ಪಿರಿಯಾಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಹುಲಿ ಸಾವು
ಮೈಸೂರು, ಜೂನ್ 18: ಅರಣ್ಯ ನೆಡುತೋಪಿನಲ್ಲಿನ ಭೀಮನಕಟ್ಟೆಯ ನೀರು ತಡೆಗೋಡೆಯ ತಳಭಾಗದಲ್ಲಿ ಗಂಡು ಹುಲಿಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಅಳಲೂರು ಸಮೀಪವಿರುವ ಭೀಮಕಟ್ಟೆಯಲ್ಲಿ (ವನ್ಯಜೀವಿ ವಿಭಾಗದ ಮುದ್ದನಳ್ಳಿ ಅರಣ್ಯ ನೆಡುತೋಪಿನಲ್ಲಿ) ಈ ಘಟನೆ ಜರುಗಿದೆ. ಸಾವನ್ನಪ್ಪಿರುವ ಹುಲಿ ಸುಮಾರು 6 ರಿಂದ 7 ವರ್ಷದ್ದಾಗಿದೆ ಎಂದು ಅಂದಾಜಿಸಲಾಗಿದೆ.
ರೈತರಲ್ಲಿ ಭಯ ಹುಟ್ಟಿಸಿದ್ದ ಹುಲಿ ಬೋನಿಗೆ ಬಿತ್ತು
ಕಳೆದ ಮೂರು ದಿನಗಳಿಂದ ಆಹಾರ ಸೇವಿಸಿಲ್ಲದೆ ಸತ್ತಿರುವ ಶಂಕೆ ವ್ಯಕ್ತವಾಗಿದೆ. ಹುಲಿಯ ಮೈಮೇಲೆ ಹಳೆಯ ಗಾಯದ ಗುರುತುಗಳು ಕಂಡು ಬಂದಿದ್ದು, ಕತ್ತಿನ ಮೂಳೆ ಮುರಿದಿದೆ. ಹೊಟ್ಟೆ ಭಾಗದ ಹಲವು ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿದ್ದು, ಬಹು ದಿನಗಳ ಹಿಂದೆ ಕಾಡು ಪ್ರಾಣಿಗಳ ಜೊತೆ ಕಾದಾಟವಾಗಿರಬಹುದು ಅಥವಾ ನೀರು ಸಂಗ್ರಹಕ್ಕೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯಿಂದ ಬಿದ್ದು ಸಾವನಪ್ಪಿರಬಹುದು ಎಂದು ವನ್ಯ ಜೀವಿಗಳ ವಿಭಾಗದ ವೈದ್ಯ ಡಾ.ಮುಜೀಭ್ ರೆಹಮಾನ್ ತಿಳಿಸಿದ್ದಾರೆ.
ವೈದ್ಯಕೀಯ ಮರಣೋತ್ತರ ಪರೀಕ್ಷೆಯ ವರದಿ ನಂತರ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವಿದೆ. ಮೃತ ಹುಲಿ ದೇಹದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು.
ಸ್ಥಳದಲ್ಲಿ ಹುಣಸೂರು ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ರಾಷ್ಟ್ರೀಯ ಹುಲಿ ಸಂರಕ್ಷಣಾ ಸಮಿತಿಯ ಸದಸ್ಯೆ ಕೃತಿಕಾ, ಸ್ವಯಂ ಸೇವಾ ಸಂಸ್ಥೆಯ ಸದಸ್ಯ ಲೊಕೇಶ್, ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ಎಂ.ಎ.ರತನ್ಕುಮಾರ್, ಹುಣಸೂರು ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ, ಗ್ರಾಪಂ ಅಧ್ಯಕ್ಷ ದಿನೇಶ್, ಇತರೆ ಅರಣ್ಯಾಧಿಕಾರಿಗಳಾದ ಸಿದ್ದರಾಜು, ರತ್ನಾಕರ್, ಶಿವಣ್ಣ, ವಿನಾಯಕ, ಎಲ್ಲಪ್ಪ ಹೈಬಿ ಸೇರಿದಂತೆ ಇತರರು ಹಾಜರಿದ್ದರು.