ಮೈಸೂರಿಗರಿಗೆ ಇನ್ಮುಂದೆ ಟೈಗರ್ ವಾಹನದ ಕಿರಿಕಿರಿಯಿಲ್ಲ: ಯಾಕೆ, ಹೇಗೆ?
ಮೈಸೂರು, ಮಾರ್ಚ್ 09: ಮೈಸೂರಿನಲ್ಲಿ 'ನೋ ಪಾರ್ಕಿಂಗ್'ನಲ್ಲಿ ಗಾಡಿ ನಿಲ್ಲಿಸಿದರೆ ಸಾಕು ನಿಮ್ಮ ಗಾಡಿಗಳನ್ನು ಎತ್ತಿಕೊಂಡು ಹೋಗುತ್ತಿದ್ದ 'ಟೈಗರ್' ಕೆಲವು ದಿನಗಳಿಂದ ಕಾಣಸಿಗುತ್ತಿಲ್ಲ.
ಹೌದು, ದ್ವಿಚಕ್ರ ವಾಹನ ಸವಾರರಿಗೆ ದುಃಸ್ವಪ್ನವಾಗಿದ್ದ 'ಟೈಗರ್', ಸಂಚಾರಿ ಪೊಲೀಸರ ದಂಡ ವಸೂಲಿ ಮಾಡಲು ಸಹಕಾರಿಯಾಗುತ್ತಿತ್ತು. ಆದರೆ ಸದ್ಯ ಈ ಟೈಗರ್ ವಾಹನ ಕಾರ್ಯಾಚರಣೆ ಇನ್ಮುಂದೆ ಸ್ಥಗಿತಗೊಳ್ಳಲಿದೆ.
ಮೈಸೂರಿನಲ್ಲಿ ಸಂಚಾರಿ ನಿಯಮ ಪಾಲಿಸಿದವರಿಗೆ ಟ್ರಾಫಿಕ್ ಪೊಲೀಸರಿಂದ ಗಿಫ್ಟ್
ಅರೇ ಇದೇನಿದು ಎಂದು ಅಚ್ಚರಿಪಡಬೇಡಿ, ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದರೆ ಸಾಕು, 'ಟೈಗರ್' ವಾಹನ ನಿಮ್ಮ ಗಾಡಿಯನ್ನು ಬಂದು ಲಿಫ್ಟ್ ಮಾಡಿ, ನಿಯಮ ಪಾಲಿಸದೆ ಇದ್ದರೆ ದಂಡ ವಸೂಲಿ ಮಾಡುತ್ತಿತ್ತು. ಆದರೆ 'ಟೈಗರ್' ವರ್ತನೆ ಬಗ್ಗೆ ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ದೂರು ಬಂದಿದ್ದವು. ಆದ್ದರಿಂದ ಈ ಟೈಗರ್ ವಾಹನಗಳ ಕಾರ್ಯಾಚರಣೆಯನ್ನು ಸದ್ಯ ರದ್ದುಗೊಳಿಸಲಾಗಿದೆ.
ಮೈಸೂರು ನಗರದ ವ್ಯಾಪ್ತಿಯೊಳಗೆ ಬರುವ ವಿವಿಪುರಂ, ಸಿದ್ದಾರ್ಥ ನಗರ, ಕೃಷ್ಣರಾಜ , ನರಸಿಂಹರಾಜ, ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 7 ಟೈಗರ್ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮೈಸೂರು ಪೊಲೀಸ್ ಆರಂಭಿಸಿರುವ ಮೊಬೈಲ್ ಆಪ್ ಹೇಗಿದೆ ಗೊತ್ತಾ?
ಇನ್ನು 'ನೋ ಪಾರ್ಕಿಂಗ್' ಸ್ಥಳಗಳಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದರೆ 'ಟೈಗರ್' ಎತ್ತುಕೊಂಡು ಹೋದಲ್ಲಿ 300ರೂ.ದಂಡ ಶುಲ್ಕ ಎಂದು ನಿಗದಿಗೊಳಿಸಲಾಗಿತ್ತು. ಹಾಗಾದರೆ ಟೈಗರ್ ವಾಹನ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಲು ಕಾರಣವೇನು ಎಂಬುದರ ಪೂರ್ತಿ ವಿವರ ಇಲ್ಲಿದೆ ಓದಿ...
