ಟಿಬೆಟಿಯನ್ನರು ಭಾರತಕ್ಕೆ ಚಿರಋಣಿಯಾಗಿರಬೇಕು: ದಲೈಲಾಮ
ಮೈಸೂರು, ಡಿಸೆಂಬರ್ 21: 'ಆಶ್ರಯ ನೀಡಿ, ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ಟಿಬೆಟಿಯನ್ನರಾದ ನಾವು ಭಾರತೀಯರಿಗೆ ಸದಾ ಚಿರಋಣಿಯಾಗಿರಬೇಕೆಂದು' ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದರು
ಅವರು ಮಗೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಸೆರಮೇ ಮೊನಾಷ್ಟ್ರಿಯಲ್ಲಿ ಸೈನ್ಸ್ ಡಿಬೇಟ್ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 'ಆಧುನಿಕ ಪ್ರಪಂಚವು ಅಭಿವೃದ್ಧಿ ಹೊಂದಲು ಸಂಸ್ಕೃತಿಯ ಜತೆಗೆ ವೈಜ್ಞಾನಿಕತೆಯ ಜಾಗೃತಿ ಕೂಡ ಅವಶ್ಯಕ. ಪ್ರತಿ ರಾಷ್ಟ್ರ ಕೂಡ ತನ್ನದೇ ಆದ ಧರ್ಮ ಸಂಸ್ಕೃತಿಯನ್ನು ಹೊಂದಿದೆ. ಆದ್ದರಿಂದ ಯಾವುದೇ ಧರ್ಮವನ್ನು ಹೊಂದಿದ್ದರೂ ಅದನ್ನು ಗೌರವಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದ್ದು, ಇದು ಭಾರತವನ್ನು ಪ್ರತಿಯೊಬ್ಬರೂ ಪ್ರೀತಿಸುವಂತೆ ಮಾಡಿದೆ' ಎಂದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮಿ ಮಾತನಾಡಿ ಬುದ್ಧನ ತತ್ವಗಳು ನಾಡಿನಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ, ಅಲ್ಲದೆ ಈ ತತ್ವಗಳನ್ನು ನಾಡಿನುದ್ದಕ್ಕೂ ಪಸರಿಸುವ ಕೆಲಸವನ್ನು ದಲೈಲಾಮರವರು ಮಾಡುತ್ತಿರುವುದು ಶ್ರೇಷ್ಠ ಕಾರ್ಯವಾಗಿದೆ, ಆದ್ದರಿಂದ ಅವರಿಗೆ ನೋಬೆಲ್ ಪ್ರಶಸ್ತಿ ದೊರತಿದೆ. ಯಾವುದೇ ಧರ್ಮ ಸಂಸ್ಕೃತಿ ಪ್ರಸಿದ್ಧಿ ಹೊಂದಲು ಅವುಗಳಲ್ಲಿನ ತತ್ವ ಸಿದ್ಧಾಂತಗಳು ಬಹಳ ಪ್ರಮುಖವಾದ ಅಂಶವಾಗಿದ್ದು ಇವು ಪ್ರತಿಯೊಬ್ಬರಲ್ಲಿಯೂ ಆಧ್ಯಾತ್ಮಿಕ ಚಿಂತನೆ ಮೂಡಿಸುವಂತೆ ಮಾಡುತ್ತದೆ ಎಂದರು.
ಸುತ್ತೂರು ಸಂಸ್ಥಾನದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರಸ್ವಾಮಿ ಮಾತನಾಡಿ, 'ಆಧ್ಯಾತ್ಮಿಕತೆಯು ಮನುಷ್ಯನ ಜೀವನವನ್ನು ಉನ್ನತೀಕರಿಸಲು ಪ್ರಮುಖವಾದ ಅಸ್ತ್ರವಾಗಿದ್ದು ದಲೈಲಾಮರವರು ತಮ್ಮ ಬದುಕಿನುದ್ದಕ್ಕು ಟಿಬೇಟಿಯನ್ನರ ಧರ್ಮ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟವನ್ನು ಮಾಡುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿಯೂ ಕೂಡ ನಾಡಿನ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದಾರೆ ವಿವಿಧ ಭಾಗಗಳಲ್ಲಿ ಶಿಕ್ಷಣ ಕೇಂದ್ರ, ಪ್ರಾರ್ಥನಾ ಮಂದಿರ, ಅನಾಥ ಆಶ್ರಮಗಳ ನಿರ್ಮಾಣ ಸೇರಿದಂತೆ ವಿವಿಧ ಸಾಮಾಜಿಕ ಜಾಗೃತಿಯ ಕೇಂದ್ರಗಳನ್ನು ನಿರ್ಮಿಸಿ ಜ್ಞಾನವನ್ನು ಹೆಚ್ಚಿಸುವಂತೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಡೀ ವಿಶ್ವವೇ ದಲೈಲಾಮರವರನ್ನು ಶಾಂತಿಧೂತ ಎಂದು ಗೌರವಿಸುತ್ತಿದೆ ಎಂದು ತಿಳಿಸಿದರು.