ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡ್ಲು ಮಲ್ಲಿಕಾರ್ಜುನನಿಗೆ ಟಿಬೆಟಿಯನ್ನರೇ ಭಕ್ತರು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು: ಸುಂದರ ನಿಸರ್ಗ ರಮಣೀಯ, ಹಸಿರ ಹಚ್ಚಡದ ಬೆಟ್ಟದ ಮೇಲೆ ನೆಲೆ ನಿಂತಿರುವ ಶ್ರೀ ಸಿಡ್ಲುಮಲ್ಲಿಕಾರ್ಜುನ ದೇಗುಲ ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನಡೆಗೆ ಸೆಳೆಯುವ ಸುಂದರ ತಾಣವಾಗಿದೆ. ಇಲ್ಲಿಗೆ ಟಿಬೆಟಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದು ಗಮನಾರ್ಹವಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಸಿಡ್ಲುಮಲ್ಲಿಕಾರ್ಜುನ ದೇಗುಲವಿದ್ದು, ಎತ್ತರವಾದ ಬೆಟ್ಟದ ಮೇಲೆ ನಿರ್ಮಾಣವಾಗಿರುವ ದೇಗುಲ ಆಕರ್ಷಣೀಯವಾಗಿದೆ. ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿಗಳ ಸಾಲಿಗೆ ಸೇರ್ಪಡೆಯಾಗಿರುವ ಸಿಡಿಲುಬೆಟ್ಟವು ಮಲ್ಲಿಕಾರ್ಜುನ ನೆಲೆ ನಿಂತ ಭವ್ಯ ತಾಣವಾಗಿದೆ. ಇಲ್ಲಿನ ಮಲ್ಲಿಕಾರ್ಜುನಸ್ವಾಮಿ ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿದ್ದಾನೆ.[ಮೈಗಾಡ್, ಪಿರಿಯಾಪಟ್ಟಣದಲ್ಲಿ ಏಲಿಯನ್ ಮತ್ತೆ ಕಾಣಿಸಿತಾ?]

ಕೊಡಗು ಮತ್ತು ಮೈಸೂರಿಗೆ ಗಡಿಭಾಗದಲ್ಲಿರುವ ಈ ಬೆಟ್ಟವು ನಿಸರ್ಗ ಸೌಂದರ್ಯದ ಗಣಿಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿರುವ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದೆಂದು ಹೇಳಲಾಗಿದ್ದು, ಆಕರ್ಷಕವಾಗಿರುವ ಈ ದೇವಾಲಯದ ಬಳಿಗೆ ಹೋಗಬೇಕಾದರೆ ಸುಮಾರು 3,600 ಮೆಟ್ಟಿಲನ್ನು ಹತ್ತಿಹೋಗಬೇಕು.[ಪಿರಿಯಾಪಟ್ಟಣದಲ್ಲೊಂದು ಪರಿಸರ ಸ್ನೇಹಿ ಅಂಗನವಾಡಿ!]

Tibetans are devotees of Sidlu Mallikarjuna Temple, Bettadapura hill

ಬುದ್ಧಪೂರ್ಣಿಮೆ ವಿಶೇಷ: ನಿಸರ್ಗದ ಸುಂದರ ದೃಶ್ಯಗಳನ್ನು ಸವಿಯುತ್ತಾ ತೆರಳುತ್ತಿದ್ದರೆ ಮೆಟ್ಟಿಲೇರುವ ಆಯಾಸವೇ ಗೊತ್ತಾಗುವುದಿಲ್ಲ. ಬಹಳಷ್ಟು ಜನ ಬೆಟ್ಟವನ್ನೇರಲೆಂದೇ ಬರುತ್ತಾರೆ. ಅದರಲ್ಲೂ ಟಿಬೆಟಿಯನ್ನರಂತು ಇಲ್ಲಿಗೆ ಲಗ್ಗೆಯಿಡುತ್ತಿರುತ್ತಾರೆ. ಹಬ್ಬದ ಸಂದರ್ಭಗಳಲ್ಲಿ ಅದರಲ್ಲೂ ಬುದ್ಧಪೂರ್ಣಿಮೆಯ ಸಮಯದಲ್ಲಂತು ಸಹಸ್ರಾರು ಸಂಖ್ಯೆಯಲ್ಲಿ ಟಿಬೆಟಿಯನ್ನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನು ಸ್ಥಳೀಯರಲ್ಲದೆ ದೂರದ ಪ್ರವಾಸಿಗರು ಇಲ್ಲಿಗೆ ಬಂದು ಬೆಟ್ಟವನ್ನೇರಿ ಇಲ್ಲಿಂದ ಕಂಡು ಬರುವ ಸುಂದರ ದೃಶ್ಯಗಳನ್ನು ಸವಿದು ತೆರಳುತ್ತಾರೆ.[ಕಬಿನಿಯಲ್ಲಿ ಮುಳುಗಿದ ದೇಗುಲಗಳ ಬಗ್ಗೆ ಗೊತ್ತಾ?]