ಪೊಲೀಸ್ ಇಲಾಖೆಗೆ ಮಾತ್ರ 100 ರೂ.ಸಿಗುತ್ತಿತ್ತು
ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರು ದಂಡ ಪಾವತಿ ಮಾಡಿದರೂ, ಪೊಲೀಸ್ ಇಲಾಖೆಗೆ ಮಾತ್ರ 100 ರೂ ಸಿಗುತ್ತಿತ್ತು. ಉಳಿದ 200 ರೂ.ಹಣ 'ಟೈಗರ್' ವಾಹನದ ಗುತ್ತಿಗೆದಾರ ಮತ್ತು ಸಿಬ್ಬಂದಿ ವೇತನಕ್ಕೆ ಸೇರುತ್ತಿತ್ತು. ಇದನ್ನು ಮನಗೊಂಡ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಟೆಂಡರ್ ಕರೆದು ಖಾಸಗಿಯವರಿಗೆ ವಹಿಸಲಾಗಿತ್ತು
'ನೋ ಪಾರ್ಕಿಂಗ್' ನಲ್ಲಿ ದ್ವಿಚಕ್ರ ವಾಹನಗಳಿಂದ ಸುಗಮ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಟೈಗರ್ ವಾಹನಗಳನ್ನು ಪರಿಚಯಿಸಲಾಗಿತ್ತು. ಇದರ ನಿರ್ವಹಣೆಯನ್ನು ಖಾಸಗಿ ಅವರಿಗೆ ಟೆಂಡರ್ ಮೂಲಕ ವಹಿಸಲಾಗಿತ್ತು.
ಬೆಂಗಳೂರು ರಸ್ತೆ ಅಪಘಾತ: ಮೃತರಲ್ಲಿ ಶೇ.40ರಷ್ಟು ಪಾದಚಾರಿಗಳು
ಇದ್ಯಾವುದನ್ನೂ ಪಾಲಿಸುತ್ತಿರಲಿಲ್ಲ 'ಟೈಗರ್'
ಈ ಟೈಗರ್ ವಾಹನಗಳನ್ನು ಎತ್ತಿಕೊಂಡು ಹೋಗುವಾಗ ಸಿಬ್ಬಂದಿ ಮೊದಲು ವಾಹನದ ಸಂಖ್ಯೆಯನ್ನು ಧ್ವನಿವರ್ಧಕದ ಮೂಲಕ ಕೂಗಿ ಹೇಳಬೇಕು ಎಂಬ ನಿಯಮವಿದ್ದರೂ ಇದ್ಯಾವುದನ್ನೂ ಪಾಲಿಸುತ್ತಿರಲಿಲ್ಲ. ಹೆಚ್ಚು ದಂಡ ವಸೂಲಿ ಮಾಡಿದರೆ ತಮಗೆ ಹೆಚ್ಚು ಹಣ ಬರಬಹುದೆಂಬ ದುರಾಸೆಗೆ ಬಿದ್ದ ಟೈಗರ್ ಸಿಬ್ಬಂದಿ ನಿಯಮವನ್ನು ಮನಬಂದಂತೆ ಬದಲಾಯಿಸಿಕೊಳ್ಳುತ್ತಿದ್ದರು.
ಹಳೆ ಯೋಜನೆಯನ್ನು ಮುಂದುವರೆಸಲಿದ್ದಾರೆ
ಅಲ್ಲದೇ, ಕ್ಷಣಾರ್ಧದಲ್ಲಿ ವಾಹನಗಳನ್ನು ಎತ್ತಿಕೊಂಡು ಹೋಗುವಾಗ ಅನೇಕ ಬಾರಿ ವಾಹನಕ್ಕೆ ಧಕ್ಕೆಯುಂಟಾಗುತ್ತಿತ್ತು. ಇದು ಮೈಸೂರು ನಗರ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿತ್ತು.
ಇದೀಗ 'ಟೈಗರ್' ಪರ್ಯಾಯವಾಗಿ ಮೈಸೂರು ಪೊಲೀಸರೇ ಫೋಟೋ ತೆಗೆದು ಮನೆಗೆ ಕಳುಹಿಸುವ ಹಳೆ ಯೋಜನೆಯನ್ನು ಮುಂದುವರೆಸಲಿದ್ದಾರೆ.