ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್ನಲ್ಲಿ ಭಯ ಸೃಷ್ಟಿಸಿದ ಹುಲಿಯ ಸೆರೆ ಯಾವಾಗ?
ಮೈಸೂರು, ಜನವರಿ 07: ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾ.ಪಂ.ಗೆ ಸೇರಿದ ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್ನಲ್ಲಿ ಆಗಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರಿಗೆ ಭಯ ಹುಟ್ಟಿಸುವ ಹುಲಿಯನ್ನು ಸೆರೆಹಿಡಿಯೋದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಇದೀಗ ಒಂದು ಕಡೆ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿಯೋದು ಹೇಗೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಗ್ರಾಮಸ್ಥರು ಮನೆಯಿಂದ ಹೊರಬಂದು ಜಮೀನಿನಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಹೊರಗೆ ಮೇಯಲು ಕಟ್ಟಲು ಭಯಪಡುತ್ತಿದ್ದಾರೆ.
ಸಾವಿನಿಂದ ಪಾರಾಗಿ ಪುನರ್ವಸತಿ ಕೇಂದ್ರ ಸೇರಿದ ಹುಲಿರಾಯ!
ಕಳೆದ ಕೆಲವು ತಿಂಗಳುಗಳಿಂದ ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹುಲಿ ಸೃಷ್ಠಿಸಿರುವ ಆತಂಕ ಒಂದೆರಡಲ್ಲ. ಅದರ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದರು. ಆದರೆ ಅದು ಮಾತ್ರ ಯಾರಿಗೂ ಸಿಗದೆ ನಾಪತ್ತೆಯಾಗಿತ್ತು.
ಹುಲಿಯ ಸುಳಿವು ಸಿಗದಿದ್ದರಿಂದ ಅದು ಅರಣ್ಯಕ್ಕೆ ಮರಳಿರಬಹುದೆಂದು ನಿಟ್ಟುಸಿರುವ ಬಿಡುವ ಸಮಯದಲ್ಲಿಯೇ ಮತ್ತೆ ಕಾಣಿಸಿಕೊಳ್ಳುವ ಹುಲಿ ಮೇಯಲು ಬಿಟ್ಟಿದ್ದ ಕುರಿಗಳ ಮೇಲೆಯೇ ದಾಳಿ ಮಾಡಿ ಕೊಂದು ತಿಂದಿದೆ. ಇದರಿಂದ ಭಯಗೊಂಡ ಗ್ರಾಮಸ್ಥರು ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಹುಲಿ ಹಿಡಿಯಲು ಹೋದಾಗ ನಾಪತ್ತೆಯಾದ ದಸರಾ ಆನೆ ಅಶೋಕ
ಈ ಹಿಂದೆಯೂ ಹಸುವಿನ ಮೇಲೆ ದಾಳಿ ಮಾಡಿತ್ತು. ಆಗ ಸಿಸಿಟಿವಿ ಕ್ಯಾಮರಾ ಅಳವಡಿಸಿ ಆ ಮೂಲಕ ಹುಲಿಯ ಇರುವನ್ನು ಹುಡುಕುವ ಪ್ರಯತ್ನ ಮಾಡಲಾಗಿತ್ತಲ್ಲದೆ, ಸಾಕಾನೆಗಳ ಮೂಲಕ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಹುಲಿ ಮಾತ್ರ ಸಿಗಲೇ ಇಲ್ಲ.
ಕೂಂಬಿಂಗ್ ಕಾರ್ಯಾಚರಣೆ ಆರಂಭ
ಇದೀಗ ಮತ್ತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ತರಗನ್ ಎಸ್ಟೇಟ್ ಸಮೀಪದ ಕಚ್ಚುವಿನಹಳ್ಳಿ ಗ್ರಾಮದ ಯಜಮಾನ್ ಮಾದೇಗೌಡರ ತೋಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳ ಮೇಲೆ ಹುಲಿ ದಾಳಿ ನಡೆಸಿದ ಹುಲಿ ಎರಡು ಕುರಿಗಳನ್ನು ಕೊಂದು ತಿಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಅರಣ್ಯ ಇಲಾಖೆಯು ಹುಲಿ ಪತ್ತೆಗೆ ಮತ್ತೆ ಬಲರಾಮ, ಗಣೇಶನ ನೆರವಿನಿಂದ ಕಚುವಿನಹಳ್ಳಿ ಶ್ರೇಣಿಯ ಡಿಆರ್ಎಫ್ ಓ ವೀರಭದ್ರಯ್ಯ ನೇತೃತ್ವದ ತಂಡ ಕೂಬಿಂಗ್ ಕಾರ್ಯಾಚರಣೆ ಆರಂಭಿಸಿ ಹುಲಿ ಸೆರೆಗೆ ಕ್ರಮ ಕೈಗೊಂಡಿದ್ದಾರೆ.
