೆ.
ಆಂಧ್ರದಿಂದ ಬರುವ ಕೂಲಿಗಾರರು ಒಂದು ಬ್ಯಾರನ್ ನ ಸಂಪೂರ್ಣ ಕೆಲಸ ಮುಗಿಸಲು 22,000 ರೂ.ಗಳನ್ನು ಕಳೆದ ವರ್ಷ ಪಡೆದರೆ, ಈ ಬಾರಿ ರೂ.25000 -26000 ಗಳಿಗೆ ಗುತ್ತಿಗೆ ಪಡೆದು, ಸಂಪೂರ್ಣ ಕೆಲಸ ಮುಗಿಸುತ್ತಾರೆ. ಇನ್ನು ತಂಬಾಕು ಹದುಗೊಳಿಸುವ ಬೆಂಕಿ ಶಾಖಕ್ಕೆ ಉಪಯೋಗಿಸುವ ತಗಡು ಕಳೆದ ವರ್ಷ 9000ರೂ ಇತ್ತು. ಆದರೆ ಈ ಬಾರಿ ರೂ.10,000ಕ್ಕೂ ಹೆಚ್ಚಾಗಿದೆ. ಹೀಗೆ ಎಲ್ಲವೂ ಹೆಚ್ಚಾಗಿದೆಯಾದರೂ ಬೆಲೆ ಮಾತ್ರ ಹೆಚ್ಚಾದಂತೆ ಕಂಡು ಬರುತ್ತಿಲ್ಲ.
ತಂಬಾಕು ಬೆಲೆ ಕಡಿಮೆ
ತಂಬಾಕು ಖರೀದಿಸುವ ತಂಬಾಕು ಮಂಡಳಿ (ಐಟಿಸಿ) ಜೊತೆಗೆ ಸಣ್ಣಪುಟ್ಟ ಕಂಪನಿಗಳು ತಂಬಾಕು ಖರೀದಿಸಲು ಮಾರುಕಟ್ಟೆಗೆ ಬರುತ್ತಿದ್ದು, ಕಳೆದ ಬಾರಿ ರೈತರಿಗೆ ಸರಾಸರಿ 1 ಕೆ.ಜಿ. ತಂಬಾಕಿಗೆ ರೂ. 140 ರಿಂದ 150 ರೂ ದೊರೆತಿತ್ತು. ಕಳೆದ ವರ್ಷ ರೈತ ತಂಬಾಕು ಬೆಳೆಯಲು 1 ಕೆ.ಜಿ.ಗೆ 150 ರಿಂದ 180 ಖರ್ಚಾಗುತ್ತಿತ್ತು. ಈ ವರ್ಷ 1 ಕೆ.ಜಿ. ತಂಬಾಕು ಬೆಳೆಯಲು 200 ರಿಂದ 220 ಖರ್ಚು ತಗುಲುತ್ತಿದೆ. ಆದರೆ ಇದಕ್ಕೆ ತಕ್ಕ ಬೆಲೆ ಸಿಗದ ಕಾರಣದಿಂದಾಗಿ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಕಳೆದ ವರ್ಷ ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಮತ್ತೆ ಸಾಲ ಮಾಡಿ ತಂಬಾಕು ಬೆಳೆಯುವ ಪ್ರಯತ್ನ ಮಾಡುತ್ತಿದ್ದು ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿದೆ. ಇದರ ಮರ್ಮ ಅರಿತ ಹಲವು ಬೆಳೆಗಾರರು ತಂಬಾಕು ಬೆಳೆಯಿಂದ ದೂರ ಸರಿಯುತ್ತಿದ್ದು ಪರ್ಯಾಯ ಬೆಳೆಯತ್ತ ಗಮನ ಹರಿಸುತ್ತಿದ್ದಾರೆ. ಹೀಗೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಸಾಲದಿಂದ ಮುಕ್ತಿ ಹೊಂದಲು ಸಾಧ್ಯವಾಗಬಹುದೇನೋ?