ಎಚ್ ಡಿ ಕೋಟೆಯಲ್ಲಿ ಹುಲಿ ಸಾವಿಗೆ ಅರಿವಳಿಕೆ ಚುಚ್ಚುಮದ್ದೇ ಕಾರಣವೆ?
ಎಚ್.ಡಿ.ಕೋಟೆ, ಜನವರಿ 17: ಸೆರೆ ಹಿಡಿಯುವ ಸಲುವಾಗಿ ನೀಡಿದ ಅರಿವಳಿಕೆಯಿಂದ ಹುಲಿಯೊಂದು ಸಾವನ್ನಪ್ಪಿದ ಘಟನೆ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದ ಕಾಡಂಚಿನ ಮಾಳದ ಹಾಡಿ ಸಮೀಪ ನಡೆದಿದೆ.
ಮಾಳದ ಹಾಡಿ ಸಮೀಪದ ಗಣೇಶ ಎಂಬುವರ ಜಮೀನಿನ ತೋಟದಲ್ಲಿ ಸೋಮವಾರ ಹಸುವನ್ನು ಕೊಂದು, ಅಲ್ಲಿಯೇ ಹುಲಿ ಬೀಡು ಬಿಟ್ಟಿತ್ತು. ವಿಷಯ ತಿಳಿದು ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು.
ಈ ಸಂದರ್ಭದಲ್ಲಿ ಕಾಣಿಸಿದ ಹುಲಿಗೆ ವೈದ್ಯರ ಮೂಲಕ ಮೊದಲ ಬಾರಿಗೆ ಸಂಜೆ 5.30ರಲ್ಲಿ ಅರಿವಳಿಕೆ ಮದ್ದನ್ನು ಹಾರಿಸಲಾಯಿತು. ಆದರೆ ಅದು ಹುಲಿಗೆ ಬಿದ್ದಿಲ್ಲ. ಸ್ಥಳದಲ್ಲಿ ಹೆಚ್ಚಿನ ಜನರು ಇದ್ದುದರಿಂದ ಕಾರ್ಯಾಚರಣೆಗೆ ತೊಂದರೆ ಆಯಿತು. ಬಳಿಕ ಜನರನ್ನು ಅಲ್ಲಿಂದ ಚದುರಿಸಿ, ರಾತ್ರಿ 11 ಗಂಟೆಗೆ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.[ಬಂಡೀಪುರ ಉದ್ಯಾನದಲ್ಲಿ ಆನೆ ಸಾವು... ಹುಲಿಗೆ ಗಾಯ..!]
ಅರಿವಳಿಕೆಯನ್ನು ಹಾರಿಸಿ, ಹುಲಿಯನ್ನು ಸೆರೆ ಹಿಡಿದು ಬೋನಿಗೆ ಹಾಕಿ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿದ ನಂತರ ಎಲ್ಲರೂ ವಿಶ್ರಾಂತಿಗೆ ತೆರಳಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಬೋನಿನಲ್ಲಿರವ ಹುಲಿಯನ್ನು ನೋಡಿದಾಗ ಕತ್ತು ಮುರಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ.
ಆ ನಂತರ ಪಶು ಜೈವಿಕ ಸಂಸ್ಥೆಯ ವೈದ್ಯಾಧಿಕಾರಿಗಳಾದ ಧರಣೇಶ್, ಸುಮಂತ್, ಯಶವಂತ್ ರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವೈದ್ಯರ ಪ್ರಕಾರ, ಹುಲಿಯ ತೊಡೆ ಭಾಗದಲ್ಲಿ ಗಾಯ ಮತ್ತು ಮುಂದಿನ ಬಲಗಾಲಿಗೂ ಗಾಯವಾಗಿದ್ದು, ದವಡೆ ಹಲ್ಲು ಮುರಿದಿದೆ.[ನರಭಕ್ಷಕ ಹುಲಿಗಾಗಿ ಎಚ್ಡಿ ಕೋಟೆಯಲ್ಲಿ ಭಾರೀ ಹುಡುಕಾಟ]
ಗಣೇಶ ಎಂಬುವವರ ಜಮೀನಿನಲ್ಲಿ ಸೆರೆ ಸಿಕ್ಕಿ ಮೃತಪಟ್ಟ ಹುಲಿಯನ್ನು ಸುಂಕಕಟ್ಟೆಯಲ್ಲಿ ಇರಿಸಿದ್ದು, ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಗ್ರಾಮಸ್ಥರ ಪ್ರಕಾರ, ಹುಲಿಯನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ಹುಲಿಗೆ ಅರಿವಳಿಕೆ ಮದ್ದು ನೀಡಿದ್ದರಿಂದ ಮತ್ತು ಸೆರೆ ಹಿಡಿದ ನಂತರ ಎಚ್ಚರಿಕೆ ವಹಿಸದ ಹಿನ್ನೆಲೆಯಲ್ಲಿ ಮೃತಪಟ್ಟಿದೆ.
ಇತ್ತೀಚೆಗೆ ಮೊಳೆಯೂರು ಅರಣ್ಯ ವಲಯದ ನುಗು ಜಲಾಶಯದ ಹಿನ್ನೀರಿನಲ್ಲಿ ಕಾಲಿಗೆ ಗಾಯವಾಗಿದ್ದ ಹುಲಿಯ ಸೆರೆ ಸಂದರ್ಭದಲ್ಲೂ ಅತಿಯಾದ ಅರವಳಿಕೆಯಿಂದಾಗಿ ಮೃತಪಟ್ಟಿದ್ದನ್ನು ಸ್ಮರಿಸಬಹುದು.