ಬೋನ್ ಇಟ್ಟರೂ ಸೆರೆ ಹಿಡಿಯಲಾಗಲಿಲ್ಲ
ಈ ಹುಲಿ ಮೊದಲ ಬಾರಿಗೆ ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್ನಲ್ಲಿ ಆಗಸ್ಟ್ ತಿಂಗಳಿನಲ್ಲಿ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಅಲ್ಲದೇ ಇದು ಆಗಾಗ್ಗೆ ದಾಳಿ ನಡೆಸಿ, ಐದಾರು ಜಾನುವಾರುಗಳು, ಹತ್ತಕ್ಕೂ ಹೆಚ್ಚು ಕುರಿ, ಕಾಡು ಹಂದಿ, ಜಿಂಕೆಗಳ ಮೇಲೆ ದಾಳಿ ನಡೆಸಿತ್ತು, ಆಗಲೂ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಲ್ಲದೆ, ಡ್ರೋಣ್ ಕ್ಯಾಮರಾ ಬಳಸಿ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಆ ನಂತರ ಮತ್ತೆ ಜಾನುವಾರುವೊಂದರ ಮೇಲೆ ದಾಳಿ ನಡೆಸಿದ ಹುಲಿಯನ್ನು ಬೋನ್ ಇಟ್ಟರೂ ಸೆರೆ ಹಿಡಿಯಲಾಗಲಿಲ್ಲ.
ಪೊದೆಗಳಲ್ಲಿ ಕುಳಿತು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಗಳು
ಸಿಕ್ಕಿತು 2 ವರ್ಷದ ಹುಲಿಯ ಮರಿ
ಇದಾದ ಬಳಿಕ ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶ, ಮುತ್ತಣ್ಣರ ಆಂಜನೇಯ ಫಾರಂನಲ್ಲಿ ಕಾಣಿಸಿಕೊಂಡಿತ್ತು. ಈ ವೇಳೆ ಮತ್ತೆ ಕೂಂಬಿಂಗ್ ನಡೆಸಲಾಯಿತಾದರೂ ಹುಲಿ ಸಿಗಲೇ ಇಲ್ಲ. ಕೆಲವು ದಿನಗಳ ನಂತರ ಎರಡು ವರ್ಷದ ಹುಲಿ ಮರಿಯು ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದ ಜಮೀನಿನ ಬಳಿ ಹಾಕಲಾಗಿದ್ದ ಉರುಳಿಗೆ ಸಿಲುಕಿತ್ತು, ಅದನ್ನು ರಕ್ಷಿಸಿ ಮೈಸೂರಿನ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಬಹುಶಃ ಈ ಹುಲಿ ಮರಿ ಈಗ ಕಾಣಿಸಿಕೊಳ್ಳುತ್ತಿರುವ ಹುಲಿಯ ಮರಿ ಇರಬಹುದೆಂಬ ಸಂಶಯವಿದೆ.
ನೆಮ್ಮದಿಯಿಂದ ಬದುಕಲು ಸಾಧ್ಯ
ಈಗ ತಾಯಿ ಹುಲಿ ಮತ್ತೆ ಕಾಣಿಸಿದೆ. ಕುರಿಯನ್ನು ತಿಂದು ಹಾಕಿರುವ ಹುಲಿ ಪದೇ ಪದೇ ಬಂದು ದಾಳಿ ಮಾಡುವ ಎಲ್ಲ ಸಾಧ್ಯತೆ ಇರುವುದರಿಂದಾಗಿ ಈ ಬಾರಿ ಹೇಗಾದರೂ ಮಾಡಿ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯಲಿ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ. ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಹುಲಿ ಸೆರೆ ಹಿಡಿದರೆ ಮಾತ್ರ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಬಹುದು.