ಚಾಮುಂಡಿ ಬೆಟ್ಟಕ್ಕೆ ಇನ್ನು ಮುಂದೆ ಟೈಟ್ ಸೆಕ್ಯೂರಿಟಿ..!
ಈಗಾಗಲೇ ಬಂಡೀಪುರ, ನಾಗರ ಹೊಳೆ, ಕರಿಘಟ್ಟ ಮೊದಲಾದ ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಸಾವಿರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ.ಅನಾಹುತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ನಗರದ ಚಾಮುಂಡಿಬೆಟ್ಟದ ಅರಣ್ಯ ರಕ್ಷಣೆಗೆ ಮುಂದಾಗಿದೆ.
ಮೈಸೂರು, ಮಾರ್ಚ್ 4 : ಅಭಯಾರಣ್ಯದಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ನಗರದ ಚಾಮುಂಡಿಬೆಟ್ಟದ ಅರಣ್ಯ ರಕ್ಷಣೆಗೆ 24x7 ಸೇವೆಯ ಮೂಲಕ ವ್ಯಾಪಕ ಭದ್ರತೆ ಕೈಗೊಳ್ಳಲು ಮುಂದಾಗಿದೆ.
ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ನೆಚ್ಚಿನ ತಾಣ ಚಾಮುಂಡಿಬೆಟ್ಟ. 17 ಚದರ ಕಿ.ಮೀ. ವ್ಯಾಪ್ತಿಯ 615 ಹೆಕ್ಟೇರ್ ವಿಸ್ತೀರ್ಣವುಳ್ಳ ಬೃಹತ್ ಅರಣ್ಯ ಹಲವು ಅಪರೂಪದ ವನ್ಯಜೀವಿಗಳನ್ನು, ನಿಸರ್ಗ ಸಂಪತ್ತನ್ನು ಹೊಂದಿದೆ.
ಈಗಾಗಲೇ ಬಂಡೀಪುರ, ನಾಗರ ಹೊಳೆ, ಕರಿಘಟ್ಟ ಮೊದಲಾದ ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಸಾವಿರಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಕಾಡ್ಗಿಚ್ಚಿನಿಂದಾಗಿ ನೂರಾರು ಪ್ರಾಣಿ, ಪಕ್ಷಿಗಳು ಸಹ ಬಲಿಯಾಗಿವೆ. ಇದಿಷ್ಟೇ ಅಲ್ಲದೆ, ಕಾಡ್ಗಿಚ್ಚನ್ನು ನಂದಿಸಲು ಹೋದ ಅರಣ್ಯ ರಕ್ಷಕ ಮುರುಗೆಪ್ಪ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ.
ಚಾಮುಂಡಿ ಬೆಟ್ಟದ ಸುತ್ತಲು ಅಂದರೆ ಉತ್ತನಹಳ್ಳಿಗೆ ತೆರಳುವ ಮಾರ್ಗ, ಲಲಿತ್ ಮಹಲ್ ಹೆಲಿಪ್ಯಾಡ್ ಸೇರಿದಂತೆ ಬೆಟ್ಟದ ಪ್ರವೇಶದ ನಾಲ್ಕೂ ಕಡೆಗಳ ಪ್ರಮುಖ ಸ್ಥಳಗಳಲ್ಲಿ 40 ಮಂದಿ ವಾಚರ್ ಗಳನ್ನು ದಿನದ 24 ಗಂಟೆಗಳೂ ಕಣ್ಗಾವಲಿಗೆ ನೇಮಿಸಲಾಗಿದೆ. ಒಂದು ವೇಳೆ ಬೆಂಕಿ ಕಾಣಿಸಿಕೊಂಡರೆ ಆರಿಸಲು ಬೆಟ್ಟದ ಮೇಲ್ಭಾಗದಲ್ಲೇ ಒಂದು ನೀರಿನ ಟ್ಯಾಂಕರ್ ಇಡಲಾಗಿದೆ
ಇನ್ನು ಮುಂದೆ ಸಾರ್ವಜನಿಕರು ಬೆಟ್ಟದ ಆವರಣದಲ್ಲಿ ಎಲ್ಲೆಂದರಲ್ಲಿ ಬೀಡಿ, ಸಿಗರೇಟು ಸೇದಿ ಎಸೆಯುವಂತಿಲ್ಲ. ಇಂತಹವರ ಮೇಲೆ ವಾಚರ್ ಗಳು ಹದ್ದಿನ ಕಣ್ಣಿಡುತ್ತಾರೆ. ಅಲ್ಲದೆ ಅರಣ್ಯ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟದಲ್ಲಿ ನಾಲ್ಕು ರಸ್ತೆಗಳನ್ನು ರಾತ್ರಿ ವೇಳೆ ಬಂದ್ ಮಾಡಿ ಸಾರ್ವಜನಿಕರು ಸಂಚರಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಇದೇ ವೇಳೆ ಪೊಲೀಸ್ ಇಲಾಖೆ ಕೂಡ ಬೆಟ್ಟದ ಮೇಲಿನ ಗಸ್ತನ್ನು ಹೆಚ್ಚಿಸಿದೆ.