ಬೆಟ್ಟವನ್ನೇರಿ ನಿಂತು ನೋಡಿದಾಗ ಕಾಣಸಿಗುವ ಸುಂದರ ದೃಶ್ಯಗಳು ಮನಮೋಹಕವಾಗಿರುತ್ತದೆ. ಒಂದೆಡೆ ಮಲೆನಾಡು ಮತ್ತೊಂದೆಡೆ ಅರೆಮಲೆನಾಡು. ಇದೆರಡರ ಸುಂದರ ದೃಶ್ಯಗಳ ಸಮ್ಮಿಲನ ಕಣ್ಣಿಗೆ ರಾಚುತ್ತದೆ. ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು.. ದೂರದಲ್ಲಿ ಹಸಿರನ್ನೊದ್ದು ಮಲಗಿರುವ ಬೆಟ್ಟಶ್ರೇಣಿಗಳು.. ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಮರಗಿಡಗಳು.. ಆಗಾಗ್ಗೆ ಬೀಸಿ ಬರುವ ತಂಪಾದ ಗಾಳಿ.. ಒಂದು ಕ್ಷಣ ತಮ್ಮೆಲ್ಲ ಜಂಜಾಟವನ್ನು ಮರೆಸಿ ಮೈಮನಸ್ಸನ್ನು ಉಲ್ಲಾಸಗೊಳಿಸಿಬಿಡುತ್ತದೆ.

ಬೆಟ್ಟದಪುರ ಎನ್ನುವುದೇ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾದ ಊರು. ಇಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ನೆಲೆ ನಿಂತ ಬೆಟ್ಟವು ಮೈಸೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಎತ್ತರದ ಬೆಟ್ಟ ಎಂದು ಹೇಳಲಾಗಿದೆ. ಹೀಗಾಗಿಯೇ ದೇವರ ದರ್ಶನಕ್ಕೆಂದು ಒಂದಷ್ಟು ಮಂದಿ ಬಂದರೆ ಮತ್ತೊಂದಷ್ಟು ಮಂದಿ ಚಾರಣ ಮಾಡಲು ಬರುತ್ತಾರೆ.

Tibetans are devotees of Sidlu Mallikarjuna Temple, Bettadapura hill

ಇಲ್ಲಿ ಮುಂಜಾನೆ ಕಂಡುಬರುವ ಮಂಜಿನ ಆಟ ಮನಸೆಳೆಯುತ್ತದೆ. ಇಡೀ ಬೆಟ್ಟವನ್ನೇ ಆವರಿಸುವ ಮಂಜು ಮುದ ನೀಡುತ್ತದೆ. ಮಂಜಿನ ತೆರೆಯನ್ನು ಸೀಳಿ ಬಂದು ಸ್ಪರ್ಶಿಸುವ ಸೂರ್ಯ ರಶ್ಮಿ ಮೈಮನವನ್ನು ಪುಳಕಗೊಳಿಸುತ್ತದೆ. ಬೆಟ್ಟದ ಸುತ್ತಲಿನ ಕಾನನದಲ್ಲಿ ಪ್ರಾಣಿಪಕ್ಷಿಗಳು ಬೀಡು ಬಿಟ್ಟಿದ್ದು ಆಗೊಮ್ಮೆ ಈಗೊಮ್ಮೆ ನವಿಲುಗಳು ಭೇಟಿ ನೀಡುವ ಪ್ರವಾಸಿಗರ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸುತ್ತವೆ.

ಇನ್ನು ಹಕ್ಕಿಗಳ ಚಿಲಿಪಿಲಿ, ಪ್ರಶಾಂತ ವಾತಾವರಣ ಮುದನೀಡುತ್ತದೆ. ಮುಂಜಾನೆ ಬೆಟ್ಟವೇರಿದ್ದೇ ಆದರೆ ಸಿಗುವ ಅನುಭವ ವರ್ಣಿಸಲಾಗದ್ದಾಗಿರುತ್ತದೆ. ಸದಾ ಪಟ್ಟಣದ ಗೌಜು ಗದ್ದಲಗಳಿಗೆ ಒಳಗಾಗಿ ಅಯ್ಯೋ ಒಂದಷ್ಟು ಸಮಯವನ್ನಾದರೂ ಪ್ರಶಾಂತ ಸ್ಥಳದಲ್ಲಿ ಕಳೆದು ಬರೋಣ ಎಂದು ಯೋಚಿಸುವ ಮಂದಿ ಧಾರಾಳವಾಗಿ ಶಿಡ್ಲಮಲ್ಲಿಕಾರ್ಜುನ ಬೆಟ್ಟಕ್ಕೆ ಹೋಗಿ ಬರಬಹುದು.

English summary
ASI protected monument Sidlu Mallikarjuna Temple, Bettadapura hill in Piriyapatnada has more number of Tibetan devotees than Hindu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X