ಖುಷಿಯಿಂದ ಜಮೀನಿನತ್ತ ತೆರಳುತ್ತಿರುವ ತಂಬಾಕು ಬೆಳೆಗಾರರು, ಕಾರಣವೇನು?
ಮೈಸೂರು, ಮೇ 05:ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಕೆಲವು ಭಾಗಗಳಲ್ಲಿ ತಂಬಾಕನ್ನು ಬೆಳೆಯಲಾಗುತ್ತಿದ್ದು, ತಂಬಾಕು ಲೈಸೆನ್ಸ್ ಹೊಂದಿದ ಬೆಳೆಗಾರರು ತಮ್ಮ ಜಮೀನಿನಲ್ಲಿ ತಂಬಾಕು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಇದೀಗ ಕಂಡು ಬರುತ್ತಿದೆ.
ಈಗಾಗಲೇ ಮಳೆಯಾಗಿರುವುದರಿಂದ ತಂಬಾಕು ಬೆಳೆಗಾರರು ಜಮೀನನ್ನು ಹದಗೊಳಿಸಿ ತಂಬಾಕು ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಹದವಾಗಿ ಮಳೆ ಸುರಿದರೆ ಕೃಷಿ ಕೆಲಸ ಕಾರ್ಯಗಳಿಗೆ ಉತ್ತಮವಾಗಲಿದೆ.
ಅರಣ್ಯ ನಾಶ:ತಂಬಾಕು ಬೆಳೆಗಾರರಿಗೆ ಸಸಿ ನೀಡಲು ಮುಂದಾದ ಅರಣ್ಯ ಇಲಾಖೆ
ಹುಣಸೂರು ವ್ಯಾಪ್ತಿಯಲ್ಲಿ ಸುರಿದ ಗಾಳಿ ಮಳೆಗೆ ಬಹಳಷ್ಟು ಹಾನಿಯಾಗಿತ್ತಾದರೂ ಮಳೆಯಿಂದಾಗಿ ಮಣ್ಣು ತೇವಗೊಂಡಿದ್ದು, ತಂಬಾಕು ಕೃಷಿ ಚಟುವಟಿಕೆಗೆ ಇದರಿಂದ ಅನುಕೂಲವಾದಂತಾಗಿದೆ. ಕಳೆದ ವರ್ಷ ತಂಬಾಕು ನಾಟಿಯ ನಂತರ ಧಾರಾಕಾರ ಮಳೆ ಸುರಿದ ಪರಿಣಾಮ ಹುಲುಸಾಗಿ ಬೆಳೆದಿದ್ದ ತಂಬಾಕು ಕೊಚ್ಚಿಕೊಂಡು ಹೋಗಿತ್ತು.
ಈ ಬಾರಿ ಉತ್ತಮ ಇಳುವರಿ ಮತ್ತು ದರದ ನಿರೀಕ್ಷೆಯಿಂದಲೇ ರೈತರು ತಂಬಾಕು ಗಿಡಗಳ ನಾಟಿಯಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ. ಮೈಸೂರು ಜಿಲ್ಲೆಯ ಪೈಕಿ ತಂಬಾಕನ್ನು ಹೆಚ್ಚಾಗಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು, ಈ ಮಣ್ಣಿನಲ್ಲಿ ಉತ್ತಮ ಗುಣಮಟ್ಟದ ತಂಬಾಕು ದೊರೆಯುತ್ತಿದ್ದು, ಬೇಡಿಕೆಯಿದೆ.
ಕಳೆದ ವರ್ಷದ ಲಾಭವಿದು
ತಾಲೂಕಿನಲ್ಲಿ 13,670 ನೊಂದಾಯಿತ ತಂಬಾಕು ರೈತರಿದ್ದು, ಕಳೆದ ವರ್ಷ 24,228 ವಿಸ್ತೀರ್ಣದ ಜಮೀನಿನಲ್ಲಿ ತಂಬಾಕು ಬೆಳೆಯಲಾಗಿತ್ತು. ಅಲ್ಲದೆ, 25.1 ಮಿಲಿಯನ್ ತಂಬಾಕು ಬೆಳೆದು ಮಾರಾಟ ಮಾಡಲಾಗಿತ್ತಲ್ಲದೆ, ಕನಿಷ್ಟ ಬೆಲೆ 80 ರಿಂದ ಗರಿಷ್ಟ ಬೆಲೆ 188ರ ವರೆಗೂ ದರ ಬೆಳೆಗಾರರಿಗೆ ದೊರೆತಿತ್ತು.
ಬೆಳೆಯುವುದನ್ನು ಮಾತ್ರ ಬಿಡುತ್ತಿಲ್ಲ
ತಂಬಾಕು ವಾಣಿಜ್ಯ ಬೆಳೆಯಾಗಿರುವ ಕಾರಣ ಒಂದಷ್ಟು ಹೆಚ್ಚಿನ ಆದಾಯ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ತಂಬಾಕು ಬೆಳೆಯುತ್ತಾರೆ. ಆದರೆ ಕೆಲವೊಮ್ಮೆ ಬೆಳೆ ಕೈಕೊಟ್ಟು ನಷ್ಟ ಹೊಂದಿದವರು ಇದ್ದಾರೆ. ಆದರೂ ಮುಂಗಾರು ಹಂಗಾಮಿಗೆ ಈ ಬೆಳೆ ಸೂಕ್ತವಾಗಿರುವುದರಿಂದ ಬೆಳೆಗಾರರು ಲಾಭವೋ ನಷ್ಟವೋ ಬೆಳೆ ಬೆಳೆಯುವುದನ್ನು ಮಾತ್ರ ಬಿಡುತ್ತಿಲ್ಲ.
ಕೈ ಕೊಟ್ಟ ತಂಬಾಕು, ರೈತರ ಜೇಬು ತುಂಬಿಸಿದ ಪರ್ಯಾಯ ಬೆಳೆ
ಈ ಬಾರಿ ಉತ್ತಮ ಮಳೆ
ಈ ನಡುವೆ ಕಳೆದ ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಜಮೀನಿನತ್ತ ಮುಖ ಮಾಡಿದ್ದು, ತಂಬಾಕು ಬೆಳೆ ನಾಟಿಗೆ ಮುಂದಾಗುತ್ತಿದ್ದಾರೆ. ಇದುವರೆಗೆ ಸಸಿ ಮಡಿಯಲ್ಲಿ ಬೆಳೆಸಿದ್ದ ತಂಬಾಕು ಸಸಿಗಳನ್ನು ತಂದು ಜಮೀನಿನಲ್ಲಿ ನಾಟಿ ಮಾಡುವ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ.
ರೈತರಿಗೆ ಬಿತ್ತನೆ ಬೀಜ ಪೂರೈಕೆ
ಇನ್ನೊಂದೆಡೆ ತಂಬಾಕು ಬೆಳೆಗಾರರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ತಾಲೂಕು ಕೃಷಿ ಇಲಾಖೆ, ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ತಂಬಾಕು ಬೆಳೆಯುವ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ತಂಬಾಕು ಬೆಳೆಗಾರರು ಈ ಬಾರಿ ಖುಷಿಯಿಂದಲೇ ಜಮೀನಿನತ್ತ ತೆರಳಿ ಕೃಷಿ ಚಟುವಟಿಕೆಯಲ್ಲಿ ನಿರತರಾಗುತ್ತಿರುವುದು ಸಾಮಾನ್ಯವಾಗಿದೆ.