ಎಚ್.ಡಿ.ಕೋಟೆಯಲ್ಲಿನ್ನೂ ಪತ್ತೆಯಾಗದ ಹುಲಿ, ಗ್ರಾಮಸ್ಥರಿಗಿಲ್ಲ ನೆಮ್ಮದಿ!
ಎಚ್ ಡಿ ಕೋಟೆ ಬಳಿ ಕಾಣಿಸಿಕೊಂಡು, ಬಾಳೆತೋಟವೊಂದರಲ್ಲಿ ಅವಿತಿದ್ದ ಹುಲಿ ಇನ್ನೂ ಪತ್ತೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಎಚ್.ಡಿ.ಕೋಟೆ: ಹೆಗ್ಗಡಾಪುರ ಮತ್ತು ನಾಗನಹಳ್ಳಿ ನಡುವೆ ಕಾಣಿಸಿಕೊಂಡು ಬಾಲರಾಜು ಎಂಬುವವರ ಬಾಳೆತೋಟದಲ್ಲಿ ಆಶ್ರಯ ಪಡೆದಿದೆ ಎನ್ನಲಾದ ಹುಲಿ ಇನ್ನೂ ಸೆರೆಸಿಕ್ಕಿಲ್ಲದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿದೆ. ಹುಲಿಯ ಸುಳಿವು ಸಿಗದ ಕಾರಣ ಕಾರ್ಯಾಚರಣೆ ನಡೆಸಿದ ತಂಡ ನಿರಾಸೆಗೊಂಡಿದ್ದರೆ, ಜನ ಭಯಭೀತರಾಗಿದ್ದಾರೆ.[ಮೈಸೂರಿನ ಬಾಳೆತೋಟದಲ್ಲಿ ಅವಿತ ಹುಲಿರಾಯ!]
ಭಾನುವಾರದ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ಹುಲಿ ಬಾಳೆತೋಟದಲ್ಲಿ ಆಶ್ರಯ ಪಡೆದಿತ್ತು, ಸೋಮವಾರ ಬೆಳಿಗ್ಗೆ 6 ಗಂಟೆಗೆ ಆ ತೋಟದಿಂದ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ನಾಲ್ಕಾರು ತಂಡಗಳಾಗಿ ಕಾರ್ಯಾಚರಣೆ ನಡೆಸಿದರು.
ಜಮೀನಿನ ಸುತ್ತ ಒಣ ಜಮೀನಿದ್ದು ಹುಲಿಯ ಹೆಜ್ಜೆ ಗುರುತು ಪತ್ತೆ ಮಾಡಲು ಸಾಧ್ಯವಾಗಲಿಲ್ಲ . ಸಿಬ್ಬಂದಿ ಹುಲಿಯಿದ್ದ ಸ್ಥಳದಿಂದ ಐದು ಕಿಲೋಮೀಟರ್ ಸುತ್ತಳತೆಯಲ್ಲಿ ಹುಡುಕಾಟ ನಡೆಸಿದರೂ ಹುಲಿಯ ಸುಳಿವು ಸಿಗಲಿಲ್ಲ.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]
ಕಾರ್ಯಾಚರಣೆಗಾಗಿ ಮೇಟಿಕುಪ್ಪೆ, ಅಂತರಸಂತೆ ಮತ್ತು ಎಚ್.ಡಿ.ಕೋಟೆ ಸಾಮಾಜಿಕ ಅರಣ್ಯ ಸಿಬ್ಬಂದಿ ಮತ್ತು ಕವಾಡಿಗಳಾಗಿ ನೇಮಕಗೊಂಡು ತರಬೇತಿ ಪಡೆಯುತ್ತಿದ್ದವರನ್ನು ಬಳಸಿಕೊಳ್ಳಲಾಯಿತು.
ಅರವಳಿಕೆ ನೀಡಲು ಮತ್ತು ಹುಲಿಯ ಪತ್ತೆಗಾಗಿ ಅಭಿಮನ್ಯು ಮತ್ತು ಕೃಷ್ಣ ಸಾಕು ಆನೆಗಳನ್ನು ಬಳಸಿದರೂ ಹುಲಿ ಮಾತ್ರ ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಂಡಿದೆ.[ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!]
ಈ ಸಂದರ್ಭ ಮಾತನಾಡಿದ ಪಶುವೈದ್ಯ ಡಾ. ಉಮಾಶಂಕರ್ ರವರು ಇಲ್ಲಿ ಕಾಣಿಸಿಕೊಂಡ ಹುಲಿಯು ಒಂದರಿಂದ ಒಂದೂವರೆ ವರ್ಷದಾಗಿದ್ದು, ತಾಯಿ ಹುಲಿಯಿಂದ ಬೇರ್ಪಟ್ಟು ಸ್ವಲ್ಪ ನಿತ್ರಾಣವಾಗಿದೆ. ಇಲ್ಲಿಂದ ಕಾಡು ನಾಲ್ಕು ಕಿಲೋಮೀಟರ್ ಇದೆ.
ಸಿಬ್ಬಂದಿ ಹುಲಿಯ ಹುಡುಕಾಟ ಸಂದರ್ಭದಲ್ಲಿ ದಟ್ಟಹಳ್ಳ ಕಾಡಿಗೆ ಒಂದು ಕಿಲೋಮೀಟರ್ ಅಂತರದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಹುಲಿ ಕಾಡಿಗೆ ಸೇರಿರಬಹುದು ಎನ್ನಲಾಗುತ್ತಿದೆ.[ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ]
ಕಾರ್ಯಾಚರಣೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಡಿಎಫ್ ಓ ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ರಘು, ವಲಯಾರಣ್ಯಾಧಿಕಾರಿಗಳಾದ ಮಧು, ಮಹೇಶ್, ಶರಣಬಸಪ್ಪ, ಪಶುವೈದ್ಯರಾದ ನಾಗರಾಜು, ಡಾ.ಮದನ್ ಪಾಲ್ಗೊಂಡಿದ್ದರು.