ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಔಟ್: ಓವರ್ ಟು ಯದುವೀರ್ ಒಡೆಯರ್
Recommended Video
ಮೈಸೂರು, ಅ 31: ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ಮುಂದಾಗಿರುವ ಯಡಿಯೂರಪ್ಪ ಸರಕಾರದ ನಿರ್ಧಾರದ ಬಗ್ಗೆ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.
"ಸರಕಾರದ ನಿರ್ಧಾರದ ಬಗ್ಗೆ ನಾನು ವೈಯಕ್ತಿಕ ಹೇಳಿಕೆಯನ್ನು ನೀಡುವುದಿಲ್ಲ. ಆದರೆ, ಇತಿಹಾಸದಲ್ಲಿರುವ ವಿಷಯಗಳನ್ನು ತಿರುಚುವ ಕೆಲಸ ಆಗಬಾರದು" ಎಂದು ಒಡೆಯರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ
"ಮಕ್ಕಳಿಗೆ ಇತಿಹಾಸದಲ್ಲಿ ಇರುವಂತೆ ಕಲಿಸಬೇಕು. ಈ ಕುರಿತು ಟಿಪ್ಪು ಸುಲ್ತಾನ್ ಇತಿಹಾಸವನ್ನು ಅರಿತವರಿಂದ ಸರಕಾರ ಸಲಹೆಯನ್ನು ಕೇಳಲಿ" ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ನವೆಂಬರ್ ಹತ್ತರಂದು ಆಚರಿಸಲಾಗುವ ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ.
"ನಮ್ಮ ಮುಂದಿನ ಪೀಳಿಗೆಗೆ ಟಿಪ್ಪು ಸುಲ್ತಾನ್ ನಿಂದ ಆಗಿರುವ ಮೋಸದ ಇತಿಹಾಸದ ಬಗ್ಗೆ ಹೇಳಿಕೊಡಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹ" ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ತೆಗೆದುಹಾಕುವ ಬಗ್ಗೆ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆ ಕರೆದು ಮೂರು ದಿನದೊಳಗೆ ವರದಿ ಸಲ್ಲಿಸುವಂತೆ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆದೇಶಿಸಿದ್ದರು.