ಕಾಕನಕೋಟೆಯ ಮೊದಲ ದಿನದ ಸಫಾರಿಯಲ್ಲೇ ಹುಲಿ ದರ್ಶನ
ಮೈಸೂರು, ಜುಲೈ 27: ಮೂರು ತಿಂಗಳ ಲಾಕ್ಡೌನ್ ಬಳಿಕ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿರುವ ಕಾಕನಕೋಟೆ ಸಫಾರಿ ಪುನರಾರಂಭವಾಗಿದೆ. ಮೊದಲ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿಯ ದರ್ಶನ ಭಾಗ್ಯ ಸಿಕ್ಕಿದೆ.
ಲಾಕ್ಡೌನ್ನಿಂದ ಮನೆಯಲ್ಲೇ ಕಾಲ ಕಳೆದಿದ್ದ ಕಣ್ಣುಗಳಿಗೆ ಇಂದಿನ ಸಫಾರಿ ಹಚ್ಚ ಹಸಿರಿನ ಅರಣ್ಯ ಸೌಂದರ್ಯವನ್ನು ಕಣ್ತುಂಬುವಂತೆ ಮಾಡಿದೆ. ಅಲ್ಲದೇ ಸಫಾರಿಯಲ್ಲಿ ಪ್ರವಾಸಿಗರು ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಹಾಗೂ ವಿವಿಧ ಜಾತಿಯ ಹದ್ದುಗಳು ಮತ್ತು ಪಕ್ಷಿಗಳನ್ನು ನೋಡಿ ಸಂತಸಪಟ್ಟು, ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡರು.
ಬಂಡೀಪುರ ಸಫಾರಿಗೆ ಮತ್ತೆ ನಿರ್ಬಂಧ... ರೆಸಾರ್ಟ್ಗಳು ಖಾಲಿ
ಸಫಾರಿಯ ಪ್ರಾರಂಭಕ್ಕೂ ಮೊದಲು ಹಾಗೂ ಸಫಾರಿ ಮುಗಿದ ನಂತರವು ಪ್ರತಿ ವಾಹನಕ್ಕೆ ಸ್ಯಾನಿಟೈಸರ್ ಮಾಡಲಾಗುವುದು ಹಾಗೂ ನಮ್ಮ ಸಿಬ್ಬಂದಿಗೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕಡಿಮೆ ಜನರಿಗೆ ಮಾತ್ರ ಸಫಾರಿಗೆ ಅವಕಾಶವಿದ್ದು ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.
ಲಾಕ್ಡೌನ್ ಬಳಿಕ ಮೊದಲ ಸಫಾರಿ ನಿಜಕ್ಕೂ ಬಹಳ ಸಂತೋಷ ತಂದಿದೆ. ಮೊದಲ ಸಫಾರಿಯಲ್ಲೇ ಹುಲಿ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಅಲ್ಲದೇ ಅಲವು ದಿನಗಳ ಬಳಿಕ ಕಾಡಿನ ಸೌಂದರ್ಯ ಸವಿದೆವು ಎಂದು ಸಂತಸ ವ್ಯಕ್ತಪಡಿಸಿದರು ಪ್ರವಾಸಿಗ ರಾಮಕೃಷ್ಣ.
ಸಫಾರಿ ಪ್ರಾರಂಭಕ್ಕೂ ಮೊದಲೇ ಎಚ್.ಡಿ.ಕೋಟೆ ತಾಲೂಕಿನ ಆಡಳಿತ ಮಂಡಳಿ ಸಫಾರಿ ಕೇಂದ್ರಕ್ಕೆ ಭೇಟಿ ನೀಡಿ ಮುಂಜಾಗೃತಾ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.